KSRTC BMTC Strike: ಲಾಕ್​ಡೌನ್ ಘೋಷಣೆಯ ಒಳಗೆ ಡ್ಯೂಟಿಗೆ ಬರದಿದ್ರೆ ವಜಾ ಸಾಧ್ಯತೆ; ಸಾರಿಗೆ ನೌಕರರಿಗೆ ಅಯನೂರು ಮಂಜುನಾಥ್ ಎಚ್ಚರಿಕೆ

Apr 14, 2021

ಉಪಚುನಾವಣೆಯ ಮತದಾನದ ನಂತರ ಅಂದರೆ ಏಪ್ರಿಲ್ 17ರ ನಂತರ ಲಾಕ್​ಡೌನ್ ವಿಧಿಸಬಹುದು. ಒಂದು ವೇಳೆ ನೇರವಾಗಿ ಲಾಕ್​ಡೌನ್ ಘೋಷಿಸದಿದ್ದರೆ ನಿನ್ನೆ (ಏಪ್ರಿಲ್ 13) ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದಂತೆ ಕಠಿಣ ನಿರ್ಬಂಧಗಳನ್ನು ಹೇರಬಹುದು ಎಂಬ ವಿಶ್ಲೇಷಣೆ ಈಗಾಗಲೇ ರಾಜ್ಯದ ಉನ್ನತ ವಲಯದಲ್ಲಿ ಚಾಲ್ತಿಯಲ್ಲಿದೆ.

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ಪ್ರಭಾವ ತೀವ್ರವಾಗಿದೆ. ಲಾಕ್​ಡೌನ್ ಘೋಷಿಸುವ ಪರಿಸ್ಥಿತಿ ಉದ್ಭವವಾಗಬಹುದು. ಒಂದು ವೇಳೆ ಲಾಕ್​ಡೌನ್ ಘೋಷಣೆಯಾದರೆ ಮುಷ್ಕರ ನಿರತ ನೌಕರರು ಕೆಲಸಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಈ ಬಗ್ಗೆ ನೌಕರರು ಗಂಭೀರವಾಗಿ ಆಲೋಚಿಸಬೇಕು ಎಂದು ಬಿಜೆಪಿ ನಾಯಕ ಮತ್ತು ಅಯನೂರು ಮಂಜುನಾಥ್ ಶಿವಮೊಗ್ಗದಲ್ಲಿ ಬುಧವಾರ ಮಹತ್ವದ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯ ಸ್ವಂತ ಜಿಲ್ಲೆಯವರೇ ಆದ ಅಯನೂರು ಮಂಜುನಾಥ್ ಅವರ ಮಾತು ಹಲವು ಕಾರಣಗಳಿಂದಾಗಿ ಮಹತ್ವ ಪಡೆದುಕೊಂಡಿದೆ.

ರಾಜ್ಯದಲ್ಲಿ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ಮತ್ತು ಸೋಂಕಿತರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವಲ್ಲಿ ಎಡವುತ್ತಿರುವ ಸರ್ಕಾರ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನದ ನಂತರ ಅಂದರೆ ಏಪ್ರಿಲ್ 17ರ ನಂತರ ಲಾಕ್​ಡೌನ್ ವಿಧಿಸಬಹುದು. ಒಂದು ವೇಳೆ ನೇರವಾಗಿ ಲಾಕ್​ಡೌನ್ ಘೋಷಿಸದಿದ್ದರೆ ನಿನ್ನೆ (ಏಪ್ರಿಲ್ 13) ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದಂತೆ ಕಠಿಣ ನಿರ್ಬಂಧಗಳನ್ನು ಹೇರಬಹುದು ಎಂಬ ವಿಶ್ಲೇಷಣೆ ಈಗಾಗಲೇ ರಾಜ್ಯದ ಉನ್ನತ ವಲಯದಲ್ಲಿ ಚಾಲ್ತಿಯಲ್ಲಿದೆ. ಅಯನೂರು ಮಂಜುನಾಥ್ ಅವರ ಹೇಳಿಕೆಯು ಈ ವಿಶ್ಲೇಷಣೆಗಳಿಗೆ ಪುಷ್ಟಿಕೊಡುವಂತೆ ಇದೆ.

