ಎಚ್ಚರವಹಿಸದಿದ್ದರೆ ನೀವು ಕೊಹ್ಲಿಯಂತ್ತಾಗುತ್ತೀರಿ! ಕೊಹ್ಲಿಯ ಡಕ್​ ಔಟ್, ಉತ್ತರಾಖಂಡ್​ ಪೊಲೀಸ್​ ಅಧಿಕಾರಿ​ಗೆ ಮಾದರಿಯಾಗಿದ್ದೇಗೆ?

Mar 13, 2021

india vs england: ಕೇವಲ ಹೆಲ್ಮೆಟ್ ಧರಿಸುವುದು ಸಾಕಾಗುವುದಿಲ್ಲ. ಬದಲಿಗೆ, ಪೂರ್ಣ ಪ್ರಜ್ಞೆಯಲ್ಲಿ ವಾಹನ ಚಾಲನೆ ಮಾಡುವುದು ಅವಶ್ಯಕ. ಇಲ್ಲದಿದ್ದರೆ ನೀವು ಸಹ ಕೊಹ್ಲಿಯಂತೆ ಶೂನ್ಯಕ್ಕೆ ಔಟಾಗಬೇಕಾಗುತ್ತದೆ.

ಅಹಮದಬಾದ್​: ನರೇಂದ್ರ ಮೋದಿ ಮೈದಾನದಲ್ಲಿ ಕೊಹ್ಲಿ ಪಡೆಯೇ ಗೆಲ್ಲುತ್ತೆ ಅನ್ನೋ ಲೆಕ್ಕಾಚಾರ ಉಲ್ಟಾ ಆಯ್ತು. ಟಿ20 ಕ್ರಿಕೆಟ್​ನ ನಂ.1 ಟೀಂ ಇಂಗ್ಲೆಂಡ್, ಮೊದಲ ಟಿ20 ಪಂದ್ಯದಲ್ಲೇ ಕೊಹ್ಲಿ ಪಡೆಗೆ ಡಿಚ್ಚಿ ಕೊಟ್ಟು, ಸೇಡು ತೀರಿಸಿಕೊಳ್ಳುವ ಸೂಚನೆ ನೀಡಿದೆ. ನರೇಂದ್ರ ಮೋದಿ ಕ್ರಿಕೆಟ್​ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ, ಕೊಹ್ಲಿ ಪಡೆ ಮುಗ್ಗರಿಸಿದೆ. ಟೆಸ್ಟ್ ಸರಣಿಯಲ್ಲಿ ದೊಡ್ಡಾಟವಾಡಿದ್ದವರು, ಟಿ20 ಸರಣಿಯಲ್ಲಿ ಸಣ್ಣಾಟಕ್ಕೆ ಸುಸ್ತಾಗಿದ್ದಾರೆ.

ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿತು..
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿತು. 20 ರನ್​ಗಳಾಗಿರುವಾಗಲೇ ಟೀಂ ಇಂಡಿಯಾ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ತು. ಆರಂಭಿಕರಾದ ಶಿಖರ್ ಧವನ್, ಕೆ.ಎಲ್.ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಒಬ್ಬರ ಹಿಂದೊಬ್ರು ಪರೇಡ್ ನಡೆಸಿದ್ರು. ಈ ತ್ರಿಮೂರ್ತಿಗಳ ಪೆವಿಲಿಯನ್​ ಪರೆಡ್​ನಲ್ಲಿ ಶೂನ್ಯಕ್ಕೆ ಔಟಾದ ಕೊಹ್ಲಿಯನ್ನು ಮಾದರಿಯನ್ನಾಗಿ ತೆಗೆದುಕೊಂಡಿರುವ ಉತ್ತರಾಖಂಡ್​ನ ಪೊಲೀಸ್​ ಅಧಿಕಾರಿಯೊಬ್ಬರು ದ್ವಿಚಕ್ರ ವಾಹನ ಸವಾರರಿಗೆ ನೀತಿ ಪಾಠ ಬೋಧಿಸಿದ್ದಾರೆ.

