ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಜೂನ್ 14 ರಂದು ವಿಶ್ವ ರಕ್ತದಾನ ದಿನವನ್ನು ಆಚರಿಸಲಾಗುತ್ತದೆ. ರಕ್ತದಾನದ ಅನೇಕ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
ರಕ್ತದಾನವು ಉದಾತ್ತ ಮತ್ತು ನಿಸ್ವಾರ್ಥ ಕ್ರಿಯೆಯಾಗಿದ್ದು, ಇದು ಲಕ್ಷಾಂತರ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ. ಅದರ ಜೊತೆಗೆ ರಕ್ತದಾನವು, ದಾನಿಗಳಿಗೆ ತನ್ನದೇ ಆದ ಪ್ರಯೋಜನಳನ್ನು ನೀಡುತ್ತದೆ. ಹೇಗೆ? ಎನ್ನುವ ಪ್ರಶ್ನೆ ಹುಟ್ಟುಕೊಂಡಿತು ಎಂದಾದರೆ ಅದ್ಕಕೆ ಉತ್ತರ ಇಲ್ಲಿದೆ. ರಕ್ತದಾನ ಮಾಡುವುದರಿಂದ ರಕ್ತದಲ್ಲಿನ ಹೆಚ್ಚುವರಿ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆ ಮೂಲಕ ಹಿಮೋಕ್ರೊಮಾಟೋಸಿಸ್ ಅನ್ನು ತಡೆಯುತ್ತದೆ. ಎಲ್ಲಿಯಾದರೂ ಇದು ಹೆಚ್ಚಾದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಈ ಕ್ರಿಯೆಯು ದಾನಿಗೆ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ಸಹ ಒದಗಿಸಬಹುದು. ರಕ್ತದಾನದ ಮೊದಲು, ಜನರು ರಕ್ತದೊತ್ತಡ, ಹಿಮೋಗ್ಲೋಬಿನ್ ಮಟ್ಟಗಳು ಮತ್ತು ಒಟ್ಟಾರೆ ಆರೋಗ್ಯ ಮೌಲ್ಯಮಾಪನಕ್ಕಾಗಿ ಸ್ಕ್ರೀನಿಂಗ್ ಪ್ರಕ್ರಿಯೆಗಳಿಗೆ ಒಳಗಾಗಬೇಕಾಗುತ್ತದೆ. ಇದರಿಂದ ರಕ್ತಹೀನತೆ ಅಥವಾ ಸಾಂಕ್ರಾಮಿಕ ರೋಗಗಳಂತಹ ಕೆಲವು ಆರೋಗ್ಯ ಪರಿಸ್ಥಿತಿಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ಇದು ಸಹಾಯ ಮಾಡುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ), ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನ ದಿನವನ್ನು ಆಚರಿಸುತ್ತದೆ. ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳು, ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಬ್ಲಡ್ ಡೋನರ್ ಆರ್ಗನೈಸೇಷನ್ಸ್ (ಐಎಫ್ಬಿಡಿಒ) ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್ಫ್ಯೂಷನ್ (ಐಎಸ್ಬಿಟಿ) ಸೇರಿದಂತೆ ನಾಲ್ಕು ಅಂತರರಾಷ್ಟ್ರೀಯ ಸಂಸ್ಥೆಗಳು ಈ ದಿನವನ್ನು ಮೊದಲು 2004ರಲ್ಲಿ ಗುರುತಿಸಿ, ಆಚರಣೆ ಮಾಡಲು ಪ್ರಾರಂಭಿಸಿದರು. ಸುರಕ್ಷಿತ ರಕ್ತ ಮತ್ತು ರಕ್ತ ಉತ್ಪನ್ನಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ರಕ್ತದಾನಿಗಳು ತಮ್ಮ ಸ್ವಯಂಪ್ರೇರಿತ ಹಾಗೂ ಒಂದು ಜೀವ ಉಳಿಸುವ ಉಡುಗೊರೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಇದರ ಉದ್ದೇಶವಾಗಿತ್ತು.
