ದರ್ಶನ್-ಸುದೀಪ್ ಒಂದಾಗಿಸಲು ಪಣ ತೊಟ್ಟ ಫ್ಯಾನ್ಸ್! ಈ ಮನವಿಗೆ ಒಪ್ಪಿಕೊಳ್ತಾರಾ ಕಿಚ್ಚ-ದಚ್ಚು?
ಕಿಚ್ಚ ಸುದೀಪ್ ಮತ್ತು ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರನ್ನು ಒಂದಾಗಿಸಲು ಇಬ್ಬರ ಅಭಿಮಾನಿಗಳು ಪಟ ತೊಟ್ಟಿದ್ದಾರೆ. ತಾವು ಅಂದುಕೊಂಡಿದ್ದನ್ನು ನಿಜವಾಗಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.
ಕನ್ನಡ ಚಿತ್ರರಂಗ ಟಾಪ್ ನಟರಾದ ದರ್ಶನ್ ಮತ್ತು ಸುದೀಪ್ ನಡುವಿನ ಸ್ನೇಹ ಮುರಿದು ಬಿದ್ದು ನಾಲ್ಕು ವರ್ಷ ಕಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಆಗಾಗ ಕಿತ್ತಾಡುತ್ತಲೇ ಇರುತ್ತಾರೆ. ಹಾಗಂತ ಎಲ್ಲ ಅಭಿಮಾನಿಗಳೂ ಇದೇ ರೀತಿ ಇರುತ್ತಾರೆ ಅಂತೇನಿಲ್ಲ. ದರ್ಶನ್ ಮತ್ತು ಸುದೀಪ್ ಒಂದಾಗಲಿ ಎಂದು ಬಯಸುವ ಲಕ್ಷಾಂತರ ಫ್ಯಾನ್ಸ್ ಇದ್ದಾರೆ. ಅವರೆಲ್ಲರೂ ಈಗ ಟ್ವಿಟರ್ನಲ್ಲಿ ಹೊಸ ಅಭಿಯಾನ ಶುರು ಮಾಡಿದ್ದಾರೆ.
ಈ ಸ್ಟಾರ್ ನಟರಿಬ್ಬರು ಒಂದಾದರೆ ಅದರಿಂದ ಕನ್ನಡ ಚಿತ್ರಕ್ಕೆ ಒಳ್ಳೆಯದಾಗಲಿದೆ ಎಂದು ಅನೇಕರು ಅಭಿಪ್ರಾಯ ಪಡುತ್ತಿದ್ದಾರೆ. ಇಬ್ಬರೂ ಜೊತೆಯಾಗಿ ಇರುವ ಫೋಟೋಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಳ್ಳಲಾಗುತ್ತಿದೆ. ಅದರ ಜೊತೆಗೆ #DbossKicchaComeTogether ಎಂಬ ಹ್ಯಾಶ್ ಟ್ಯಾಗ್ ಬಳಸಲಾಗುತ್ತಿದೆ. 10 ಸಾವಿರಕ್ಕೂ ಅಧಿಕ ಬಾರಿ ಈ ಹ್ಯಾಶ್ ಟ್ಯಾಗ್ ಬಳಕೆ ಆಗಿದ್ದು, ಸದ್ಯ ಟ್ವಿಟರ್ನಲ್ಲಿ ಟ್ರೆಂಡ್ ಸೃಷ್ಟಿ ಆಗುತ್ತಿದೆ.
ಅಭಿಮಾನಿಗಳು ಮಾತ್ರವಲ್ಲದೆ, ಕನ್ನಡ ಚಿತ್ರರಂಗದ ಅನೇಕರು ಇದನ್ನೇ ಬಯಸುತ್ತಿದ್ದಾರೆ. ಸ್ಯಾಂಡಲ್ವುಡ್ನ ಒಗ್ಗಟ್ಟಿಗಾಗಿ ಪ್ರಾರ್ಥಿಸಲಾಗುತ್ತಿದೆ. #DbossKicchaComeTogether ಅಭಿಯಾನಕ್ಕೆ ಇನ್ನಷ್ಟು ಬಲ ಬರುವ ನಿರೀಕ್ಷೆ ಇದೆ. ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಜೊತೆಯಾಗಿ ಈ ರೀತಿ ಬೇಡಿಕೆ ಇಟ್ಟಿರುವುದನ್ನು ದರ್ಶನ್ ಮತ್ತು ಸುದೀಪ್ ಖಂಡಿತ ಗಮನಿಸಿರುತ್ತಾರೆ. ಅದಕ್ಕೆ ಅವರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬುದನ್ನು ತಿಳಿದುಕೊಳ್ಳುವ ಕೌತುಕ ಈಗ ನಿರ್ಮಾಣ ಆಗಿದೆ.
ದರ್ಶನ್ ಹಾಗೂ ಸುದೀಪ್ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇಬ್ಬರಿಗೂ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ-ದಚ್ಚು ಫ್ಯಾನ್ಸ್ ನಡುವೆ ವಾಗ್ವಾದಗಳು ನಡೆಯುವುದು ಸಹಜ. ಅದರ ನಡುವೆಗೂ ಅಭಿಮಾನಿಗಳೆಲ್ಲ ಸೇರಿ ಇಂಥ ಒಳ್ಳೆಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸ್ನೇಹದಲ್ಲಿ ಒಂದು ಮಾತು ಬರುತ್ತೆ ಹೋಗುತ್ತೆ. ಆದರೆ ಅದಕ್ಕೆ ಸ್ನೇಹವನ್ನೇ ಬಲಿ ಕೊಡಬಾರದು ಎಂದು ಅನೇಕರು ಟ್ವೀಟ್ ಮಾಡುತ್ತಿದ್ದಾರೆ.
ಇಬ್ಬರ ಮುನಿಸಿಗೆ ಕಾರಣ ಏನು?
ದರ್ಶನ್ಗೆ 2002ರಲ್ಲಿ ಮೆಜೆಸ್ಟಿಕ್ ಸಿನಿಮಾ ದೊಡ್ಡಮಟ್ಟದ ಬ್ರೇಕ್ ನೀಡಿತು. ಅಷ್ಟರಲ್ಲಾಗಲೇ ಸುದೀಪ್ ‘ಸ್ಪರ್ಶ’, ’ಹುಚ್ಚ’ ಸಿನಿಮಾಗಳಿಂದಾಗಿ ಕರುನಾಡಿನಲ್ಲಿ ಮನೆ ಮಾತಾಗಿದ್ದರು. ‘ಮೆಜೆಸ್ಟಿಕ್’ ಚಿತ್ರಕ್ಕೆ ದರ್ಶನ್ ಹೆಸರನ್ನು ತಾವೇ ಸೂಚಿಸಿದ್ದು ಎಂದು ಸುದೀಪ್ ಅವರು 2017ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದರು. ಈ ಸಂದರ್ಶನದ ತುಣುಕು ದರ್ಶನ್ ಕಣ್ಣಿಗೆ ಬೀಳುತ್ತಿದ್ದಂತೆಯೇ ಅವರಿಗೆ ಸಖತ್ ಬೇಸರವಾಗಿತ್ತು.
ಸುದೀಪ್ ಹೇಳಿಕೆ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ದರ್ಶನ್ ಅವರು ಟ್ವಿಟ್ಟರ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಒಂದು ಖಡಕ್ ನಿರ್ಧಾರ ತೆಗೆದುಕೊಂಡರು. ಸುದೀಪ್ ಜೊತೆಗಿನ ಸ್ನೇಹಕ್ಕೆ ಅಂತ್ಯ ಹಾಡಲು ಅವರು ಮುಂದಾದರು. ಇದು ಅಭಿಮಾನಿಗಳಿಗೆ ಮಾತ್ರವಲ್ಲದೆ, ಇಡೀ ಚಿತ್ರರಂಗಕ್ಕೆ ಶಾಕ್ ನೀಡಿದ ಘಟನೆ ಆಗಿತ್ತು.
Source:TV9Kannada