ಮೈಸೂರು ಗ್ರಾಮಾಂತರ: ಟೋಕನ್ ವ್ಯವಸ್ಥೆಯಿಂದ ರಾಗಿ, ಭತ್ತ ಖರೀದಿ ಪ್ರಕ್ರಿಯೆ ಸುಗಮ

Feb 11, 2023

ಪಿರಿಯಾಪಟ್ಟಣ: ರಾಗಿ ಹಾಗೂ ಭತ್ತ ಖರೀದಿ ಕೇಂದ್ರಗಳಲ್ಲಿಈ ಬಾರಿ ಟೋಕನ್‌ ವ್ಯವಸ್ಥೆ ಜಾರಿಗೊಳಿಸಿರುವುದರಿಂದ ಖರೀದಿ ಪ್ರಕ್ರಿಯೆ ಸುಗಮವಾಗಿದೆ. ಆದರೆ, ಚೀಲ ನೀಡುವ ವ್ಯವಸ್ಥೆ ತೊಂದರೆಗೀಡು ಮಾಡಿದೆ. ಕಳೆದ ಬಾರಿ ಏಕಕಾಲದಲ್ಲಿ ಅನೇಕ ರೈತರು ಲೋಡ್‌ಗಟ್ಟಲೇ ರಾಗಿ ತಂದು 2-3 ದಿನ ರಾಗಿ ಖರೀದಿ ಕೇಂದ್ರದಲ್ಲಿ ಕಾದು ಕುಳಿತು ಗಲಾಟೆಗಳಾಗಿದ್ದವು. ಈ ಬಾರಿ ಇದನ್ನು ತಪ್ಪಿಸುವ ಸಲುವಾಗಿ ಟೋಕನ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ನೋಂದಣಿಯಾದ ರೈತರಿಗೆ ರಾಗಿ ಮಾರಾಟದ ದಿನಾಂಕವನ್ನು ಮೊದಲೇ ತಿಳಿಸುವುದರಿಂದ ಅವರು ಅಂದೆ ಬಂದು ರಾಗಿ ನೀಡಬಹುದು.

ರಾಗಿ ಖರೀದಿಯ ನಂತರ ರೈತರ ಅಕೌಂಟ್‌ಗಳಿಗೆ ಹಣ ಜಮೆಯಾಗಲು ಒಂದು ತಿಂಗಳಾಗುತ್ತಿತ್ತು. ಈ ಬಾರಿ ಮತ್ತಷ್ಟು ವಿಳಂಬವಾಗಲಿದೆ. ಇದಕ್ಕೆ ಕಾರಣ ಹೊಸ ಪದ್ಧತಿಯಾಗಿದ್ದು, ಹಣ ಬಿಡುಗಡೆ ಹೊಸ ವಿಧಾನವನ್ನು ಅನುಸರಿಸುತ್ತಿರುವುದರಿಂದ ಹಣ ಜಮೆಯಾಗುವುದು ಮತ್ತಷ್ಟು ವಿಳಂಬವಾಗಲಿದೆ.

ಕೃಷಿ ಮಾರಾಟ ಮಂಡಳಿ

ಜಿಲ್ಲೆಯಲ್ಲಿ ಈಗಾಗಧಲೇ ನೋಂದಣಿಯಾದ ಸಣ್ಣ ಮತ್ತು ಅತಿಸಣ್ಣ ರೈತರಿಂದ ಮಾತ್ರ ರಾಗಿ, ಭತ್ತಗಳನ್ನು ಪ್ರಸಕ್ತ ವರ್ಷದಲ್ಲಿಬೆಳೆದದ್ದನ್ನು ಮಾತ್ರ ಖರೀದಿಸಲಾಗುತ್ತಿದೆ. ಜಿಲ್ಲೆಯ 7 ತಾಲೂಕುಗಳಿಂದ ಒಟ್ಟು 14 ರಾಗಿ ಮತ್ತು ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಒಂದೇ ಕೇಂದ್ರದಲ್ಲಿರಾಗಿ ಮತ್ತು ಭತ್ತವನ್ನು ಖರೀದಿಸಲಾಗುತ್ತಿದೆ. 7 ತಾಲೂಕುಗಳಿಂದ ರಾಗಿ ಖರೀದಿಗೆ 39,472 ರೈತರು ನೋಂದಣಿ ಮಾಡಿಸಿದ್ದು, 623167.5 ಕ್ವಿಂಟಾಲ್‌ನಷ್ಟು ರಾಗಿ ಖರೀದಿಸಲಾಗುತ್ತಿದೆ. ಭತ್ತ ಖರೀದಿಗೆ 11868 ರೈತರು ನೋಂದಣಿ ಮಾಡಿದ್ದು, 365497 ಕ್ವಿಂಟಾಲ್‌ನಷ್ಟು ಭತ್ತ ಖರೀದಿ ಮಾಡಲಾಗುತ್ತಿದೆ.

