2019ರ ಬೋಧನಾ ಶುಲ್ಕದ ಶೇ. 70ರಷ್ಟು ಹಣ ಪಡೆಯಬೇಕು. ಯಾವುದೇ ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ: ರಾಜ್ಯ ಸರ್ಕಾರದ ಕಟ್ಟಾಜ್ಞೆ

Jan 30, 2021

1, 2 ಅಥವಾ 3 ಕಂತುಗಳಲ್ಲೂ ಶುಲ್ಕ ಪಡೆಯಬಹುದು. ಆಡಳಿತ, ಹೆಚ್ಚುವರಿ ಶುಲ್ಕ ಪಡೆದಿದ್ದರೆ ಅದನ್ನು ಮುಂದಿನ ವರ್ಷಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರು: ಕೊವಿಡ್ ಕಾರಣದಿಂದ ಎಲ್ಲರಿಗೂ ಆರ್ಥಿಕವಾಗಿ ಸಂಕಷ್ಟ ಉಂಟಾಗಿದೆ. ಒಂದೆಡೆ, ಪೋಷಕರು ಶುಲ್ಕ ಪಾವತಿಸದಿರುವ ಸ್ಥಿತಿಯಲ್ಲಿ ಇದ್ದರೆ, ಮತ್ತೊಂದೆಡೆ ಶಾಲೆಯಲ್ಲಿ ಶಿಕ್ಷಕರಿಗೆ ವೇತನ ಕೊಡಲಾಗದ ಸ್ಥಿತಿ ಇದೆ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಖೇದ ವ್ಯಕ್ತಪಡಿಸಿದ್ದಾರೆ.

ಪರೀಕ್ಷಾ ದಿನಾಂಕ ನಿಗದಿ, ಶಾಲೆ ಪುನಾರಂಭದ ಬಗ್ಗೆ ಇರುವ ಗೊಂದಲ ಹಾಗೂ ಶುಲ್ಕ ಪಾವತಿ ವಿಚಾರದ ಸಮಸ್ಯೆಗಳ ಬಗ್ಗೆ ರಾಜ್ಯ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಬಾರಿ ಶಾಲೆಗಳು, 2019ರ ಬೋಧನಾ ಶುಲ್ಕದ ಶೇ. 70ರಷ್ಟು ಶುಲ್ಕವನ್ನು ಪಡೆಯಬೇಕು. ಶಾಲೆಗಳು ಯಾವುದೇ ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ. ಟ್ರಸ್ಟ್​ಗಳ ಅಭಿವೃದ್ಧಿಗೆ ಹಣ ತೆಗೆದುಕೊಳ್ಳುವಂತಿಲ್ಲ. ರಾಜ್ಯದ ಎಲ್ಲ ಮಾದರಿ ಶಾಲೆಗಳಿಗೂ ಈ ಶುಲ್ಕ ಅನ್ವಯ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

1, 2 ಅಥವಾ 3 ಕಂತುಗಳಲ್ಲೂ ಶುಲ್ಕ ಪಡೆಯಬಹುದು. ಆಡಳಿತ, ಹೆಚ್ಚುವರಿ ಶುಲ್ಕ ಪಡೆದಿದ್ದರೆ ಅದನ್ನು ಮುಂದಿನ ವರ್ಷಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಶಾಲೆಗೆ ದಾಖಲಾಗುವಾಗ ಒಂದು ಕಂತಿನ ಶುಲ್ಕ ಪಾವತಿಯಾಗುತ್ತದೆ. ಈಗ ಎರಡನೇ ಕಂತಿನ ಶುಲ್ಕದ ಬಗ್ಗೆ ಚರ್ಚೆಯಾಗುತ್ತಿದೆ. ನಾನು ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದಿಲ್ಲ. ಈ ವರ್ಷ ಯಾವ ಶಾಲೆಯೂ ಶುಲ್ಕ ಹೆಚ್ಚಳ ಮಾಡಬಾರದು ಎಂದು ತಿಳಿಸಿದ್ದಾರೆ.

