Coronavirus India Update: ಕಳೆದ 24 ಗಂಟೆಗಳಲ್ಲಿ 2 ಲಕ್ಷಕ್ಕಿಂತಲೂ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ಪತ್ತೆ, 1,038 ಮಂದಿ ಸಾವು

Apr 15, 2021

Covid 19 in India: ಬುಧವಾರ ಭಾರತದಲ್ಲಿ ಪತ್ತೆಯಾದ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 2,00,739 ಆಗಿದ್ದು, 1,038 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಒಟ್ಟು ಸೋಂಕಿತರ ಸಂಖ್ಯೆ 1,40,74,564 (1.4 ಕೋಟಿಗೆ) ತಲುಪಿದ್ದು ಈವರೆಗೆ ಸಾವಿಗೀಡಾದವ ಸಂಖ್ಯೆ 1,73,123 ಆಗಿದೆ.

ದೆಹಲಿ: ದೇಶದಲ್ಲಿ ಕೊವಿಡ್ ಎರಡನೇ ಅಲೆ ಪರಿಣಾಮ ಪ್ರತಿದಿನ ಕೊವಿಡ್ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಒಂದು ವಾರಗಳಿಂದ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಏರಿಕೆ ಆಗುತ್ತಲೆ ಇದ್ದು, ಕಳೆದ 24 ಗಂಟೆಗಳಲ್ಲಿ ಇದು ಎರಡು ಲಕ್ಷ ದಾಟಿದೆ. ಬುಧವಾರ ದೇಶದಲ್ಲಿ ಪತ್ತೆಯಾದ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 2,00,739 ಆಗಿದ್ದು, 1,038 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಒಟ್ಟು ಸೋಂಕಿತರ ಸಂಖ್ಯೆ 1,40,74,564 (1.4 ಕೋಟಿಗೆ) ತಲುಪಿದ್ದು ಈವರೆಗೆ ಸಾವಿಗೀಡಾದವ ಸಂಖ್ಯೆ 1,73,123 ಆಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 14,71,877 ಆಗಿದ್ದು, 1,24,29,564 ಮಂದಿ ಚೇತರಿಸಿಕೊಂಡಿದ್ದಾರೆ. 11,44,93,238 ಮಂದಿ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಜಗತ್ತಿನಲ್ಲಿ ಅತೀ ಹೆಚ್ಚು ಕೊವಿಡ್ ಸೋಂಕಿತರಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಏಪ್ರಿಲ್ 2ರ ನಂತರ ದೇಶದಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು ಸೋಂಕು ನಿಯಂತ್ರಣಕ್ಕಾಗಿ ವಿವಿಧ ರಾಜ್ಯಗಳು ಕಠಿಣ ನಿರ್ಬಂಧ ಕೈಗೊಂಡಿವೆ. ಆದಾಗ್ಯೂ ಶಿಕ್ಷಣ ಸಚಿವಾಲ.ವು ಬುಧವಾರ ಸಿಬಿಎಸ್ಇ 12 ತರಗತಿ ಪರೀಕ್ಷೆಯನ್ನು ಮುಂದೂಡಿದ್ದು 10ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿದೆ. ದೇಶದಲ್ಲಿನ ಪರಿಸ್ಥಿತಿ ಪರಿಶೀಲಿಸಿದ ನಂತರ 12 ತರಗತಿ ಪರೀಕ್ಷೆ ಬಗ್ಗೆ ಜೂನ್ 1ರಂದು ಪರೀಕ್ಷೆ ದಿನಾಂಕಗಳನ್ನು ಘೋಷಿಸಲಿದೆ. ದೇಶದಾದ್ಯಂತ 21.5 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆಯಲಿದ್ದು, 12 ತರಗತಿ ಪರೀಕ್ಷೆ ಬರೆಯುವ 14 ಲಕ್ಷ ವಿದ್ಯಾರ್ಥಿಗಳಿದ್ದಾರೆ.

