ಬೆಂಗಳೂರಿನಲ್ಲಿ ಸ್ಫೋಟದ ಸದ್ದು, ಕಿಟಕಿ, ಬಾಗಿಲು ಅಲುಗಾಡಿದ ಅನುಭವ; ಕಾರಣ ನಿಗೂಢ!

Jul 2, 2021

ಬಿಡದಿ, ಬನಶಂಕರಿ, ಆರ್ ‌ಆರ್ ನಗರ, ನಾಗರಭಾವಿ, ಚಂದ್ರಾ ಲೇಔಟ್, ಮಾಗಡಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಕೆಲವೆಡೆ ಸದ್ದು ಕೇಳಿಸಿದ ಅನುಭವ ಆಗಿದ್ದು, ಎರಡು ಸೆಕೆಂಡುಗಳ ಕಾಲ ಕಿಟಕಿ, ಬಾಗಿಲು ಅಲುಗಾಡಿದ ಅನುಭವವೂ ಆಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12.30ರ ಆಸುಪಾಸಿನಲ್ಲಿ ಸ್ಪೋಟದ ಸದ್ದು ಕೇಳಿಬಂದಿದೆ. ಬಿಡದಿ, ಬನಶಂಕರಿ, ಆರ್ ‌ಆರ್ ನಗರ, ನಾಗರಬಾವಿ, ಚಂದ್ರಾ ಲೇಔಟ್, ಮಾಗಡಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಕೆಲವೆಡೆ ಸದ್ದು ಕೇಳಿಸಿದ ಅನುಭವ ಆಗಿದ್ದು, ಎರಡು ಸೆಕೆಂಡುಗಳ ಕಾಲ ಕಿಟಕಿ, ಬಾಗಿಲು ಅಲುಗಾಡಿದ ಅನುಭವವೂ ಆಗಿದೆ. ಈ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಲಾರಂಭಿಸಿದ್ದು, ಅನೇಕ ಮಂದಿ ತಮಗೂ ಅನುಭವ ಆಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಕೆಲವರು ಹೇಳುವ ಪ್ರಕಾರ 12.23ರ ಸುಮಾರಿಗೆ ಸ್ಪೋಟದ ಸದ್ದು ಕೇಳಿದೆ. ಬಂಡೆ ಒಡೆದಾಗ ಬರುವ ಸದ್ದಿನಂತೆ ಕೇಳಿಸಿದ್ದು, ಪಾರಿವಾಳ ಹಾಗೂ ಇನ್ನಿತರ ಪಕ್ಷಿಗಳು ಚೆಲ್ಲಾಪಿಲ್ಲಿಯಾಗಿ ಹಾರಿರುವುದು ಅನುಮಾನಕ್ಕೆ ಕಾರಣವಾಗಿದೆ.

ಆದರೆ, ಇಲ್ಲಿಯ ತನಕ ಶಬ್ದಕ್ಕೆ ನಿಖರ ಕಾರಣವೇನು? ಮೇಘಸ್ಪೋಟವೇ, ಭೂಕಂಪವೇ ಅಥವಾ ಇನ್ನೇನಾದರೂ ಅವಘಡ ಸಂಭವಿಸಿತೇ ಎನ್ನುವುದು ತಿಳಿದುಬಂದಿಲ್ಲ. ಈ ಬಗ್ಗೆ ಯಾವುದೇ ಅಧಿಕಾರಿಗಳು, ತಜ್ಞರು ಇನ್ನೂ ಮಾಹಿತಿ ನೀಡಿಲ್ಲ. ಕಳೆದ ಬಾರಿಯೂ ನಗರದಲ್ಲಿ ಇಂಥದ್ದೇ ಸದ್ದು ಕೇಳಿಬಂದು ಜನರಿಗೆ ಆತಂಕ ಮೂಡಿತ್ತು. ನಂತರ ಅದು ಸೋನಿಕ್​ ಸೌಂಡ್ ಎಂಬಲ್ಲಿಂದ ಹಿಡಿದು ಅನೇಕ ಲೆಕ್ಕಾಚಾರಗಳೂ ಕೇಳಿಬಂದಿದ್ದವು.

ಇಂದು ಕೇಳಿಸಿರುವ ಈ ಸದ್ದಿನ ಬಗ್ಗೆ ಜನರು ಭಯಭೀತರಾಗಿದ್ದು, ಪ್ರಕೃತಿಯಲ್ಲಿ ಏನಾದರೂ ಬದಲಾವಣೆ ಸಂಭವಿಸಿರಬಹುದೇ? ಭೂಮಿಯೊಳಗಿಂದ ಈ ಶಬ್ಧ ಕೇಳಿಸಿರಬಹುದೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವರಿಗೆ ಭೂಕಂಪನದ ಅನುಭವ ಆಗಿದೆಯಾದರೂ ಭೂಕಂಪನ ಮಾಪಕದಲ್ಲಿ ಅದು ದಾಖಲಾಗಿಲ್ಲ. ಹೀಗಾಗಿ ಈ ನಿಗೂಢ ಸದ್ದು ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ್ದು, ನಿಖರ ಕಾರಣವೇನು ಎಂದು ತಜ್ಞರು ವಿಶ್ಲೇಷಿಸಲಿ ಎಂದು ಕಾಯುತ್ತಿದ್ದಾರೆ.

 

Source: TV9 Kannada