ಶುಲ್ಕ ನಿಯಂತ್ರಣ ಕಾಯ್ದೆ ಬಗ್ಗೆ ಹೈಕೋರ್ಟ್​ ಒಪ್ಪಿದೆ. ಸರ್ಕಾರ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಿಸಬಹುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. 2020-21 ನೇ ಸಾಲಿಗೆ ಸಿಮೀತಗೊಂಡಂತೆ ಈ ನಿಯಮ ರೂಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಶಿಕ್ಷಣ ಇಲಾಖೆ ಇರೋದು ಯಾರ ಕತ್ತು ಹಿಸುಕೋಕು ಅಲ್ಲ. ನಾವು ಯಾವ ಲಾಬಿಗೂ ಶರಣಾಗೋದಿಲ್ಲ. ಅನೇಕ ಪೋಷಕರು ರಾತ್ರಿಯಿಡೀ ಕ್ಯೂ ನಿಂತು ಶಾಲೆ ಸೀಟ್ ಪಡೆದಿದ್ದಾರೆ. ಆಗ ಪೋಷಕರಿಗೆ ಶಾಲೆ ಬಗ್ಗೆ ಒಲವಿತ್ತು. ಆದರೆ ಈಗ ಕೊರೊನಾದಿಂದ ಇಬ್ಬರ ಸಂಬಂಧವೂ ಹದಗೆಟ್ಟಿದೆ.

ಶಾಲೆ ಆಡಳಿತ ಮಂಡಳಿ ಸಮಿತಿ ರಚಿಸಬೇಕು. ಅಲ್ಲಿ ಪೋಷಕರು, ಹಾಗೂ ಶಾಲೆಯವರು ಚರ್ಚೆ ಮಾಡಬೇಕು. ಆದರೆ ಈ ರೀತಿ ಕೆಲಸಗಳು ಆಗಿಲ್ಲ. ಹೀಗಾಗಿ ನಮ್ಮ ಆಯುಕ್ತರು ಮತ್ತೆ ಎಲ್ಲರ ಜತೆ ಚರ್ಚೆ ಮಾಡಿದ್ದಾರೆ. ಎಲ್ಲರೂ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವರ್ಷ ಕೊವೀಡ್ ಬಂದ ಹಿನ್ನೆಲೆ, ಯಾವುದೇ ಶಾಲೆ ಶುಲ್ಕ ಹೆಚ್ಚಳ ಮಾಡಬಾರದು. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಾಡಬಾರದು ಅಂತ ಸುತ್ತೋಲೆ ಹೊರಡಿಸಿದ್ದೆ. ಶಿಕ್ಷಣ ತಜ್ಞರ ಜತೆ ಚರ್ಚೆ ನಡೆಸಿದ್ದೇನೆ. ಮೈಸೂರು ಭಾಗದ ಶಾಲೆ ಕಾಲೇಜು ಹಾಗೂ ದ. ಕ‌. ಭಾಗದ ಶಾಲಾ ಸಂಘಟನೆಗಳ‌ ಜತೆ ಚರ್ಚೆ ಆಗಿದೆ. ಕ್ಯಾಮ್ಸ್, ರುಪ್ಸಾ, ಕುಸುಮ, ಸಿಬಿಎಸ್​ಸಿ ಜತೆ ಕೂಡ ಚರ್ಚೆ ಮಾಡಿದ್ದೇವೆ. ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಜತರಗೂ ಈ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಚಾರದಲ್ಲಿ ಏನಾದರೂ ತಕರಾರು ಬಂದರೆ, ಒಂದು ಅಧಿಕಾರಯುತ ಸಮಿತಿ ರಚನೆ ಮಾಡಿ, ಅದರ ಮೂಲಕ ದೂರು ಪಡೆಯುತ್ತೇವೆ. ಪೋಷಕರು ಈಗಾಗಲೇ ಫೀಸ್ ಜಾಸ್ತಿ ಕಟ್ಟಿದ್ರೆ, ಮುಂದಿನ ವರ್ಷದ ಶುಲ್ಕದ ಜೊತೆ ಅದನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು. ಈ ವರ್ಷ ನಾವೆಲ್ಲಾ ಕೊಟ್ಟು ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳೋಣ ಎಂದು ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

Source: TV9 Kannada