ಕ್ರೀಡಾಂಗಣದ ಕನಸು ಕಂಡಿದ್ದ ಜನರಿಗೆ ಕಸ ವಿಲೇವಾರಿ ಘಟಕ ಶಾಕ್.. ಮೈಸೂರು ಪಾಲಿಕೆ ವಿರುದ್ಧ ಸ್ಥಳೀಯರ ಆಕ್ರೋಶ

Feb 3, 2021

ಒಂದು ಕಡೆ ಕಾಲೇಜು, ಮತ್ತೊಂದು ಕಡೆ ಬಡಾವಣೆ. ಮಧ್ಯದಲ್ಲಿ ಖಾಲಿ ಜಾಗ. ಆ ಖಾಲಿ ಜಾಗ ಕ್ರೀಡಾಂಗಣಕ್ಕೆ‌ ಮೀಸಲಾಗಿದ್ದ ಜಾಗ. ಇನ್ನೇನು ಕ್ರೀಡಾಂಗಣ ಬಂದೇ ಬಿಡ್ತು ಅನ್ನೋ ಸಮಯಕ್ಕೆ ಅಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ವೇದಿಕೆ ಸಿದ್ಧವಾಗಿದೆ. ಇದು ಸ್ಥಳೀಯರ ತಲೆ ಬಿಸಿಗೆ ಕಾರಣವಾಗಿದೆ.

ಮೈಸೂರು: ಬೇಕೇ ಬೇಕು ನ್ಯಾಯ ಬೇಕು. ಬೇಡ ಬೇಡ ಕಸ ವಿಲೇವಾರಿ ಘಟಕ‌ ಬೇಡ ಅನ್ನೋ ಷೋಷಣೆ ಕೂಗುತ್ತಾ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಏಕೆಂದರೆ ಮೈಸೂರು ಹೊರವಲಯದ ಸಾತಗಳ್ಳಿಯಲ್ಲಿರುವ ಖಾಲಿ ಮೈದಾನದಲ್ಲಿ ಕಸವಿಲೇವಾರಿ ಘಟಕ ನಿರ್ಮಾಣಕ್ಕೆ ಮುಂದಾಗಿರುವುದು.

ಹೌದು ಈ ಮೈದಾನವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ ನೀಡಲಾಗಿತ್ತು. ಇಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣ ಮಾಡುವ ಸಿದ್ಧತೆ ನಡೆದಿತ್ತು. ಎಲ್ಲರೂ ಮೈಸೂರಿನ‌ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದ ಕನಸು ಕಾಣುತ್ತಿದ್ದರು. ಆದ್ರೆ ಇದ್ದಕ್ಕಿದ್ದಂತೆ ಈಗ ಈ ಪ್ಲ್ಯಾನ್ ಕೈ ಬಿಡಲಾಗಿದೆ. ಕೇವಲ ಮೈದಾನ‌ ನಿರ್ಮಾಣದ ಪ್ಲ್ಯಾನ್ ಕೈ ಬಿಟ್ಟಿದ್ದರೆ ಏನು ಆಗುತ್ತಿರಲಿಲ್ಲ. ಆದ್ರೆ ಈ ಜಾಗದಲ್ಲಿ ಮೈದಾನದ ಬದಲು ಕಸವಿಲೇವಾರಿ ಘಟಕ ನಿರ್ಮಾಣಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಕ್ರೀಡಾಂಗಣ ಬಿಟ್ಟು ಕಸ ವಿಲೇವಾರಿ ಘಟಕ ಸ್ಥಾಪನೆ
ಯೆಸ್‌, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗೆ ನೀಡಲಾಗಿದ್ದ ಜಾಗವನ್ನು ವಾಪಸ್ ಪಡೆದಿರುವ ಮೈಸೂರು ಮಹಾನಗರ ಪಾಲಿಕೆ ಇಲ್ಲಿ ಕಸವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದೆ.‌ ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಸ್ಥಳೀಯರು ಇದರ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಇನ್ನು ಈ ಜಾಗದ ಮುಂಭಾಗ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿದೆ ಅಕ್ಕ ಪಕ್ಕದಲ್ಲಿ ಮಾನಸಿ ಬಡಾವಣೆ ಪೊಲೀಸ್ ವಸತಿಗೃಹವಿದೆ. ಹೀಗಾಗಿ ಇದು ಕಸವಿಲೇವಾರಿ ಘಟಕ ಸ್ಥಾಪನೆಗೆ ಸೂಕ್ತ ಸ್ಥಳವಲ್ಲ ಅನ್ನೋದು ಸ್ಥಳೀಯರ ಆರೋಪ.

ಇದೇ ಕಾರಣಕ್ಕೆ ಇಲ್ಲಿನ ಜನ ಇದರ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಯಾವುದೇ ಕಾರಣಕ್ಕೂ ಇಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಾರೆ ಕ್ರೀಡಾಂಗಣದ ಕನಸು ಕಂಡಿದ್ದ ಜನರಿಗೆ ಕಸ ವಿಲೇವಾರಿ ಘಟಕ ಶಾಕ್ ನೀಡಿದ್ದು ಮಾತ್ರ ಸುಳ್ಳಲ್ಲ.

Source: TV9Kannada