ಕಾರ್ಪೊರೇಷನ್ ಬ್ಯಾಂಕ್​ ATMನಲ್ಲಿ ಜ್ಯೋತಿ ಉದಯ್​ ಮೇಲೆ ಹಲ್ಲೆ ಪ್ರಕರಣ: ಆರೋಪಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲುಶಿಕ್ಷೆ

Feb 3, 2021

2013ರಲ್ಲಿ ನಗರದ ಕಾರ್ಪೊರೇಷನ್ ಬ್ಯಾಂಕ್​ ATMನಲ್ಲಿ ಜ್ಯೋತಿ ಉದಯ್​ ಎಂಬ ಬ್ಯಾಂಕ್​ ಮ್ಯಾನೇಜರ್ ಮೇಲೆ ಭೀಕರವಾಗಿ ಹಲ್ಲೆಗೈದಿದ್ದ ಆರೋಪಿ ಮಧುಕರ್ ರೆಡ್ಡಿಗೆ ಜೈಲುಶಿಕ್ಷೆಯಾಗಿದೆ.

ಬೆಂಗಳೂರು: 2013ರಲ್ಲಿ ನಗರದ ಕಾರ್ಪೊರೇಷನ್ ಬ್ಯಾಂಕ್​ ATMನಲ್ಲಿ ಜ್ಯೋತಿ ಉದಯ್​ ಎಂಬ ಬ್ಯಾಂಕ್​ ಮ್ಯಾನೇಜರ್ ಮೇಲೆ ಭೀಕರವಾಗಿ ಹಲ್ಲೆಗೈದಿದ್ದ ಆರೋಪಿ ಮಧುಕರ್ ರೆಡ್ಡಿಗೆ ಜೈಲುಶಿಕ್ಷೆಯಾಗಿದೆ.

ಅಪರಾಧಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲುಶಿಕ್ಷೆ ಪ್ರಕಟವಾಗಿದೆ. ನಗರದ 65ನೇ ಸಿಸಿಹೆಚ್ ಕೋರ್ಟ್‌ನಿಂದ ಶಿಕ್ಷೆ ಪ್ರಕಟವಾಗಿದೆ. ದರೋಡೆ ಆರೋಪದಡಿ 10 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್​ ಸಾಕ್ಷ್ಯ ನಾಶ ಮಾಡಿದ್ದಕ್ಕೆ 2 ವರ್ಷ ಶಿಕ್ಷೆ ಸಹ ವಿಧಿಸಿದೆ. ಆದರೆ, ಎರಡೂ ಶಿಕ್ಷೆಯನ್ನು ಜೊತೆಯಲ್ಲೇ ಅನುಭವಿಸಬೇಕಾಗಿರುವುದರಿಂದ ಮಧುಕರ್​ ರೆಡ್ಡಿ ಗರಿಷ್ಟ 10 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಬೇಕು.

ಅಂದ ಹಾಗೆ, ಮಧುಕರ್ ರೆಡ್ಡಿ ಈಗಾಗಲೇ 3 ವರ್ಷ ಜೈಲಿನಲ್ಲಿ ಕಳೆದಿದ್ದಾನೆ. ಹಾಗಾಗಿ, ಆತ ಉಳಿದ 7 ವರ್ಷ ಜೈಲಿನಲ್ಲಿ ಕಳೆಯಬೇಕಿದೆ.

ಆರೋಪಿ ಮಧುಕರ್​ ರೆಡ್ಡಿ 2013ರ ನ.19ರಂದು ನಗರದ ಕಾರ್ಪೊರೇಷನ್​ ಬ್ಯಾಂಕ್​ ATMನಲ್ಲಿ ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ಮಾಡಿದ್ದ. ಇದೀಗ, ಘಟನೆ ನಡೆದು 8 ವರ್ಷಗಳ ನಂತರ ಅಪರಾಧಿಗೆ ಜೈಲು ಶಿಕ್ಷೆಯಾಗಿದೆ.

‘ನಾನು ಆ ATM ಕಡೆ ಈಗಲೂ ಹೋಗುತ್ತಿಲ್ಲ’
ಇನ್ನು, ಆರೋಪಿ ಮಧುಕರ್​ ರೆಡ್ಡಿಗೆ ಶಿಕ್ಷೆಯಾದ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿದ ಬ್ಯಾಂಕ್​ ಮ್ಯಾನೇಜರ್​ ಜ್ಯೋತಿ ಉದಯ್​ ಅವರು ಇವತ್ತು ನನಗೆ ತುಂಬಾ ಖುಷಿಯಾಗ್ತಿದೆ. ಕೊನೆಗೂ ಆತನಿಗೆ ಶಿಕ್ಷೆಯಾಗಿದೆ. ಆದರೆ, ಅಪರಾಧಿ ಮಧುಕರ್​ ರೆಡ್ಡಿಗೆ ಇನ್ನೂ ಕಠಿಣ ಶಿಕ್ಷೆ ಆಗಬೇಕಿತ್ತು. ನ್ಯಾಯಾಲಯದ ತೀರ್ಪನ್ನು ನಾನು ಗೌರವಿಸುತ್ತೇನೆ. ಆದರೆ, ಇನ್ನೂ ಕಠಿಣ ಶಿಕ್ಷೆ ಆಗಬಹುದು ಎಂಬ ನಿರೀಕ್ಷೆ ಇತ್ತು ಎಂದು ಹೇಳಿದರು.

ಜೊತೆಗೆ, ಈ ರೀತಿ ಯಾರು ಮಾಡಬಾರದು. ನಾನು ಆ ATM ಕಡೆ ಈಗಲೂ ಹೋಗುತ್ತಿಲ್ಲ ಎಂದು ಹೇಳಿದರು. ಜೊತೆಗೆ, ಮಹಿಳೆಯರು ATMಗೆ ಹೋಗುವಾಗ ತುಂಬಾ ಹುಷಾರಾಗಿರಿ ಎಂಬ ಸಲಹೆ ಸಹ ನೀಡಿದ್ದಾರೆ.

Source: TV9Kannada