‘ಸಾರಿಗೆ ನಿಗಮಗಳ ನೌಕರರ ಮುಷ್ಕರದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಅನುಭವದ ಕೊರತೆಯಿದೆ’ ಎಂದು ಲೇವಡಿ ಮಾಡಿದ ಬಿಜೆಪಿ ನಾಯಕ ಮತ್ತು ವಿಧಾನಪರಿಷತ್ ಸದಸ್ಯ ಅಯನೂರು ಮಂಜುನಾಥ್, ‘ನಿಮ್ಮ ಹಟ ಮತ್ತು ಪ್ರತಿಷ್ಠೆಗಿಂತಲೂ ಕಾರ್ಮಿಕರ ಬದುಕು ದೊಡ್ಡದು. ಲಕ್ಷಾಂತರ ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ ನಿಮ್ಮ ಹಠಮಾರಿ ಧೋರಣೆ ಕೈಬಿಡಿ’ ಎಂದು ಕೋಡಿಹಳ್ಳಿ ಚಂದ್ರಶೇಖರ್​ಗೆ ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಕೊವಿಡ್ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದೆ. ಈ ನಡುವೆ ಸರಕಾರ ಲಾಕ್​ಡೌನ್ ಮಾಡುವ ಪರಿಸ್ಥಿತಿ ಬಂದರೆ ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಮಾತ್ರ ಸಂಬಳ ಮತ್ತು ಭದ್ರತೆ ಸಿಗುತ್ತದೆ. ಲಾಕ್​ಡೌನ್ ಸಮಯದಲ್ಲಿ ವಾಹನ ಸಂಚಾರ ಇರುವುದಿಲ್ಲ. ಕೊವಿಡ್ ನಿಯಂತ್ರಣ ಬರುವವರೆಗೆ ನೌಕರರು ಸುದೀರ್ಘ ರಜೆಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಅವರನ್ನು ಸರ್ಕಾರ ವಜಾ ಮಾಡಬಹುದು. ಬಳಿಕ ಯಾವ ಕೋರ್ಟ್​ನಲ್ಲೂ ಅವರನ್ನು ಉಳಿಸಿಕೊಳ್ಳುವುದು ಕಷ್ಟ ಆಗುತ್ತದೆ. ಸರ್ಕಾರ ಲಾಕ್​ಡೌನ್ ಘೋಷಿಸುವ ಮೊದಲು ನೌಕರರು ವಾಪಸ್ ಡ್ಯೂಟಿಗೆ ಬರಬೇಕು. ಇಲ್ಲದಿದ್ದರೆ ಕಾರ್ಮಿಕರು ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಕೆಲಸದಿಂದ ವಜಾ ಆದರೆ ಕಾರ್ಮಿಕರು ತಮ್ಮ ಹೋರಾಟದ ಹಕ್ಕು ಕಳೆದುಕೊಳ್ಳುತ್ತಾರೆ. ಕೊಡಲೇ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಮನವಿ ಮಾಡಿದರು.

ನಾಳೆಯೂ ಮುಷ್ಕರ ಮುಂದುವರಿಕೆ: ಕೋಡಿಹಳ್ಳಿ ಚಂದ್ರಶೇಖರ್
‘ಸಾರಿಗೆ ನೌಕರರ ಮುಷ್ಕರ ಬುಧವಾರವೂ (ಏಪ್ರಿಲ್ 15) ಮುಂದುವರೆಯಲಿದೆ. ಸಂಜೆ 6ರಿಂದ 7 ಗಂಟೆಯವರೆಗೂ ಕ್ಯಾಂಡಲ್ ದೀಪ ಬೆಳಗುವ ಮೂಲಕ ಚಳುವಳಿ ಮಾಡಲಾಗುವುದು. ಸಾರಿಗೆ ನೌಕರರ ಬದುಕಲ್ಲಿ ಬೆಳಕು ಬೇಕು. ಅವರ ಪಾಲಿಗೆ ಯುಗಾದಿ ಬರೀ ಕಹಿಯಾಗಿದೆ. ಹೀಗಾಗಿ ನಾಳೆ ಸಂಜೆ 6ರಿಂದ 7ರವರೆಗೆ ದೀಪ ಹಚ್ಚುವ ಕಾರ್ಯಕ್ರಮ ನಡೆಸಲಾಗುವುದು. ಏಪ್ರಿಲ್ 16ರಂದು ಕರ್ನಾಟಕದ ಎಲ್ಲಾ ಶಾಸಕರನ್ನೂ ಭೇಟಿಯಾಗಿ ನೌಕರರ ಪರವಾಗಿ ಸರ್ಕಾರಕ್ಕೆ ಒತ್ತಾಯ ಮಾಡುವಂತೆ ಮನವಿ ಮಾಡಲಾಗುತ್ತದೆ’ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜನರ ಪರದಾಟ
ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಮುಷ್ಕರದಿಂದ ಈವರೆಗೆ ₹ 143 ಕೋಟಿ ನಷ್ಟವಾಗಿದೆ ಎಂದು ನಿಗಮದ ಅಧಿಕಾರಿಗಳು ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಯುಗಾದಿ ಹಬ್ಬಕ್ಕೆ ಊರುಗಳಿಗೆ ಹೋಗಲು ಸಾಧ್ಯವಾಗದೆ ಜನರು ಪರದಾಡಿದರು. ಆದರೂ ಸರ್ಕಾರ ಮತ್ತು ನೌಕರರು ಇಂದಿಗೂ ತಮ್ಮ ನಿಲುವುಗಳಿಗೆ ಅಂಟಿಕೊಂಡಿದ್ದು ಬಿಗಿನಿಲುವು ಮುಂದುವರಿಸಿದ್ದಾರೆ. ಮುಷ್ಕರ ನಿರತರ ಜೊತೆ ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ. ಮುಷ್ಕರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ನೌಕರರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಗುಡುಗಿದ್ದಾರೆ. ಸರ್ಕಾರ ಮತ್ತು ನೌಕರರ ಸಂಘಟನೆಗಳ ಈ ಹಗ್ಗಜಗ್ಗಾಟದಲ್ಲಿ ಜನರು ಹೈರಾಣಾಗುತ್ತಿದ್ದಾರೆ.