 

ಕುಂಭ ಮೇಳದಲ್ಲಿ ಶಾಹಿ ಸ್ನಾನ ಮಾಡಿದ್ದು 13.5 ಲಕ್ಷ
ದೇಶದಾದ್ಯಂತ ಕೊವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವಾಗಲೇ ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಬುಧವಾರ 13.5 ಲಕ್ಷ ಭಕ್ತರು ಗಂಗಾ ನದಿ ಘಾಟ್ ನಲ್ಲಿ ಶಾಹಿ ಸ್ನಾನ ಮಾಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. ಕುಂಭ ಮೇಳದಲ್ಲಿ ಭಾಗವಹಿಸುವವರಿಗೆ ನೆಗೆಟಿವ್ ಆರ್​ಟಿಪಿಸಿಆರ್ ಸರ್ಟಿಫಿಕೇಟ್ ಕಡ್ಡಾಯ ಮಾಡಿದ್ದು ಅಗತ್ಯ ಸುರಕ್ಷಾ ಕ್ರಮಗಳನ್ನು ಸ್ವೀಕರಿಸಿದ್ದೇವೆ ಎಂದು ಕುಂಭ ಮೇಳದ ಆಯೋಜಕರು ಹೇಳುತ್ತಾರೆ. ಆದರೆ ಅಲ್ಲಿ ಮಾಸ್ಕ್ , ಥರ್ಮಲ್ ಸ್ಕ್ರೀನಿಂಗ್, ಸಾಮಾಜಿಕ ಅಂತರ ಯಾವುದೂ ಕಂಡು ಬರಲಿಲ್ಲ. ಇಷ್ಟೊಂದು ಜನರು ಸೇರಿರುವಾಗ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಎಂದು ಪೊಲೀಸರು ಹೇಳಿದ್ದರು. 12 ವರ್ಷಕ್ಕೊಮ್ಮೆ ಕುಂಭ ಮೇಳ ನಡೆಯುತ್ತದೆ, ಹಾಗಾಗಿ ಇದರಲ್ಲಿ ಭಾಗವಹಿಸಲು ಲಕ್ಷೋಪಲಕ್ಷ ಜನರು ಆಗಮಿಸಿದ್ದಾರೆ.

ನಂಬಿಕೆ ಎಲ್ಲದಕ್ಕಿಂತಲೂ ದೊಡ್ಡದು, ನಾನು ದೇವರನ್ನು ನಂಬುತ್ತೇನೆ. ಶುಭದಿನದಂದು ಪವಿತ್ರ ಸ್ನಾನ ಮಾಡುವ ಅವಕಾಶವನ್ನು ನಾನು ಯಾಕೆ ಕಳೆದುಕೊಳ್ಳಲಿ ಎಂದು ಹರಿದ್ವಾರಕ್ಕೆ ಬಂದ ವಿಕಿ ತ್ಯಾಗಿ ಎಂಬ ಭಕ್ತರೊಬ್ಬರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ರಾಜಸ್ಥಾನದಲ್ಲಿ ಕರ್ಫ್ಯೂ
ಕೊವಿಡ್ ನಿಯಂತ್ರಣಕ್ಕಾಗಿ ರಾಜಸ್ಥಾನದಲ್ಲಿ ಸಂಜೆ 6ರಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಘೋಷಿಸಲಾಗಿದೆ. ಕಳೆದ ವಾರ ನಗರದ 10 ಜಿಲ್ಲೆಗಳಲ್ಲಿ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ವರೆಗೆ, ಉದಯ್ ಪುರ್ ನಲ್ಲಿ ಸಂಜೆ 6ರಿಂದ ಬೆಳಗ್ಗೆ 6 ವರೆಗೆ ಕರ್ಫ್ಯೂ ಘೋಷಿಸಲಾಗಿತ್ತು. ಬುಧವಾರ ಈ ನಿಯಮವನ್ನು ಪರಿಷ್ಕರಿಸಿದ ಸರ್ಕಾರ ಎಲ್ಲ ಜಿಲ್ಲೆಗಳಲ್ಲಿಯೂ ಸಂಜೆ 6ರಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಇರಲಿದೆ ಎಂದು ಹೇಳಿದೆ.

Source: TV9Kannada