ಹಾಸನ ರೈತರು, ನಟ ಯಶ್ ಕುಟುಂಬಸ್ಥರ ನಡುವಿನ ವಿವಾದ ಇತ್ಯರ್ಥ

Mar 16, 2021

Yash | ರಸ್ತೆ ನಿರ್ಮಾಣಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯಶ್ ಪೋಷಕರು ಹೊಸ ರಸ್ತೆ ನಿರ್ಮಾಣ ಮಾಡುವ ಯೋಜನೆಯನ್ನು ಕೈಬಿಡಲು ಚಿಂತಿಸಿದ್ದಾರೆ. ಹಳೇ ರಸ್ತೆಯಲ್ಲೇ ಫಾರ್ಮ್‌ಹೌಸ್‌ಗೆ ತೆರಳಲು ನಿರ್ಧಾರ ಮಾಡಿದ್ದಾರೆ.

ಹಾಸನ: ನಟ ಯಶ್ ಫಾರ್ಮ್‌ಹೌಸ್‌ಗೆ ರಸ್ತೆ ನಿರ್ಮಾಣ ವಿವಾದಕ್ಕೆ ಸಂಬಂಧಿಸಿ ಸೌಹಾರ್ದಯುತ ಮಾತುಕತೆ ಮೂಲಕ ಹಾಸನ ರೈತರು ಮತ್ತು ಯಶ್ ಕುಟುಂಬಸ್ಥರ ನಡುವಿನ ವಿವಾದ ಇತ್ಯರ್ಥಗೊಂಡಿದ್ದು ರೈತರು ರಸ್ತೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಹಾಸನ ತಾಲೂಕಿನ ದುದ್ದ ಹೋಬಳಿಯ ತಿಮ್ಲಾಪುರ ಬಳಿಯ ಯಶ್ ಫಾರ್ಮ್‌ಹೌಸ್‌ಗೆ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ರೈತರ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಮಾರ್ಚ್ 9ರಂದು ಯಶ್ ಪೋಷಕರು ಮತ್ತು ರೈತರ ನಡುವೆ ಗಲಾಟೆ ನಡೆದಿತ್ತು. ಪ್ರಕರಣ ಸಂಬಂಧ ಪೊಲೀಸ್ ಠಾಣೆ ಮೊರೆ ಹೋಗಿದ್ದರು. ಸದ್ಯ ಇದೀಗ ಸೌಹಾರ್ದಯುತ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ.

ರಸ್ತೆ ನಿರ್ಮಾಣಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯಶ್ ಪೋಷಕರು ಹೊಸ ರಸ್ತೆ ನಿರ್ಮಾಣ ಮಾಡುವ ಯೋಜನೆಯನ್ನು ಕೈಬಿಡಲು ಚಿಂತಿಸಿದ್ದಾರೆ. ಹಳೇ ರಸ್ತೆಯಲ್ಲೇ ಫಾರ್ಮ್‌ಹೌಸ್‌ಗೆ ತೆರಳಲು ನಿರ್ಧಾರ ಮಾಡಿದ್ದಾರೆ. ಗಲಾಟೆ ಸಂಬಂಧ ಇಂದು ಮಧ್ಯಾಹ್ನ ಫಾರ್ಮ್‌ಹೌಸ್ ಬಳಿಯ ದೇವಾಲಯದಲ್ಲಿ ರೈತರು ಮತ್ತು ಯಶ್ ಕುಟುಂಬಸ್ಥರ ಮಧ್ಯೆ ಮಾತುಕತೆ ನಡೆಯಿತು. ಈ ವೇಳೆ ಚರ್ಚೆ ನಡೆಸಿ ಕೊನೆ ಹಂತದ ತೀರ್ಮಾನಕ್ಕೆ ಬಂದಿದ್ದಾರೆ. ಹೊಸ ರಸ್ತೆ ನಿರ್ಮಾಣ ಮಾಡುವುದಿಲ್ಲ ಎಂಬ ನಿರ್ಧಾರದೊಂದಿಗೆ ಸೌಹಾರ್ದಯುತವಾಗಿ ಸಮಸ್ಯೆ ಇತ್ಯರ್ಥವಾಗಿದೆ.

ಘಟನೆ ವಿವರ
ಯಶ್ ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ನಟ ಯಶ್ ತಂದೆ-ತಾಯಿ ಮತ್ತು ಗ್ರಾಮಸ್ಥರ ನಡುವೆ ಮಂಗಳವಾರ (ಮಾರ್ಚ್ 9)ರಂದು ಗಲಾಟೆ ನಡೆದಿತ್ತು. ಯಶ್ ತಂದೆ ಅರುಣ್ ಕುಮಾರ್, ತಾಯಿ ಪುಷ್ಪ ಜಮೀನಿನ ಬಳಿ ಜೆಸಿಬಿಯಿಂದ ಕೆಲಸ ಮಾಡಿಸುತ್ತಿದ್ದರು. ಈ ವೇಳೆ ಕೆಲಸ ಮಾಡಿಸದಂತೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದಾರೆ. ಬಳಿಕ ಯಶ್ ಅಭಿಮಾನಿಗಳು ಮತ್ತು ಗ್ರಾಮಸ್ಥರ ನಡುವೆ ಗಲಾಟೆ ಶುರುವಾಗಿ ಅದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಬಳಿಕ ದುದ್ದ ಪೊಲೀಸರ ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿದಿತ್ತು.

ಇನ್ನು ಘಟನೆ ಸಂಬಂಧ ಮಾಹಿತಿ ಪಡೆಯಲು ಪೊಲೀಸ್ ಠಾಣೆಗೆ ನಟ ಯಶ್ ಭೇಟಿ ನೀಡಿ’ರಸ್ತೆ ವಿವಾದ ಒಂದೂವರೆ ವರ್ಷದ ಹಿಂದೆಯೇ ಮುಗಿದಿದೆ. ಹೀಗೆಲ್ಲ ಬಣ್ಣ ಕಟ್ಟುತ್ತಾರೆ, ನೀವು ನಂಬುವುದಕ್ಕೆ ಹೋಗಬೇಡಿ. ತಂದೆ, ತಾಯಿಗೆ ಮಾತಾಡಿದ್ರೆ ಇಮೇಜ್​ ಎಂದು ಕೂರಲಾಗಲ್ಲ. ಬಡವರಿಗೆ ಸ್ಕೂಲ್ ನಿರ್ಮಿಸ್ತಾರಾ.. ಬೇಕಿದ್ದರೆ ಕೇಳಲಿ ಕೊಡ್ತೇವೆ. ನಾವೇ ಹತ್ತು ಎಕರೆ ಜಮೀನು ಕೊಡುತ್ತೇವೆ’ ಎಂದು ದುದ್ದ ಪೊಲೀಸ್​ ಠಾಣೆ ಬಳಿ ನಟ ಯಶ್ ಘಟನೆ ಸಂಬಂಧ ಬೇಸರ ವ್ಯಕ್ತಪಡಿಸಿದ್ದರು. ಈ ವೇಳೆ ನಟ ಯಶ್ ಕಾರು ತಡೆದು ಗ್ರಾಮಸ್ಥರು 420 ಯಶ್ ಎಂದು ಕೂಗಿ ಆಕ್ರೋಶ ಹೊರ ಹಾಕಿದ್ರು. ನಂತರ ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಸದ್ಯ ಈಗ ಈ ಸಮಸ್ಯೆ ಅಂತ್ಯಗೊಂಡಿದೆ.

Source:Tv9Kannada