ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿ ನಿಗೂಢ ಸಾವು

Aug 3, 2021

ಬೆಂಗಳೂರು: ಜುಲೈ 26 ರಂದು ರೈಲು ಹಳಿ ಬಳಿಯ ಪೊದೆಯೊಂದರ ಹತ್ತಿರ ಶವವಾಗಿ ಪತ್ತೆಯಾಗಿದ್ದ ವೈದ್ಯಕೀಯ ವಿದ್ಯಾರ್ಥಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಯುವಕನ ಸಾವಿನ ರಹಸ್ಯ ನಿಗೂಢವಾಗಿಯೇ ಉಳಿದಿದೆ. ಒಂದು ವಾರ ಕಳೆದರೂ ಸಾವಿನ ಬಗ್ಗೆ ಪೊಲೀಸರಿಗೆ ಯಾವ ಸತ್ಯವೂ ತಿಳಿಯುತ್ತಿಲ್ಲ. ಕೊಲೆಯೋ, ಆತ್ಮಹತ್ಯೆಯೋ ಎಂಬುದರ ಬಗ್ಗೆ ಬೆಂಗಳೂರು ದಂಡು ರೈಲ್ವೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಘಟನೆ ವಿವರ:
ಜುಲೈ 26, 2021 ರಂದು ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಕಸ್ತೂರಿ ನಗರ ಮತ್ತು ವಿಜಿನಾಪುರ ನಡುವಿನ ರೈಲು ಹಳಿ ಪಕ್ಕದ ಪೊದೆಯೊಂದರ ಹತ್ತಿರ ಸೈಯದ್ ಹುಮೈದ್ ಅಹಮದ್ ಎಂಬ ವೈದ್ಯಕೀಯ ವಿದ್ಯಾರ್ಥಿಯ ಶವ ಪತ್ತೆಯಾಗಿತ್ತು. ಈ ಸಾವಿನ ರೀತಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಸೈಯದ್ ಹುಮೈದ್ ಅಹಮದ್ ಮೃತ ದೇಹ ವಿವಸ್ತ್ರನಾದ ರೀತಿಯಲ್ಲಿ ಪತ್ತೆಯಾಗಿತ್ತು. ತನಿಖೆ ವೇಳೆ ವಿದ್ಯಾರ್ಥಿ ಕತ್ತು ಮತ್ತು ಮರ್ಮಾಂಗದ ಬಳಿ ಚಾಕುವಿನಿಂದ ಇರಿದ ಗಾಯ ಪತ್ತೆಯಾಗಿದೆ. ತಾನೇ ಆತ್ಮಹತ್ಯೆಗೆ ಶರಣಾಗಿದ್ದಾನಾ ಅಥವಾ ಕೊಲೆಯೋ ಎಂಬುದು ಇನ್ನೂ ನಿಗೂಢವಾಗಿ ಉಳಿದಿದೆ. ವಿದ್ಯಾರ್ಥಿ ಬಳಿಯಿದ್ದ ಲ್ಯಾಪ್ ಟಾಪ್, ಮೊಬೈಲ್ ಸಹ ನಾಪತ್ತೆಯಾಗಿದೆ. ಹೀಗಾಗಿ ಯಾರಾದರೂ ಸುಲಿಗೆ ಮಾಡಿ ಕೊಲೆ ಮಾಡಿದ್ದಾರ ಎಂಬ ಬಗ್ಗೆ ಮತ್ತೊಂದು ಅನುಮಾನ ವ್ಯಕ್ತವಾಗುತ್ತಿದೆ.

ಕಳೆದ ಒಂದು ವಾರದಿಂದ ನಿಗೂಢ ಸಾವಿನ ಬಗ್ಗೆ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಸೈಯದ್ ಆರ್ಟಿ ನಗರದ ನಿವಾಸಿಯಾಗಿದ್ದು ಹುಬ್ಬಳ್ಳಿಯ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಬಕ್ರೀದ್ ಆಚರಿಸಲು ಜುಲೈ 20 ರಂದು ಬೆಂಗಳೂರಿಗೆ ಬಂದಿದ್ದ. ಬಳಿಕ ಹಬ್ಬ ಮುಗಿಸಿ 24ನೇ ತಾರೀಕು ಹಾಸ್ಟೆಲ್ಗೆ ತೆರಳೋದಾಗಿ ಮನೆಯಿಂದ ಹೊರಟಿದ್ದ. ನಂತರ ರಾಮಮೂರ್ತಿನಗರದಲ್ಲಿ ಹೊಟೇಲ್ನಲ್ಲಿ ರೂಂ ಬುಕ್ ಮಾಡಿರುವುದು ಪತ್ತೆಯಾಗಿದೆ.

ಜುಲೈ 26 ರಂದು ರೈಲು ಹಳಿ ಬಳಿಯ ಪೊದೆಯೊಂದರ ಹತ್ತಿರ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ಸಾಕಷ್ಟು ಸಿಸಿಟಿವಿಗಳ ದೃಶ್ಯ ಸಂಗ್ರಹಿಸಿದ್ದಾರೆ. ಮನೆಯ ಸುತ್ತಮುತ್ತ, ರಾಮಮೂರ್ತಿನಗರ ಬಳಿ ಓಡಾಡಿರುವ ಸಿಸಿಟಿವಿ ಸಂಗ್ರಹ ಮಾಡಲಾಗಿದೆ. ಆದ್ರೆ ಸಾವಿಗೆ ಕಾರಣ ಮಾತ್ರ ಇನ್ನೂ ತಿಳಿದು ಬಂದಿಲ್ಲ.

Source: Tv9 kannada