₹ 146 ಕೋಟಿ ನಷ್ಟ
ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಕಳೆದ 8 ದಿನಗಳಲ್ಲಿ 4 ಸಾರಿಗೆ ನಿಗಮಗಳು ಒಟ್ಟು ₹ 146 ಕೋಟಿಯಷ್ಟು ಆದಾಯ ಕಳೆದುಕೊಂಡಿವೆ. ನಿತ್ಯ ಕಾರ್ಯಾಚರಣೆಯಿಂದ 4 ಸಾರಿಗೆ ನಿಗಮಗಳ ಆದಾಯ ₹ 17 ಕೋಟಿ ಇತ್ತು. ಈ ಪೈಕಿ ಕೆಎಸ್ಆರ್‌ಟಿಸಿ ಒಂದೇ ನಿಗಮಕ್ಕೆ ನಿತ್ಯ ಕಾರ್ಯಾಚರಣೆ ಆದಾಯ ₹ 7 ಕೋಟಿಯಷ್ಟಿತ್ತು. ಬಿಎಂಟಿಸಿಯ ನಿತ್ಯ ಕಾರ್ಯಾಚರಣೆ ಆದಾಯ ₹ 3 ಕೋಟಿ, ವಾಯವ್ಯ ಸಾರಿಗೆ ನಿಗಮದ ಪ್ರತಿದಿನದ ಆದಾಯ ₹ 3.5 ಕೋಟಿ, ಈಶಾನ್ಯ ಸಾರಿಗೆ ನಿಗಮದ ಪ್ರತಿದಿನದ ಆದಾಯ 3.5 ಕೋಟಿಯಷ್ಟಿತ್ತು. ಯುಗಾದಿ ಹಬ್ಬದ ವೇಳೆ ಪ್ರತಿವರ್ಷವೂ ಹೆಚ್ಚುವರಿ ಆದಾಯ ಹರಿದು ಬರುತ್ತಿತ್ತು. ಆದರೆ ಈ ಬಾರಿ ಈ ಅವಕಾಶವನ್ನು ಸಾರಿಗೆ ನಿಗಮಗಳು ಕಳೆದುಕೊಂಡಿವೆ. ಕಳೆದ ಎರಡು ದಿನಗಳಲ್ಲಿ ₹ 44 ಕೋಟಿ ನಷ್ಟ ಅನುಭವಿಸಿವೆ. 8 ದಿನಗಳಲ್ಲಿ ಸಾರಿಗೆ ನಿಗಮಕ್ಕೆ ಒಟ್ಟು ₹ 146 ಕೋಟಿ ಆದಾಯ ನಷ್ಟವಾಗಿದೆ ಎಂದು ಟಿವಿ9ಗೆ ಕೆಎಸ್‌ಆರ್‌ಟಿಸಿಯ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ಕೊಪ್ಪಳ: ವಿಭಾಗೀಯ ನಿಯಂತ್ರಣಾಧಿಕಾರಿಗೆ ಮಹಿಳೆಯರ ತರಾಟೆ
ಸಾರಿಗೆ ನೌಕರರ ಮುಷ್ಕರ ಹಿನ್ನಲೆಯಲ್ಲಿ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರನ್ನು ಕೊಪ್ಪ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಚ್.ಮುಲ್ಲಾ ಮನವಿ ಮಾಡಿದರು. ಪ್ರತಿಭಟನಾ ನಿರತರ ಮನವೊಲಿಸಲು ಮುಂದಾದಾಗ ಮೊದಲು ಸಂಬಳ ಕೊಡಿ ಎಂದು ಮಹಿಳೆಯರು ತರಾಟೆಗೆ ತೆಗೆದುಕೊಂಡರು. ಮೊದಲು ನಿಮ್ಮ ಮನೆಯವರನ್ನು ಕೆಲಸಕ್ಕೆ ಕಳಿಸಿ ಎಂದು ಮುಲ್ಲಾ ಮತ್ತೊಮ್ಮೆ ಕೈಮುಗಿದು ವಿನಂತಿಸಿದರು. ‘ನಿಮ್ಮ ಮನೆಯವರನ್ನ ಕೆಲಸಕ್ಕೆ ಕಳಿಸಿ. ಸತತ ಏಳು ದಿನ ರಜೆ ಇದ್ದರೆ ನೌಕರಿಗೆ ತೊಂದರೆ ಆಗುತ್ತೆ ಕೆಲಸಕ್ಕೆ ಕಳಿಸಿ’ ಎಂದು ಅವರು ವಿವರಿಸಿದರು.

