Vijay Diwas 2021: 1971ರ ಯುದ್ಧದಲ್ಲಿ ಪಾಕಿಸ್ತಾನ ವಿರುದ್ಧದ ಗೆಲುವಿಗೆ 50 ವರ್ಷದ ಸಂಭ್ರಮ; ‘ವಿಜಯ ದಿವಸ‘ದ ಮಹತ್ವ, ಇತಿಹಾಸ ಇಲ್ಲಿದೆ

Dec 16, 2021

ಡಿಸೆಂಬರ್ 16ನ್ನು ಭಾರತದಲ್ಲಿ ‘ವಿಜಯ ದಿವಸ’ವಾಗಿ (Vijay Diwas) ಆಚರಿಸಲಾಗುತ್ತದೆ. ಭಾರತವು 1971ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಜಯಶಾಲಿಯಾದ ನೆನಪಿಗೆ ‘ವಿಜಯ ದಿವಸ’ವನ್ನು ಆಚರಿಸಲಾಗುತ್ತದೆ. ಈ ವರ್ಷ ಈ ವಿಜಯಕ್ಕೆ 50ರ ಸಂಭ್ರಮ. ವಿಜಯ ದಿವಸದಂದು ಸೈನಿಕರ ಶೌರ್ಯವನ್ನು, ತ್ಯಾಗವನ್ನು, ಬಲಿದಾನವನ್ನು ಸ್ಮರಿಸಲಾಗುತ್ತದೆ. 1971 ರ ಯುದ್ಧದಲ್ಲಿ ಭಾರತೀಯ ಸೈನಿಕರು ಅಪಾರ ತ್ಯಾಗ ಮಾಡಿದ್ದರು. ಸುಮಾರು 3,900 ಭಾರತೀಯ ಸೈನಿಕರು ತಮ್ಮ ಪ್ರಾಣವನ್ನು ಅರ್ಪಿಸಿದರು ಮತ್ತು 9,800 ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಎಲ್ಲರ ಹೋರಾಟದಿಂದ ಲಭಿಸಿದ ಜಯದ ಸ್ಮರಣಾರ್ಥ ‘ವಿಜಯ ದಿವಸ’ವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.

ವಿಜಯ್ ದಿವಸ್‌ನ ಮಹತ್ವವೇನು?
ಪಾಕಿಸ್ತಾನದ ವಿರುದ್ಧ 1971ರ ಯುದ್ಧದ ಕೊನೆಯಲ್ಲಿ 93,000 ಪಾಕಿಸ್ತಾನಿ ಸೈನಿಕರು ಶರಣಾದರು. ಈ ಮೂಲಕ ಭಾರತವು ಜಯಸಾಧಿಸಿತು. ಇದು ಬಾಂಗ್ಲಾದೇಶದ ವಿಮೋಚನೆಗೆ ನಾಂದಿ ಹಾಡಿತು. ಪೂರ್ವ ಪಾಕಿಸ್ತಾನದಲ್ಲಿ (ಈಗ ಬಾಂಗ್ಲಾದೇಶ) ಪಾಕಿಸ್ತಾನಿ ಸೇನೆಯ ಕಮಾಂಡರ್ ಆಗಿರುವ ಲೆಫ್ಟಿನೆಂಟ್ ಜನರಲ್ ಎಎಕೆ ನಿಯಾಜಿ ಅವರು ಭಾರತದ ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರಿಗೆ ಶರಣಾಗಲು ಒಪ್ಪಿದರು. ಜನರಲ್ ನಿಯಾಜಿ ಡಿಸೆಂಬರ್ 16 ರ ಸಂಜೆ ಶರಣಾದರು ಮತ್ತು ಯುದ್ಧವನ್ನು ಭಾರತವು ಅಧಿಕೃತವಾಗಿ ಗೆದ್ದಿತು. ಅದಕ್ಕಾಗಿಯೇ ಈ ದಿನವನ್ನು ವಿಜಯ್ ದಿವಸ್ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಪ್ರತಿ ವರ್ಷ ಸ್ಮರಿಸಲಾಗುತ್ತದೆ.

