Narendra Modi: ವಿಪಕ್ಷ ನಾಯಕ ಗುಲಾಂ​ ನಬೀ ಆಜಾದ್​​ಗೆ ವಿದಾಯ: ಭಾಷಣದ ವೇಳೆ ಕಣ್ಣೀರಿಟ್ಟ ಪ್ರಧಾನಿ ನರೇಂದ್ರ ಮೋದಿ

Feb 9, 2021

Narendra Modi Cries in RS: ರಾಜಕೀಯ ನಾಯಕರಾಗಿ ಒಂದೇ ಅಲ್ಲದೇ, ಸ್ನೇಹಿತನಾಗಿಯೂ ಗುಲಾಂ ನಬೀ ಆಜಾದ್​ರನ್ನು ಸ್ಮರಿಸುತ್ತೇನೆ. ಪ್ರೀತಿಯಿಂದ ಗೌರವಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾಷ್ಪಭರಿತರಾಗಿ ಹೇಳಿದರು.

ರಾಜ್ಯಸಭಾ ವಿಪಕ್ಷ ನಾಯಕ ಗುಲಾಂ ನಬೀ ಆಜಾದ್ ವಿದಾಯ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಕಣ್ಣೀರಿಟ್ಟರು.

ದೆಹಲಿ: ರಾಜ್ಯಸಭೆ (Rajya Sabha) ಇಂದು ಅನನ್ಯ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಅವಧಿ ಮುಕ್ತಾಯಗೊಂಡ ನಾಲ್ವರು ರಾಜ್ಯಸಭಾ ಸದಸ್ಯರ ವಿದಾಯ ಕಾರ್ಯಕ್ರಮದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾವುಕರಾಗಿ ಕಣ್ಣೀರಾದರು. ಅವರ ಮಾತುಗಳನ್ನು ಆಲಿಸಿ ಇಡೀ ರಾಜ್ಯಸಭೆಯೇ   ಭಾವುಕವಾಯಿತು. ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬೀ ಆಜಾದ್(Ghulam Nabi Azad),ಮತ್ತು ಜಮ್ಮು ಮತ್ತು ಕಾಶ್ಮೀರದ ಮೂವರು ಸಂಸದರ ರಾಜ್ಯಸಭಾ ಅವಧಿ ಮುಕ್ತಾಯವಾಗಲಿದ್ದು, ವಿದಾಯದ ಸಂದರ್ಭದಲ್ಲಿ  ರಾಜ್ಯಸಭೆಯಲ್ಲಿ ಈ ಘಟನೆ ನಡೆಯಿತು. ಗುಲಾಂ ನಬೀ ಆಜಾದ್ ಅವರನ್ನು ಹತ್ತಿರದಿಂದ ಬಲ್ಲ ಹಲವು ನಾಯಕರು ತಮ್ಮ ನೆನಪುಗಳನ್ನು ಹಂಚಿಕೊಂಡರು.

ಗುಲಾಂ ನಬೀ ಆಜಾದ್​ರಂತಹ ವಿಪಕ್ಷ ನಾಯಕರು ಸಿಗುವುದು ವಿರಳಾತಿ ವಿರಳ. ಅವರು ತಮ್ಮ ಪಕ್ಷದ ಬಗ್ಗೆ ಮಾತ್ರ ಚಿಂತಿಸುತ್ತಿರಲಿಲ್ಲ. ವಿಪಕ್ಷ ನಾಯಕರಾಗಿ ದೇಶದ ಬಗ್ಗೆಯೂ ಚಿಂತಿಸಿದ್ದರು. ದೇಶವನ್ನು ಮುನ್ನಡೆಸುವ ನಿಟ್ಟಿನಲ್ಲಿ ಸರ್ಕಾರದ ಜತೆಗೆ ವಿಪಕ್ಷದ ಹೆಗಲು ನೀಡುತ್ತಿದ್ದರು. ರಾಜಕೀಯ ನಾಯಕರಾಗಿ ಒಂದೇ ಅಲ್ಲದೇ, ಸ್ನೇಹಿತನಾಗಿಯೂ ಅವರನ್ನು ಸ್ಮರಿಸುತ್ತೇನೆ. ಪ್ರೀತಿಯಿಂದ ಗೌರವಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾಷ್ಪಭರಿತರಾಗಿ ಹೇಳಿದರು.

