Devaraja Market: ದೇವರಾಜ ಮಾರುಕಟ್ಟೆ ನೆಲಸಮವಾಗುತ್ತಾ? ಪಾರಂಪರಿಕ ತಜ್ಞರ ಸಮಿತಿ ಕೋರ್ಟ್​ಗೆ ಸಲ್ಲಿಸಿದ ವರದಿ ಏನು?

Feb 6, 2021

ಸಾಂಸ್ಕೃತಿಕ ನಗರಿ ಮೈಸೂರಿಗೆ ತನ್ನದೆಯಾದ ಪರಂಪರೆ, ಇತಿಹಾಸ ಇದೆ. ಈ ಇತಿಹಾಸ ಹಾಗೂ ಪರಂಪರೆಯ ರೂಪಕವಾಗಿ ಪಾರಂಪರಿಕ ಕಟ್ಟಡಗಳಿವೆ. ಈ‌ ಪಾರಂಪರಿಕ ಕಟ್ಟಡಗಳಲ್ಲಿ ಲ್ಯಾನ್ಸ್ ಡೌನ್ ಹಾಗೂ ದೇವರಾಜ ಮಾರುಕಟ್ಟೆ ಶಿಥಿಲವಸ್ಥೆ ತಲುಪಿ ಕುಸಿಯುತ್ತಿದೆ. ಇದು ಸಾರ್ವಜನಿಕರ ಭಯಕ್ಕೆ ಕಾರಣವಾಗಿದೆ.

ಮೈಸೂರು: ಪಾರಂಪರಿಕ ನಗರಿ, ಸಾಂಸ್ಕೃತಿಕ ನಗರಿ ಅನ್ನೋ ಖ್ಯಾತಿಯನ್ನ ಪಡೆದ ನಗರ. ಕಲೆ, ಸಂಸ್ಕೃತಿ , ಪಾರಂಪರಿಕ ಕಟ್ಟಡಗಳಿಂದಲೇ ವಿಶ್ವವೇ ಮೈಸೂರನ್ನ ಬೆರಗುಗಣ್ಣಿನಿಂದ ನೋಡುತ್ತಿದೆ. ಇಂತಹ ಮೈಸೂರಿನ ಹೃದಯ ಭಾಗದಲ್ಲಿರುವ ಮೂರುವರೆ ಎಕ್ಕರೆ ವಿಸ್ತೀರ್ಣದಲ್ಲಿ ಗಮನ ಸೆಳೆಯುವ ಕಟ್ಟಡವೇ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡ.

ಈ ಕಟ್ಟಡಗಳಿಗೆ 120 ವರ್ಷ ಇತಿಹಾಸ ಇದೆ. ಆದರೆ ಕೆಲ ವರ್ಷಗಳ ಹಿಂದೆ ಲ್ಯಾನ್ಸ್ ಡೌನ್ ಕಟ್ಟಡ ಕುಸಿದು ಸಾವುನೋವು ಸಂಭವಿಸಿತ್ತು. ಇದಾದ ಬಳಿಕ ದೇವರಾಜ‌ ಮಾರುಕಟ್ಟೆಯ ಕಟ್ಟಡ ಸಹ ಕುಸಿಯುತ್ತಲೆೇ ಇದೆ. ಇದ್ರಿಂದ ಈ‌ ಕಟ್ಟಡವನ್ನು ನೆಲಸಮ‌ ಮಾಡಿ ಹೊಸದಾಗಿ‌ ಕಟ್ಟಡ ಕಟ್ಟಲು ಸರ್ಕಾರದ ಮುಂದೆ ಪ್ರಸ್ತಾವನೆ ಇತ್ತು. ಈ ವಿಚಾರವಾಗಿ ಪಾಲಿಕೆಯಲ್ಲೂ ನಿರ್ಣಯ ಕೈಗೊಳ್ಳಲಾಗಿತ್ತು. ಆದ್ರೆ ಪಾರಂಪರಿಕ ಕಟ್ಟಡವನ್ನು ನೆಲಸಮ‌ ಮಾಡಲು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದಕ್ಕಾಗಿ ಪಾರಂಪರಿಕ ತಜ್ಞರ ಸಮಿತಿ ರಚಿಸಿ ವರದಿ‌ ನೀಡಲು ಕೇಳಲಾಗಿತ್ತು. ಸದ್ಯ ಇಲಾಖೆ ವರದಿಯನ್ನು ನೀಡಿದ್ದು, ಕಟ್ಟಡ ಗಟ್ಟಿಯಾಗಿಲ್ಲ ಇದನ್ನು ಪುನರ್ ನಿರ್ಮಾಣಮಾಡಬೇಕು ಎಂದು ವರದಿ ನೀಡಿದೆ. ಆದರೆ ವ್ಯಕ್ತಿಯೊಬ್ಬರು ಕೋರ್ಟ್‌ ಮೆಟ್ಟಿಲೇರಿದ್ದು, ಇದನ್ನ ಏನು ಮಾಡಬೇಕು ಅಂತ ತೀರ್ಪು ಬಂದ ನಂತರ ತೀರ್ಮಾನ ಮಾಡಲಾಗುವುದು.

ಸದ್ಯ ದೇವರಾಜ ಮಾರುಕಟ್ಟೆಯಲ್ಲಿ ಸಾವಿರಾರು ಜನ ಓಡಾಡುತ್ತಿದ್ದು ಈ ಸ್ಥಳ ಯಾವಾಗಲು ಜನರಿಂದ ಗಿಜುಗುಡುತ್ತಲೆೇ ಇರುತ್ತಾದೆ. ಇಂತಹ ಸಂದರ್ಭದಲ್ಲಿ ಏನಾದ್ರೂ ಅನಾಹುತ ಸಂಭವಿಸಿದ್ರೆ ಯಾರು ಹೊಣೆ ಅನ್ನೋದು ಸಾರ್ವಜನಿಕರ ಪ್ರಶ್ನೆ.

ಒಟ್ನಲ್ಲಿ ಪಾರಂಪರಿಕ ಕಟ್ಟಡಗಳನ್ನ ಮುಂದಿನ ಪೀಳಿಗೆಗೆ ಉಳಿಸಬೇಕಾದ್ದು ಪಾಲಿಕೆ ಹಾಗೂ ಸರ್ಕಾರದ ಕೆಲಸ. ಆದ್ರೆ ಸರಿಯಾಗಿ ಇದನ್ನ ನಿರ್ವಹಣೆ ಮಾಡದಿರೋದ್ರಿಂದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ನಗರದಲ್ಲಿರುವ ಪಾರಂಪರಿಕ ಕಟ್ಟಡಗಳನ್ನ ಇನ್ನಾದ್ರೂ ಸರಿಯಾಗಿ ನಿರ್ವಹಣೆ ಮಾಡಬೇಕಿದೆ

Source:TV9 Kannada