ಒಟ್ಟಾರೆ ರಾಗಿಯಲ್ಲಿ ಅತಿಹೆಚ್ಚು ಅಂದರೆ ಪಿರಿಯಾಪಟ್ಟಣದಿಂದ 18218 ರೈತರು ನೋಂದಣಿಯಾಗಿದ್ದು, ನಂಜನಗೂಡಿಯಲ್ಲಿ ಇಬ್ಬರು ರೈತರು ಮಾತ್ರ ನೋಂದಣಿಯಾಗಿದ್ದಾರೆ. ಭತ್ತದಲ್ಲಿ ಕೃಷ್ಣರಾಜನಗರದಿಂದ 7820 ರೈತರು 236086 ಕ್ವಿಂಟಾಲ್‌ ಭತ್ತ ಖರೀದಿಗೆ ನೋಂದಣಿ ಮಾಡಿದ್ದಾರೆ. ಹೆಗ್ಗಡದೇವನಕೋಟೆಯಲ್ಲಿ 81 ರೈತರಿಂದ 2774 ಕ್ವಿಂಟಾಲ್‌ ಭತ್ತ ಖರೀದಿಗೆ ನೋಂದಣಿ ಮಾಡಿಸಲಾಗಿದೆ. ಭತ್ತ ಪ್ರತಿ ಕ್ವಿಂಟಾಲ್‌ಗೆ 2040 ರೂ. ಹಾಗೂ ರಾಗಿಯನ್ನು ಪ್ರತಿ ಕ್ವಿಂಟಾಲ್‌ಗೆ 3578 ರೂ. ನೀಡಿ ಖರೀದಿಸಲಾಗುತ್ತಿದೆ.

ಚೀಲದ್ದೇ ಹೊಸ ಸಂಕಷ್ಟ

ಈ ಹಿಂದೆ ರೈತರಿಗೆ ಚೀಲಗಳನ್ನು ಕೇಂದ್ರದಿಂದಲೇ ನೀಡಲಾಗುತ್ತಿತ್ತು. ಅದರಲ್ಲಿರೈತರು ರಾಗಿಯನ್ನು ತಂದು ಗುಣಮಟ್ಟ ಪರೀಕ್ಷೆ ಬಳಿಕ ಮಾರಾಟ ಮಾಡುತ್ತಿದ್ದರು. ಆದರೆ, ಈಗ ರೈತರೇ ತಮ್ಮ ಚೀಲಗಳಲ್ಲಿರಾಗಿ ತೆಗೆದುಕೊಂಡು ಹೋಗಿ ಗುಣಮಟ್ಟ ಪರೀಕ್ಷೆಗೆ ನೀಡಬೇಕು. ಅಲ್ಲಿಪಾಸಾದರೆ ಪುನಃ ಖರೀದಿ ಕೇಂದ್ರದಿಂದ ನೀಡುವ ಚೀಲದಲ್ಲಿರಾಗಿ ತುಂಬಿ ಕೊಡಬೇಕಿದೆ. ಇದು ರೈತರಿಗೆ ಹೆಚ್ಚುವರಿ ಕೆಲಸ ತಂದಿಟ್ಟು ಹೊಸ ಸಂಕಟ ಎದುರಿಸುವಂತೆ ಮಾಡಿದೆ. ಹಳೆ ಪದ್ಧತಿಯಲ್ಲೇ ಖರೀದಿ ಮಾಡಬೇಕು ಎಂಬುದು ರೈತರ ಆಗ್ರಹ. ಬೆಂಬಲ ಬೆಲೆಯಲ್ಲಿಕೊಂಡ ರಾಗಿಯನ್ನೇ ಪಡಿತರ ರೂಪದಲ್ಲಿಜನರಿಗೆ ನೀಡಲಾಗುತ್ತದೆ. ಆದ್ದರಿಂದ ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿಸಲಾಗುತ್ತಿದೆ.

 
Source: TV9KANNADA