Tamil Nadu Chopper Crash: ಸೇನಾ ಹೆಲಿಕಾಪ್ಟರ್​ ಅಪಘಾತದಲ್ಲಿ ಸಿಡಿಎಸ್​ ಬಿಪಿನ್ ರಾವತ್ ಪತ್ನಿ ದುರ್ಮರಣ; ರಾವತ್ ಸ್ಥಿತಿ ಗಂಭೀರ

Dec 8, 2021

ಇಂದು ತಮಿಳುನಾಡಿನ ಕುನೂರ್​ ಬಳಿ Mi-17V5 ಸೇನಾ ಹೆಲಿಕಾಪ್ಟರ್​ ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಪತ್ನಿ ಮಧುಲಿಕಾ ರಾವತ್ ಸೇರಿ ಐವರು ದುರ್ಮರಣಕ್ಕೀಡಾಗಿದ್ದಾರೆ. ಇನ್ನು ಬಿಪಿನ್ ರಾವತ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಒಟ್ಟಾರೆ ಇದರಲ್ಲಿ 14 ಜನ ಇದ್ದರು ಎಂದು ಮೂಲಗಳು ತಿಳಿಸಿವೆ. ಅದರಲ್ಲೀಗ 5 ಮಂದಿಯ ಮೃತದೇಹ ಪತ್ತೆಯಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದರೂ, ಇನ್ನೂ ಮೃತರು ಯಾರ್ಯಾರು? ಗಾಯಗೊಂಡವರು ಯಾರು ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.

ಅದರಲ್ಲೂ ಈಗ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​​ರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಬೇಕಿದೆ. ಸದ್ಯ ಮೂಲಗಳ ಪ್ರಕಾರ ಬಿಪಿನ್​ ರಾವತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಇನ್ನು ಸೇನಾ ವಿಮಾನ ಪತನವಾಗಿದ್ದು ನೀಲಗಿರಿ ಬೆಟ್ಟ ಪ್ರದೇಶದಲ್ಲಿ ಆಗಿದ್ದರಿಂದ ರಕ್ಷಣಾ ಕಾರ್ಯಾಚರಣೆಯೂ ತುಸು ತೊಡಕಾಗಿದೆ. ಸ್ಥಳೀಯರ ಸಹಾಯದಿಂದ ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಮತ್ತು ಮೃತರನ್ನು ಸ್ಥಳೀಯ ಮಿಲಿಟರಿ ಆಸ್ಪತ್ರೆಗೆ ಕಳಿಸಲಾಗಿದೆ. ತಮಿಳುನಾಡು ಸರ್ಕಾರದ ಉನ್ನತ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ ಕೂಡ ಅಪಘಾತವಾದ ಸ್ಥಳಕ್ಕೆ ಧಾವಿಸಿದ್ದಾರೆ. ಅಂದಹಾಗೆ ಈ ಹೆಲಿಕಾಪ್ಟರ್​ ದೆಹಲಿಯಿಂದ ಸುಲುರ್​ಗೆ ಹೊರಟಿತ್ತು ಎಂದು ಮಾಹಿತಿ ಲಭ್ಯವಾಗಿದೆ.

Source: tv9kannada