ಅಥಣಿ: ನೌಕರರ ಮನವೊಲಿಸಿದ ಚಿದಾನಂದ ಸವದಿ
ಅಥಣಿ ಡಿಪೊದಿಂದ ಬುಧವಾರ ಬಸ್​ಗಳು ಸಂಚರಿಸಿದವು. ಡಿಪೊದ 400 ನೌಕರರ ಪೈಕಿ 210 ಮಂದಿ ನೌಕರಿಗೆ ಹಾಜರಾಗಿದ್ದರು. ಕರ್ತವ್ಯಕ್ಕೆ ಹಾಜರಾಗುವಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ನೌಕರರ ಮನವೊಲಿಸಿದರು.

ದಾವಣಗೆರೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಮಾಲೀಕರ ಆಕ್ರೋಶ
ದಾವಣಗೆರೆ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ಬುಧವಾರ 10ಕ್ಕೂ ಹೆಚ್ಚು ಸರ್ಕಾರಿ ಬಸ್​ಗಳು ತೆರಳಿದವು. ಇದನ್ನು ಖಾಸಗಿ ಬಸ್ ಮಾಲೀಕರು ತೀವ್ರವಾಗಿ ಖಂಡಿಸಿದರು. ನಾವು ಮೂರು ದಿನಗಳಿಂದ ಬಸ್ ನಿಲ್ದಾಣದಲ್ಲಿಯೇ ಕುಳಿತಿದ್ದೇವೆ. ಇಂದು ಬೇರೆ ಯಾರೋ ಚಾಲಕ-‌ನಿರ್ವಾಹಕರ‌ನ್ನು‌ ಕರೆದುಕೊಂಡು ಬಂದು ಬಸ್ ಓಡಿಸುತ್ತಿದ್ದಾರೆ. ಸರ್ಕಾರ ಅನುಮತಿ ನೀಡಿದ್ದಕ್ಕೆ ನಾವು ಹೆಚ್ಚುವರಿ ಬಸ್ ಹಾಕಿಕೊಂಡಿದ್ದೇವೆ. ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬಂದ‌ ಮೇಲೆ ಸಾರಿಗೆ ಬಸ್ ಓಡಿಸಿ ನಮ್ಮ ಕಲೆಕ್ಷನ್ ತಪ್ಪಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು. ಸಾರಿಗೆ ನಿಗಮದ ಬಸ್ ಓಡಿಸುವುದಾದರೆ ನಮ್ಮ ಬಸ್​ಗಳನ್ನು ನಿಲ್ದಾಣದಿಂದ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿ ಸುಗಮಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

(Karnataka Government may Impose Lockdown opines Ayanuru Manjunath during his statement on ksrtc bmtc strike)

Source: TV9Kannada