ರಕ್ತದಾನದ ಪ್ರಯೋಜನಗಳೇನು?
“ರಕ್ತದಾನವು ಅಗತ್ಯವಿರುವ ಅಸಂಖ್ಯಾತ ವ್ಯಕ್ತಿಗಳಿಗೆ ಜೀವನಾಡಿಯಾಗಿದೆ. ಅವುಗಳ ಪರಿಣಾಮವು ಜೀವ ಉಳಿಸುವುದಕ್ಕಿಂತ ಮೀಗಿಲಾಗಿದೆ. ರಕ್ತದಾನದಿಂದ ಅಪಾರ ಪ್ರಯೋಜನಗಳಿವೆ. ಇದು ಶಸ್ತ್ರಚಿಕಿತ್ಸೆಗಳು, ಕ್ಯಾನ್ಸರ್ ಚಿಕಿತ್ಸೆಗಳು ಮತ್ತು ತುರ್ತು ಪರಿಸ್ಥಿತಿಗಳಿಗೆ ಒಳಗಾಗುವ ರೋಗಿಗಳಿಗೆ ಅಗತ್ಯವಾದ ಬೆಂಬಲವನ್ನು ಒದಗಿಸುವುದಲ್ಲದೆ, ದಾನಿಗಳಿಗೆ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ. ನಿಯಮಿತ ರಕ್ತದಾನವು ದೇಹದಲ್ಲಿ ಆರೋಗ್ಯಕರ ಕಬ್ಬಿಣದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಹಿಮೋಕ್ರೊಮಾಟೋಸಿಸ್ ನಂತಹ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ರೋಗಿ ರಕ್ತ ಕೊಡುವ ಮೊದಲು ಕಠಿಣ ಪರೀಕ್ಷೆಗೆ ಒಳಗಾಗುವುದರಿಂದ, ದಾನಿಯ ಯೋಗ ಕ್ಷೇಮವನ್ನು ಖಾತ್ರಿಪಡಿಸುವುದರಿಂದ, ಇದು ಆರೋಗ್ಯ ತಪಾಸಣೆಯಾಗಿಯೂ ಕಾರ್ಯನಿರ್ವಹಿಸುತ್ತದೆ.
ಇದಲ್ಲದೆ, ರಕ್ತದಾನದ ಕ್ರಿಯೆಯು ಸಮುದಾಯ ಮತ್ತು ಪರೋಪಕಾರಿತ್ವದ ಪ್ರಜ್ಞೆಯನ್ನು ಬೆಳೆಸುತ್ತದೆ, ದಾನಿಗಳಿಗೆ ತೃಪ್ತಿದಾಯಕ ಅನುಭವವನ್ನು ನೀಡುತ್ತದೆ ಮತ್ತು ಅವರು ಒಬ್ಬರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದಾರೆ ಎಂಬ ಪ್ರೌಢಿಮೆಯನ್ನು ನೀಡುತ್ತದೆ. ರಕ್ತದಾನಗಳು ವಿಶ್ವಾಸಾರ್ಹ ಮತ್ತು ಸುಸ್ಥಿರ ರಕ್ತ ಪೂರೈಕೆಯ ಅಡಿಪಾಯ ನಿರ್ಮಿಸಲು ಬುನಾದಿಯಾಗಿದೆ. ಜೊತೆಗೆ ಆಸ್ಪತ್ರೆಗಳು ರೋಗಿಗಳ ಅಗತ್ಯಗಳನ್ನು ಪೂರೈಸಬಹುದು ಎಂದು ಖಚಿತಪಡಿಸುತ್ತದೆ. ರಕ್ತದಾನದ ನಿಸ್ವಾರ್ಥ ಕ್ರಿಯೆಯ ಮೂಲಕ ನಾವು ಸಾಮೂಹಿಕವಾಗಿ ಆರೋಗ್ಯಕರ ಮತ್ತು ಹೆಚ್ಚು ಸಹಾನುಭೂತಿ ಬೆಳೆಸಿಕೊಳ್ಳಲು ಸಹಾಯ ಮಾಡಬಹುದು.” ಎಂದು ಹೃದಯಾಲಯ ರಕ್ತ ಕೇಂದ್ರ, ನಾರಾಯಣ ಹೆಲ್ತ್ ಸಿಟಿ, ಸಲಹೆಗಾರ ಮತ್ತು ಎಚ್ಒಡಿ ಡಾ. ಗಿರೀಶ್ ಸಿ.ಜೆ. ನಾರಾಯಣ ಹೇಳಿದ್ದಾರೆ.
