ಜಾವೆಲಿನ್‍ನಲ್ಲಿ ಪಂಜಾಬ್, ಹರಿಯಾಣ ಹಿಂದಿಕ್ಕಿ ಕರ್ನಾಟಕಕ್ಕೆ ಚಿನ್ನ ತಂದು ಕೊಟ್ಟ ಕರಿಷ್ಮಾ

Oct 1, 2021

ಉಡುಪಿ: ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಚಾಂಪಿಯನ್ ಶಿಪ್ ನಲ್ಲಿ ಉಡುಪಿ ಜಿಲ್ಲೆಯ ಕರಿಷ್ಮಾ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಪಂಜಾಬ್ ಹರಿಯಾಣವನ್ನು ಹಿಂದಿಕ್ಕಿ ಕರುನಾಡಿನ ಯುವತಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.

ಬ್ರಹ್ಮಾವರ ತಾಲೂಕಿನ ಬಾರ್ಕೂರು ನಿವಾಸಿಯಾಗಿರುವ ಕರಿಷ್ಮಾ ಸನಿಲ್, ಎಲ್‍ವಿಡಿ ಕಾಲೇಜು ರಾಯಚೂರಿನಲ್ಲಿ ಬಿಎಸ್‍ಸಿ ಅಂತಿಮ ವರ್ಷ ಪದವಿ ಕಲಿಯುತ್ತಿದ್ದಾರೆ. ಸುದರ್ಶನ್ ಅನಿಲ್ ಮತ್ತು ಇಂದಿರಾ ದಂಪತಿ ಪುತ್ರಿ ಕರಿಷ್ಮಾ ಸನಿಲ್, ಬ್ರಹ್ಮಾವರ ಬೋರ್ಡ್ ಸಂಸ್ಥೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾರೆ. ದೆಹಲಿಯಲ್ಲಿ 23 ವಯೋಮಿತಿ ಒಳಗಿನ ಮೊದಲ ಚಾಂಪಿಯನ್ ಶಿಪ್ ನಡೆಯುತ್ತಿದ್ದು, ಅಂತರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಕರೀಷ್ಮಾ ಪಾಲ್ಗೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರ ಟ್ರೈನರ್ ಕಾಶಿನಾಥ್ ನಾಯಕ್ ಕರಿಷ್ಮಾಗೆ ಆನ್ ಲೈನ್ ಟ್ರೈನಿಂಗ್ ಕೊಡುತ್ತಿದ್ದಾರೆ.

ಕರಿಷ್ಮಾ ಬಾರಾಳಿ ಹೈಸ್ಕೂಲ್ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದು, ದೆಹಲಿ ಚಾಂಪಿಯನ್ ಶಿಪ್ ನಲ್ಲಿ 46.52 ಮೀಟರ್ ದೂರಕ್ಕೆ ಈಟಿ ಎಸೆದು ಸಾಧನೆ ಮಾಡಿದ್ದಾರೆ. ಪಂಜಾಬ್ ಮತ್ತು ರಾಜಸ್ಥಾನದ ಅಥ್ಲೆಟ್ ಗಳನ್ನು ಹಿಂದಿಕ್ಕಿದ ಕರ್ನಾಟಕದ ಕರಿಷ್ಮಾ, ಮುಂದೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಉತ್ಸಾಹ ತೋರಿದ್ದಾರೆ. ದೇಶಕ್ಕೆ ಪದಕ ತಂದುಕೊಡುವ ನಿರೀಕ್ಷೆ ಹುಟ್ಟಿಸಿದ್ದಾರೆ. ಅಥ್ಲೆಟಿಕ್ಸ್‌ಗಾಗಿ ಸಂಪೂರ್ಣವಾಗಿ ಕರಿಷ್ಮಾ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ದಿನಪೂರ್ತಿ ಮೈದಾನದಲ್ಲಿ ತರಬೇತಿ ಮಾಡುವ ಕರಿಷ್ಮಾ, ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸುವ ಎಲ್ಲ ನಿರೀಕ್ಷೆಗಳು ಇವೆ ಎಂದು ಶಿಕ್ಷಕ ರಾಜಾರಾಮ್ ಬಾರಾಳಿ ಹೇಳಿದ್ದಾರೆ. ಸರ್ಕಾರ- ಖಾಸಗಿ ಸಂಸ್ಥೆಗಳು ಆರ್ಥಿಕ ಸಹಾಯ ಮಾಡಿದರೆ, ಗ್ರಾಮೀಣ ಪ್ರತಿಭೆ ವಿಶ್ವಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

Source:publictvkannada