Shreyas Iyer: ದ್ವಿತೀಯ ಟೆಸ್ಟ್​ಗೆ ಭಾರತದ ಸ್ಟಾರ್ ಬ್ಯಾಟ್ಸ್​ಮನ್​ ಕಮ್​ಬ್ಯಾಕ್?: ಫಿಟ್ನೆಸ್ ಟೆಸ್ಟ್ ಪಾಸ್ ಆಗಲು ಹರಸಾಹಸ

Feb 13, 2023

India vs Australia 2nd Test: ಇಂಜುರಿಯಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ನಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್ ಇದೀಗ ಎರಡನೇ ಟೆಸ್ಟ್​ಗೆ ಭಾರತ ತಂಡ ಸೇರಿಕೊಳ್ಳಲು ತಯಾರಾಗಿದ್ದಾರೆ.

ಬಾರ್ಡರ್- ಗವಾಸ್ಕರ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಗೆದ್ದು ಬೀಗಿರುವ ಭಾರತ ಇದೀಗ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಪ್ರಥಮ ಪಂದ್ಯದಲ್ಲಿ ಜಡೇಜಾ- ಅಶ್ವಿನ್ ಸ್ಪಿನ್ ದಾಳಿಗೆ ನಲುಗಿದ ಕಾಂಗರೂ ಪಡೆ ಅಲ್ಪ ಮೊತ್ತಕ್ಕೆ ಆಲೌಟ್ ಆಗಿತ್ತು. ಟೀಮ್ ಇಂಡಿಯಾ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಆದರೆ, ಬ್ಯಾಟಿಂಗ್​ನಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಿದೆ.

ಮೊದಲ ಟೆಸ್ಟ್​ನಲ್ಲಿ ರೋಹಿತ್ ಶರ್ಮಾ, ಜಡೇಜಾ ಹಾಗೂ ಅಕ್ಷರ್ ಪಟೇಲ್ ಬಿಟ್ಟರೆ ಇತರೆ ಬ್ಯಾಟರ್​ಗಳು ವೈಫಲ್ಯ ಅನುಭವಿಸಿದರು. ಹೀಗಾಗಿ ಮತ್ತೊಬ್ಬ ಬ್ಯಾಟರ್ ಅನ್ನು ತಂಡಕ್ಕೆ ಸೇರಿಸಿಕೊಳ್ಳಲು ರೋಹಿತ್ ಪಡೆ ಮುಂದಾಗಿದೆ. ಅವರೇ ಶ್ರೇಯಸ್ ಅಯ್ಯರ್.

ಇಂಜುರಿಯಿಂದಾಗಿ ಮೊದಲ ಟೆಸ್ಟ್​ನಿಂದ ಹೊರಬಿದ್ದಿದ್ದ ಅಯ್ಯರ್ ಇದೀಗ ಎರಡನೇ ಟೆಸ್ಟ್​ಗೆ ಭಾರತ ತಂಡ ಸೇರಿಕೊಳ್ಳಲು ತಯಾರಾಗಿದ್ದಾರೆ. ಸದ್ಯ ಅಯ್ಯರ್ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆದು ಫಿಟ್​ನೆಸ್ ಪರೀಕ್ಷೆಗೆ ಕಾದುಕುಳಿತಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದ ಅಯ್ಯರ್ ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಹೊತ್ತಿಗೆ ಗುಣಮುಖರಾಗಿರಲಿಲ್ಲ. ಹೀಗಾಗಿ ಇವರನ್ನು ಎರಡನೇ ಟೆಸ್ಟ್​ನಿಂದ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿತ್ತು.

ಇದೀಗ ಸಂಪೂರ್ಣ ಗುಣಮುಖರಾಗಿರುವ ಅಯ್ಯರ್ ಮಂಗಳವಾರ ಫಿಟ್​ನೆಸ್ ಪರೀಕ್ಷೆಗೆ ಒಳಪಡಲಿದ್ದಾರೆ. ಇದರಲ್ಲಿ ತೇರ್ಗಡೆ ಹೊಂದಿದರೆ ಗುರುವಾರ ದೆಹಲಿಗೆ ಪ್ರಯಾಣ ಬೆಳೆಸಿ ತಂಡ ಸೇರಿಕೊಳ್ಳಲಿದ್ದಾರೆ. ಇವರು ಪ್ಲೇಯಿಂಗ್ ಇಲೆವೆನ್​ನಲ್ಲೂ ಸ್ಥಾನ ಪಡೆಯುವುದು ಬಹತೇಕ ಖಚಿತವಾಗಿದೆ.

ಮೊದಲ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡಿದ್ದ ಇಬ್ಬರು ಪ್ಲೇಯರ್ಸ್ ಸೂರ್ಯಕುಮಾರ್ ಯಾದವ್ ಹಾಗೂ ಕೆಎಸ್ ಭರತ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇವರಿಬ್ಬರ ಪೈಕಿ ಒಬ್ಬರ ಜಾಗ ಅಯ್ಯರ್ ತುಂಬಲಿದ್ದಾರೆ.

ಭಾರತ ಪರ ಇದುವರೆಗೆ 7 ಟೆಸ್ಟ್​ ಪಂದ್ಯಗಳಲ್ಲಿ 12 ಇನಿಂಗ್ಸ್ ಆಡಿರುವ ಅಯ್ಯರ್ 65ರ ಸರಾಸರಿಯಲ್ಲಿ ಒಟ್ಟು 624 ರನ್ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 5 ಅರ್ಧಶತಕಗಳನ್ನು ಬಾರಿಸಿದ್ದರು. ಈ ಮೂಲಕ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಪಂದ್ಯ ಫೆಬ್ರವರಿ 17 ರಿಂದ ಫೆಬ್ರವರಿ 21 ರವರೆಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದಿರುವುದರಿಂದ ಟೀಮ್ ಇಂಡಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

 
Source: TV9KANNADA