ಅವಧಿ ಮುಗಿಯುತ್ತಿರುವ ರಾಜ್ಯಸಭಾ ಸದಸ್ಯರ ಕಾರ್ಯವೈಖರಿಯನ್ನು ಶ್ಲಾಘಿಸಿ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಕಣ್ಣೀರಿಟ್ಟರು. ಗುಲಾಂ ನಬೀ ಆಜಾದ್ ವಿವಿಧ ಸಂದರ್ಭಗಳಲ್ಲಿ ಕೈಗೊಂಡ ನಿರ್ಧಾರಗಳನ್ನು ಪ್ರಸ್ತಾಪಿಸಿ ಮಾತನಾಡುವಾಗ ಜಮ್ಮು-ಕಾಶ್ಮೀರದಲ್ಲಿ ನಡೆದಿದ್ದ ಉಗ್ರರ ದಾಳಿ ವೇಳೆ ಗುಲಾಂ ನಬೀ ಆಜಾದ್ ನೀಡಿದ್ದ ಸಹಕಾರ ಪ್ರಸ್ತಾಪಿಸಿದರು. ತಾವು ಗುಜರಾತ್​ನ ಮುಖ್ಯಮಂತ್ರಿ ಆಗಿದ್ದಾಗ ಗುಜರಾತ್​ನ ಪ್ರವಾಸಿಗರನ್ನು ಜಮ್ಮು ಕಾಶ್ಮೀರದಲ್ಲಿ ಉಗ್ರರು ಬಂದಿಸಿದ್ದರು. ಆಗ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಆದವರು ಗುಲಾಂ ನಬೀ ಆಜಾದ್. ಅಂದು ಅವರು ನೀಡಿದ ಸಹಕಾರವನ್ನು ಎಂದೆಂದೂ ಮರೆಯಲಾಗದು ಎಂದ ಪ್ರಧಾನಿ ನರೇಂದ್ರ ಮೋದಿಯವರ ಕಣ್ಣುಗಳು ತೇವಗೊಂಡವು. ಕಣ್ಣೀರು ಸುರಿಸಿದ ಪ್ರಧಾನಿ ರಾಜ್ಯಸಭೆಯ ಕ್ಷಮೆ ಕೋರಿ ತಮ್ಮ ಮಾತುಗಳನ್ನು ಮುಂದುವರೆಸಿದರು. ಅವರ ಮಾತುಗಳಿಗೆ ಇಡೀ ರಾಜ್ಯಸಭೆಯೇ ಮೇಜು ತಟ್ಟುವ ಮೂಲಕ ಒಮ್ಮತ ವ್ಯಕ್ತಪಡಿಸಿತು.

ಡಿಎಂಕೆ ತಮಿಳುನಾಡು ಸಂಸದ ತಿರುಚಿ ಸಿವಾ , ಟಿಆರ್​ಎಸ್​ನ ಕೆ ಆರ್ ಸುರೇಶ್ ರೆಡ್ಡಿ , ಸಮಾಜವಾದಿ ಪಕ್ಷದ ಸಂಸದ ಪ್ರೊ.ರಾಮ್ ಗೋಪಾಲ್ ಯಾದವ್, ಜೆಡಿಯುವಿನ ರಾಮ್​ಚಂದ್ರ ಪ್ರಸಾದ್ ಸಿಂಗ್, ಸಿಪಿಐ(ಎಂ)ನ ಎಲಾಮರಾಮ್ ಕರೀಂ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖರು ಗುಲಾಂ ನಬೀ ಆಜಾದ್​ರ ಕೊಡುಗೆಯನ್ನು ಸ್ಮರಿಸಿದರು. ಮುಂದಿನ ದಿನಗಳಲ್ಲಿಯೂ ಗುಲಾಂ ನಬೀ ಆಜಾದ್ ಅವರ ಕೊಡುಗೆ ದೇಶಕ್ಕೆ ಅವಶ್ಯಕತೆಯಿದ್ದು, ಅವರಿಗೆ ಸಮಾಜ ಸೇವೆ ಮಾಡಲು ಉತ್ತಮ ಆರೋಗ್ಯ ಲಭಿಸಲಿ ಎಂದು ಹಲವರು ಹಾರೈಸಿದರು.

ಜಮ್ಮು ಕಾಶ್ಮೀರದಿಂದ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದ ಗುಲಾಂ ನಬೀ ಆಜಾದ್ ಮುಂದಿನ ಬಾರಿ ಕೇರಳದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

Source:TV9Kannada