“ರಕ್ತದಾನವು ಒಬ್ಬ ವ್ಯಕ್ತಿಯು ಮಾಡಬಹುದಾದ ಅತ್ಯಂತ ನಿಸ್ವಾರ್ಥ ಕಾರ್ಯಗಳಲ್ಲಿ ಒಂದಾಗಿದೆ, ಏಕೆಂದರೆ ಅದು ಜೀವ ಉಳಿಸುವ ಶಕ್ತಿಯನ್ನು ಹೊಂದಿದೆ. ನಿಯಮಿತ ರಕ್ತದಾನವು ಹಲವಾರು ಸಂಭಾವ್ಯ ಆರೋಗ್ಯ ಪ್ರಯೋಜನಗಳೊಂದಿಗೆ ಸಂಬಂಧ ಹೊಂದಿದೆ. ಉದಾಹರಣೆಗೆ, ಇದು ಕೆಲವು ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ವಿಶೇಷವಾಗಿ ಹೃದಯರಕ್ತನಾಳದ ಕಾಯಿಲೆ, ಜೊತೆಗೆ ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತದಾನವು ಹೊಸ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಹೆಚ್ಚುವರಿಯಾಗಿ, ಪ್ರತಿ ದಾನದ ಮೊದಲು ನಿಯಮಿತವಾಗಿ ರಕ್ತ ಪರೀಕ್ಷೆಗಳಿಗೆ ಒಳಗಾಗುವ ಮೂಲಕ, ಒಬ್ಬ ವ್ಯಕ್ತಿಯ ದೇಹದ ಆರೋಗ್ಯ ಸ್ಥಿತಿಯ ಬಗ್ಗೆ ಮುನ್ನೆಚ್ಚರಿಕೆಯಿಂದಿರಲು ಸಾಧ್ಯವಾಗುತ್ತದೆ. ನಿಯಮಿತ ರಕ್ತದಾನವು ರಕ್ತ ಪೂರೈಕೆ ಸರಪಳಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ತುರ್ತು ಸಂದರ್ಭಗಳು, ಶಸ್ತ್ರಚಿಕಿತ್ಸೆಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ.
ನಿಯಮಿತವಾಗಿ ರಕ್ತ ದಾನಿಗಳಿಲ್ಲದೆ ಇದ್ದಲ್ಲಿ, ರಕ್ತ ಪೂರೈಕೆಯು ಕಡಿಮೆಯಾಗಿ, ಅನೇಕ ಜೀವಗಳನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಮುಂಬೈನ ಎನ್ಎಚ್ ಎಸ್ಆರ್ಸಿಸಿ ಮಕ್ಕಳ ಆಸ್ಪತ್ರೆಯ ಹಿರಿಯ ಸಲಹೆಗಾರ ಮತ್ತು ಹೆಡ್ ಟ್ರಾನ್ಸ್ಫ್ಯೂಷನ್ ಮೆಡಿಸಿನ್ ಡಾ. ಕಲ್ಪನಾ ವೇಲಾಸ್ಕರ್ ಹೇಳಿದ್ದಾರೆ. ಹಾಗಾಗಿ ರಕ್ತದಾನ ಮಹಾ ದಾನ. ಜೀವ ಉಳಿಸುವುದು ಎಲ್ಲ ಕೆಲಸಗಳಿಗಿಂತ ದೊಡ್ಡದು. ಹಾಗಾಗಿ ಈ ದಿನವನ್ನು ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ.