Anandha Kannan: ಖ್ಯಾತ ನಿರೂಪಕ, ನಟ ಆನಂದ ಕಣ್ಣನ್ ಕ್ಯಾನ್ಸರ್​ನಿಂದ ನಿಧನ; ಸೆಲೆಬ್ರಿಟಿಗಳ ಸಂತಾಪ

Aug 17, 2021

ತಮಿಳು ಕಿರುತೆರೆ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟ, ನಿರೂಪಕ ಆನಂದ ಕಣ್ಣನ್ (Anandha Kannan) ಅವರು​ ಸೋಮವಾರ (ಆ.16) ನಿಧನರಾದರು. ಈ ಸುದ್ದಿ ಅವರ ಅಭಿಮಾನಿಗಳಿಗೆ ಕಂಬನಿ ತರಿಸಿದೆ. 48ರ ಪ್ರಾಯದ ಆನಂದ ಕಣ್ಣನ್​ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಹಲವು ತಿಂಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ ತ್ಯಜಿಸಿದ್ದಾರೆ. ನಿರ್ದೇಶಕ ವೆಂಕಟ್​ ಪ್ರಭು ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ಆನಂದ ಕಣ್ಣನ್ ಮೃತರಾದ ಸುದ್ದಿಯನ್ನು ಖಚಿತಪಡಿಸಿದ್ದಾರೆ.

‘ಒಬ್ಬ ಅತ್ಯುತ್ತಮ ಗೆಳಯ, ಒಳ್ಳೆಯ ವ್ಯಕ್ತಿ ಆನಂದ ಕಣ್ಣನ್​ ಇನ್ನಿಲ್ಲ. ಅವರ ನಿಧನಕ್ಕೆ ನನ್ನ ಸಂತಾಪಗಳು. ಆನಂದ ಕಣ್ಣನ್​ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ವೆಂಕಟ್​ ಪ್ರಭು ಟ್ವೀಟ್​ ಮಾಡಿದ್ದಾರೆ. ನಿರ್ಮಾಪಕ ಆರ್​.ಕೆ. ಸುರೇಶ್​, ನಟ ಸೆಂಥಿಲ್​ ಕುಮಾರ್​ ಸೇರಿದಂತೆ ಕಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಕನಸು ಕಂಡಿದ್ದ ಆನಂದ ಕಣ್ಣನ್​ ಅವರು ಕೇವಲ 48ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳುವಂತಾಗಿದ್ದು ನಿಜಕ್ಕೂ ನೋವಿನ ಸಂಗತಿ.

ತಮಿಳಿನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಆನಂದ ಕಣ್ಣನ್​ ಅವರು ಮನರಂಜನಾ ವಾಹಿನಿಗಳಲ್ಲಿ ನಿರೂಪಕರಾಗಿ ಹೆಚ್ಚು ಫೇಮಸ್​ ಆಗಿದ್ದರು. ಆ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದರು. ಸಿಂಗಾಪುರ್ ವಸಂತಂ ವಾಹಿನಿಯಲ್ಲಿ ಆ್ಯಂಕರ್ ಆಗಿ ಅವರು ವೃತ್ತಿ ಜೀವನ ಆರಂಭಿಸಿದ್ದರು. ನಂತರ ಚೆನ್ನೈಗೆ ಬಂದು ಸನ್​ ಮ್ಯೂಸಿಕ್ ವಾಹಿನಿಯಲ್ಲಿ ವಿಡಿಯೋ ಜಾಕಿ ಆಗಿದ್ದರು. 2008ರಲ್ಲಿ ತೆರೆಕಂಡ ‘ಸರೋಜಾ’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ಸೈನ್ಸ್​ ಫಿಕ್ಷನ್​ ಕಥೆ ಹೊಂದಿದ್ದ ‘ಆಧಿಸಯ ಉಳಗಂ’ ಸಿನಿಮಾದಲ್ಲಿ ಆನಂದ ಕಣ್ಣನ್ ಮುಖ್ಯಭೂಮಿಕೆ ನಿಭಾಯಿಸಿದ್ದರು.

ಆನಂದ ಕಣ್ಣನ್ ನಟಿಸಿದ್ದ ಕೆಲವು ಸಿನಿಮಾಗಳ ಕೆಲಸಗಳು ಅರ್ಧಕ್ಕೆ ನಿಂತ ಕಾರಣ ಇನ್ನೂ ಬಿಡುಗಡೆ ಆಗಿಲ್ಲ. 2013ರಿಂದ 2018ರವರೆಗೆ ಪ್ರಸಾರವಾದ ಸವಾಲ್​ ಸಿಂಗಾಪುರ್​ ಕಾರ್ಯಕ್ರಮದ 5 ಸೀಸನ್​ಗಳಲ್ಲೂ ಅವರು ನಿರೂಪಕರಾಗಿ ಕೆಲಸ ಮಾಡಿದ್ದರು. ಕಿರುತೆರೆ ಲೋಕದ ಹಲವು ಪ್ರಶಸ್ತಿಗಳೂ ಅವರಿಗೆ ಸಿಕ್ಕಿದ್ದವು. ಬಣ್ಣದ ಲೋಕದಲ್ಲಿ ಇನ್ನಷ್ಟು ಸಾಧನೆ ಮಾಡುವ ಮುನ್ನವೇ ಅವರಿಗೆ ಯಮಸ್ವರೂಪಿಯಾಗಿ ಕ್ಯಾನ್ಸರ್​ ಶುರುವಾಗಿತ್ತು.

ಕ್ಯಾನ್ಸರ್​ ಇದೆ ಎಂಬುದು ಗೊತ್ತಾದ ಬಳಿಕ ಆನಂದ ಕಣ್ಣನ್​ ಅವರ ವೃತ್ತಿಜೀವನಕ್ಕೆ ಹಿನ್ನಡೆ ಆಗಲಾರಂಭಿಸಿತು. ಮತ್ತೆ ಅವರನ್ನು ಹೊಸದೊಂದು ಕಾರ್ಯಕ್ರಮಕ್ಕೆ ನಿರೂಪಕರನ್ನಾಗಿ ಮಾಡಲು ವಾಹಿನಿಯೊಂದು ಆಲೋಚಿಸಿತ್ತು. ಆದರೆ ಅದು ಕೈಗೂಡುವುದಕ್ಕಿಂತ ಮುನ್ನವೇ ಅವರು ಕೊನೆಯುಸಿರು ಎಳೆದಿದ್ದಾರೆ.

Source: tv9 Kannada