ಮೈಸೂರು ಮೃಗಾಲಯದ ಪ್ರಾಣಿಗಳಿಗಾಗಿ ಬಂತು ಶವರ್​: ಅಧಿಕಾರಿಗಳ ಈ ಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

Mar 20, 2021

ನೀರಿನ ಸ್ಪ್ರಿಂಕ್ಲರ್​ನ ಪ್ರತಿಯೊಂದು ಪ್ರಾಣಿಯ ಬೋನ್ ಬಳಿಯೂ ಅಳವಡಿಸಲಾಗಿದೆ. ಮಧ್ಯಾಹ್ನದ ವೇಳೆ ಈ ಸ್ಪ್ರಿಂಕ್ಲರ್ ಆನ್ ಮಾಡಲಾಗುತ್ತೆ.

ಮೈಸೂರು: ಬಿಸಿಲ ಬೇಗೆ ದಿನೇ ದಿನೇ ಹೆಚ್ಚುತ್ತಿದೆ. ಬೇಸಿಗೆ ಜನರನ್ನ ಮಾತ್ರವಲ್ಲ ಪ್ರಾಣಿಗಳಿಗೂ ಸಂಕಷ್ಟ ತಂದೊಡ್ಡಿದೆ. ಅದರಲ್ಲೂ ಪಕ್ಷಿಗಳು ಹನಿ ಹನಿ‌ಗೂ ಪರದಾಡುತ್ತಿವೆ. ಆದರೆ ಈ ಬಿರು ಬೇಸಿಗೆಯಲ್ಲೂ ಮೃಗಾಲಯದ ಪ್ರಾಣಿ-ಪಕ್ಷಿಗಳು ಮಾತ್ರ ಕೂಲಾಗಿವೆ. ಪ್ರಾಣಿಗಳಿಗಾಗಿ ಮೈಸೂರು ಮೃಗಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಝೂನ ಪ್ರಾಣಿಗಳಿಗಾಗಿ ಬೇಸಿಗೆ ಹಿನ್ನೆಲೆಯಲ್ಲಿ ಮೃಗಾಲಯದ ಅಧಿಕಾರಿಗಳು ಮಾಡಿರುವ ವ್ಯವಸ್ಥೆ ಅಚ್ಚುಕಟ್ಟಾಗಿದೆ. ಬಿರುಬಿಸಿಲಿಗೆ ಕಂಗಾಲಾಗಿದ್ದ ಮೈಸೂರು ಮೃಗಾಲಯದ ಪ್ರಾಣಿಗಳು ಕೂಲ್ ಕೂಲ್ ಆಗಿವೆ.

ಬೇಸಿಗೆ ಬಂದರೆ ಸಾಕು ಮೂಕ ಪ್ರಾಣಿಗಳ ವೇದನೆ ಹೇಳತೀರದು..
ಇದಕ್ಕೆ ಕಾರಣ ಮೈಸೂರು ಮೃಗಾಲಯದಲ್ಲಿ ಅಳವಡಿಸಿರುವ ನೀರು ಸಿಂಪಡಿಸುವ ಯಂತ್ರಗಳು ಮತ್ತು ಆನೆಗಳಿಗಾಗಿ ವಿಶೇಷವಾಗಿ ಸಿದ್ಧಪಡಿಸಿರುವ ಶವರ್. ಯಾಕಂದ್ರೆ ಬೇಸಿಗೆ ಬಂದರೆ ಸಾಕು ಮೂಕ ಪ್ರಾಣಿಗಳ ವೇದನೆ ಹೇಳತೀರದು. ಇದನ್ನ ಅರಿತುಕೊಂಡಿರುವ ಅಧಿಕಾರಿಗಳು, ಮೃಗಾಲಯದ ಪ್ರಾಣಿಗಳಿಗೆ ಸ್ಪ್ರಿಂಕ್ಲರ್​ನ ಅಳವಡಿಸಿದ್ದಾರೆ. ಈ ಮೂಲಕ ಪ್ರಾಣಿಗಳ ಮೇಲೆ ನೀರಿನ ಸಿಂಚನ ಮಾಡಲಾಗುತ್ತಿದೆ. ಪ್ರಾಣಿಗಳು ಕೂಲಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ.

ಮಧ್ಯಾಹ್ನದ ವೇಳೆ ಈ ಸ್ಪ್ರಿಂಕ್ಲರ್ ಆನ್ ಮಾಡಲಾಗುತ್ತೆ..
ನೀರಿನ ಸ್ಪ್ರಿಂಕ್ಲರ್​ನ ಪ್ರತಿಯೊಂದು ಪ್ರಾಣಿಯ ಬೋನ್ ಬಳಿಯೂ ಅಳವಡಿಸಲಾಗಿದೆ. ಮಧ್ಯಾಹ್ನದ ವೇಳೆ ಈ ಸ್ಪ್ರಿಂಕ್ಲರ್ ಆನ್ ಮಾಡಲಾಗುತ್ತೆ. ಸ್ಪ್ರಿಂಕ್ಲರ್​ಗಳಿಂದ ಚಿಮ್ಮುವ ನೀರನ್ನು ಝೂನ ಪ್ರಾಣಿಗಳು ಎಂಜಾಯ್ ಮಾಡುತ್ತಿವೆ. ಇದರ ಜೊತೆಗೆ ಬೇಸಿಗೆ ಹಿನ್ನೆಲೆ ಪ್ರಾಣಿಗಳ ಆಹಾರ ಪದ್ಧತಿಲ್ಲೂ ಬದಲಾವಣೆ ಮಾಡಲಾಗಿದೆ. ಸಸ್ಯಹಾರಿ ಪ್ರಾಣಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ನೀಡಲಾಗುತ್ತಿದೆ.

 

ಪ್ರವಾಸಿಗರಿಗೂ ತಂಪಾದ ವಾತಾವರಣ ನಿರ್ಮಾಣವಾಗಿದೆ..
ಎಳನೀರು ಸೇರಿದಂತೆ ದ್ರವರೂಪದ ಪದಾರ್ಥಗಳನ್ನ ನೀಡಲಾಗುತ್ತಿದೆ. ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಝೂ ಆಡಳಿತ ಮಂಡಳಿ ಈ ಕ್ರಮಕೈಗೊಂಡಿದ್ದು, ಬೇಸಿಗೆ ಅಂತ್ಯವಾಗುವವರೆಗೆ ಈ ರೀತಿ ಪ್ರಾಣಿಗಳಿಗೆ ಕೊಡುವ ಆಹಾರ ಪದ್ಧತಿಯಲ್ಲು ಬದಲಾವಣೆ ಇರುತ್ತದೆ. ಇದರ ಜೊತೆ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೂ ತಂಪಾದ ವಾತಾವರಣ ನಿರ್ಮಾಣವಾಗಿದೆ. ಒಟ್ಟಾರೆ, ಪ್ರಾಣಿಗಳಿಗೆ ತಂಪಾದ ವಾತಾವರಣ ನಿರ್ಮಾಣ ಮಾಡಿರುವುದರಿಂದ ಝೂನ ಪ್ರಾಣಿಗಳು ಸಖತ್ ಖುಷಿಯಾಗಿವೆ. ಅಧಿಕಾರಿಗಳ ಈ ಪ್ರಯತ್ನಕ್ಕೆ ಪ್ರವಾಸಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 

Source:TV9Kannada