Tirupati Laddu: ಇನ್ನುಮುಂದೆ ತಿರುಪತಿ ಲಡ್ಡುವಿನಲ್ಲಿ ಇರುವುದಿಲ್ಲ ನಂದಿನಿ ತುಪ್ಪದ ಘಮ

Jul 31, 2023

ತಿರುಪತಿ ತಿಮ್ಮಪ್ಪನಿಗೂ ಕೆಎಂಎಫ್​ಗೂ ಅವಿನಾಭಾವ ಸಂಬಂಧವಿದೆ, ಕಳೆದ 50 ವರ್ಷಗಳಿಂದ ತಿಮ್ಮಪ್ಪನ ಲಡ್ಡು ತಯಾರಿಕೆಗೆ ಹಾಗೂ ಅದರ ರುಚಿಗೋಸ್ಕರ ನಂದಿನಿ ತಪ್ಪವನ್ನೇ ಬಳಕೆ ಮಾಡಲಾಗುತ್ತಿತ್ತು, ಆದರೆ ಇನ್ನುಮುಂದೆ ನಂದಿನಿ ತುಪ್ಪದಿಂದ ಮಾಡಿದ ಲಡ್ಡು ಸಿಗುವುದಿಲ್ಲ.

ತಿರುಪತಿ ತಿಮ್ಮಪ್ಪನಿಗೂ ಕೆಎಂಎಫ್​ಗೂ ಅವಿನಾಭಾವ ಸಂಬಂಧವಿದೆ, ಕಳೆದ 50 ವರ್ಷಗಳಿಂದ ತಿಮ್ಮಪ್ಪನ ಲಡ್ಡು(Laddu) ತಯಾರಿಕೆಗೆ ಹಾಗೂ ಅದರ ರುಚಿಗೋಸ್ಕರ ನಂದಿನಿ ತಪ್ಪವನ್ನೇ ಬಳಕೆ ಮಾಡಲಾಗುತ್ತಿತ್ತು, ಆದರೆ ಇನ್ನುಮುಂದೆ ನಂದಿನಿ ತುಪ್ಪದಿಂದ ಮಾಡಿದ ಲಡ್ಡು ಸಿಗುವುದಿಲ್ಲ. ಮುಂಬರುವ ದಿನಗಳಲ್ಲಿ ತಿರುಪತಿ ಲಡ್ಡು ಪ್ರಸಾದದಲ್ಲಿ ನಂದಿನಿ ತುಪ್ಪ ಇರುವುದಿಲ್ಲ, ಸುಮಾರು 50 ವರ್ಷಗಳ ಬಳಿಕ ತಿರುಪತಿ ತಿಮ್ಮಪ್ಪ ಹಾಗೂ ನಂದಿನಿ ಸಂಬಂಧ ಕಡಿತಗೊಂಡಿದೆ.

ಇಷ್ಟು ದಿನ ತಿರುಪತಿ ಲಡ್ಡು ತಯಾರಿಕೆಗಾಗಿ ಸರಬರಾಜು ಆಗುತ್ತಿದ್ದ ತುಪ್ಪವನ್ನು ಇನ್ನುಮುಂದೆ ಕಳುಹಿಸಿಕೊಡಲಾಗುವುದಿಲ್ಲ ಎಂದು ಕೆಎಂಎಫ್​ ಅಧ್ಯಕ್ಷ ಭೀಮಾ ನಾಯಕ್ ಸ್ಪಷ್ಟಪಡಿಸಿದ್ದಾರೆ.

ತಿರುಪತಿಗೆ 6 ತಿಂಗಳಿಗೆ 14 ಲಕ್ಷ ಕೆಜಿಯಷ್ಟು ತುಪ್ಪ ನೀಡಬೇಕು, ಇಷ್ಟು ದೇವಸ್ಥಾನಕ್ಕೆಂದು ರಿಯಾಯಿತಿ ದರದಲ್ಲಿ ತುಪ್ಪ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ಸಲ ಕೆಎಂಎಫ್ ರಿಯಾಯಿತಿ ದರದಲ್ಲಿ ನಂದಿನಿ ತುಪ್ಪ ನೀಡುವ ಟೆಂಡರ್​ ಅನ್ನು ಕೈಬಿಟ್ಟಿದೆ, ಕಡಿಮೆ ಬೆಲೆಗೆ ತುಪ್ಪ ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಕರ್ನಾಟಕದಲ್ಲಿ ಹಾಲಿನ ಕೊರತೆ ತಲೆದೂರಿದೆ, ಹೀಗಾಗಿ ಅದರ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವುದು ನಮಗೂ ಕೂಡ ಅನಿವಾರ್ಯ, ಹೀಗಾಗಿ ನಂದಿನಿ ತುಪ್ಪದ ಬೆಲೆಯನ್ನು ಕೂಡ ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ನಂದಿನಿ ತುಪ್ಪ ಮಾರಾಟ ಮಾಡದಿರಲು ಕೆಎಂಎಫ್​ ನಿರ್ಧರಿಸಿದೆ.

ಆಗಸ್ಟ್ 1 ರಿಂದ ಹಾಲು ಬೆಲೆ ಹೆಚ್ಚಾಗುವುದರಿಂದ ನಾವು ತುಪ್ಪಕ್ಕೆ ಹೆಚ್ಚಿನ ಬೆಲೆಗೆ ಬೇಡಿಕೆ ಇಟ್ಟಿದ್ದೇವೆ. ಗುಣಮಟ್ಟದಿಂದಾಗಿ ಕೆಎಂಎಫ್​ ತುಪ್ಪ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಹೊಂದಿದೆ. ಯಾವುದೇ ಕಂಪನಿ ಕಡಿಮೆ ಬೆಲೆಗೆ ಬಿಡ್ ಮಾಡಿದರೆ ಅವರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತಾರೆ, ಲಡ್ಡುಗಳಿಗೆ ರುಚಿ ನೀಡುವಲ್ಲಿ ನಂದಿನಿ ತುಪ್ಪದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

Source:TV9Kannada