ಡಿಸೆಂಬರ್ 16, 1971 ರಂದು ಏನೇನಾಯಿತು?
ಸಂಜೆ 4.30ಕ್ಕೆ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರು ಹೆಲಿಕಾಪ್ಟರ್ ಮೂಲಕ ಢಾಕಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಲೆಫ್ಟಿನೆಂಟ್ ಜನರಲ್ ಅರೋರಾ ಮತ್ತು ಜನರಲ್ ನಿಯಾಜಿ ಮೇಜಿನ ಬಳಿ ಕುಳಿತು ಶರಣಾಗತಿ ದಾಖಲೆಗಳನ್ನು ಒಟ್ಟಿಗೆ ಕಾರ್ಯಗತಗೊಳಿಸಿದರು. ಲೆಫ್ಟಿನೆಂಟ್ ಜನರಲ್ ಅರೋರಾ ಅವರಿಗೆ ಜನರಲ್ ನಿಯಾಜಿ ತಮ್ಮ ರಿವಾಲ್ವರ್ ಹಸ್ತಾಂತರಿಸಿ ಶರಣಾದರು. ಸ್ಥಳೀಯರು ನಿಯಾಜಿಯವರನ್ನು ಕೊಲ್ಲಲು ಸಿದ್ಧರಾಗಿರುವಂತೆ ಕಂಡುಬಂದಾಗ, ಹಿರಿಯ ಭಾರತೀಯ ಮಿಲಿಟರಿ ಕಮಾಂಡರ್‌ಗಳು ಅವರಿಗೆ ಯಾವುದೇ ಹಾನಿಯಾಗದಂತೆ ಹೊರಕ್ಕೆ ಕರೆತಂದರು.

Vijay Diwas photos

ಗೆಲುವಿನ ಸಂಭ್ರಮ:
ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಸಂಸತ್ ಭವನ ಸಂಭ್ರಮದಲ್ಲಿ ಮುಳುಗಿತು. ಜನರಲ್ ಮಾಣಿಕ್​ಶಾ ಅವರು ಭಾರತದ ಅದ್ಭುತ ವಿಜಯದ ಬಗ್ಗೆ ತಿಳಿಸುವಾಗ ಪಿಎಂ ಇಂದಿರಾ ಗಾಂಧಿಯವರು ತಮ್ಮ ಸಂಸತ್ ಭವನದ ಕಚೇರಿಯಲ್ಲಿ ದೂರದರ್ಶನ ಸಂದರ್ಶನ ನಡೆಸುತ್ತಿದ್ದರು. ಲೋಕಸಭೆಯಲ್ಲಿ ನಡೆದ ಬಿಸಿಬಿಸಿ ಚರ್ಚೆಯ ಸಂದರ್ಭದಲ್ಲಿ ಇಂದಿರಾಗಾಂಧಿಯವರು ಯುದ್ಧದಲ್ಲಿ ಭಾರತ ಗೆದ್ದಿದೆ ಎಂದು ಘೋಷಿಸಿದರು. ಇಂದಿರಾಗಾಂಧಿಯವರ ಘೋಷಣೆಯ ನಂತರ ಇಡೀ ಸದನದಲ್ಲಿ ಸಂತಸ ತುಂಬಿತ್ತು.

ಇಂದು ಬಾಂಗ್ಲಾದೇಶದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್:
50 ವರ್ಷಗಳ ನಂತರ ಬಾಂಗ್ಲಾದೇಶ ಇಂದು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಬಾಂಗ್ಲಾದೇಶದ ಪ್ರಥಮ ಮಹಿಳೆ ರಶೀದಾ ಹಮೀದ್ ಅವರು ಢಾಕಾದ ರಾಷ್ಟ್ರೀಯ ಪರೇಡ್ ಮೈದಾನದಲ್ಲಿ ಗೌರವ ಅತಿಥಿಯಾಗಿ ವಿಜಯ ದಿನದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Source: tv9kannada