ಜವಬ್ದಾರಿಯನ್ನು ಮರೆತು ಶೂನ್ಯಕ್ಕೆ ಔಟಾದರು..
ರಾಹುಲ್​ ವಿಕೆಟ್​ ಬಳಿಕ ಬ್ಯಾಟಿಂಗ್​ಗೆ ಬಂದ ನಾಯಕ ವಿರಾಟ್​ ಕೊಹ್ಲಿ, ನಾಯಕನ ಜವಬ್ದಾರಿಯನ್ನು ಮರೆತು ಶೂನ್ಯಕ್ಕೆ ಔಟಾದರು. ರನ್​ ವೇಗ ಹೆಚ್ಚಿಸಲು ಹೋದ ಕೊಹ್ಲಿ ಆದಿಲ್​ ರಶೀದ್​ ಬೌಲಿಂಗ್​ನಲ್ಲಿ ಮೀಡ್​ ಆಫ್​ ಮೇಲೆ ಬೌಂಡರಿ ಗಳಿಸಲು ಯತ್ನಿಸಿದರು. ಆದರೆ ಈ ಯತ್ನದಲ್ಲಿ ವಿಫಲರಾದ ಕೊಹ್ಲಿ, ಅಲ್ಲಿಯೇ ಫಿಲ್ಡೀಂಗ್​ ಮಾಡುತ್ತಿದ್ದ ಬೈರ್​ಸ್ಟೋವ್​ ಕೈಗೆ ಕ್ಯಾಚಿತ್ತು ಪೆವಿಲಿಯನ್​ಗೆ ತೆರಳಿದರು.

ರಾಶ್​ ಡ್ರೈವಿಂಗ್ ಮಾಡುವವರಿಗೆ ಉತ್ತಮ ಸಲಹೆ..
ಕೊಹ್ಲಿ ಶೂನ್ಯಕ್ಕೆ ಔಟಾಗಿ ಪೆವಿಲಿಯನ್​ಗೆ ತೆರಳುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಉತ್ತರಾಖಂಡ್​ನ ಪೊಲೀಸ್​ ಅಧಿಕಾರಿಯೊಬ್ಬರು, ರಾಶ್ ಡ್ರೈವಿಂಗ್ ಮಾಡುವವರಿಗೆ ಉತ್ತಮ ಸಲಹೆ ನೀಡುವ ಸಲುವಾಗಿ ಟೀಂ ಇಂಡಿಯಾ ನಾಯಕನ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ. ಪಿಚ್‌ನಿಂದ ಹೊರನಡೆಯುತ್ತಿರುವ ಕೊಹ್ಲಿಯ ಚಿತ್ರವನ್ನು ಟ್ವೀಟ್ ಮಾಡಿರುವ ಪೊಲೀಸ್​ ಅಧಿಕಾರಿ, ಕೇವಲ ಹೆಲ್ಮೆಟ್ ಧರಿಸುವುದು ಸಾಕಾಗುವುದಿಲ್ಲ. ಬದಲಿಗೆ, ಪೂರ್ಣ ಪ್ರಜ್ಞೆಯಲ್ಲಿ ವಾಹನ ಚಾಲನೆ ಮಾಡುವುದು ಅವಶ್ಯಕ. ಇಲ್ಲದಿದ್ದರೆ ನೀವು ಸಹ ಕೊಹ್ಲಿಯಂತೆ ಶೂನ್ಯಕ್ಕೆ ಔಟಾಗಬೇಕಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಪೊಲೀಸ್​ ಅಧಿಕಾರಿಯ ಈ ಪೋಸ್ಟ್​ ಈಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.

ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕ..
ಕೊಹ್ಲಿಯ ವಿಕೆಟ್​ ಬಳಿಕ ಮಿಡಲ್ ಆರ್ಡರ್​ನಲ್ಲಿ ಬಂದ ರಿಷಬ್ ಪಂತ್ 21 ರನ್​ಗಳಿಸಿದ್ರೆ, ಹಾರ್ದಿಕ್ ಪಾಂಡ್ಯಾ 19 ರನ್​ಗಳಿಸಿ ನಿರಾಸೆ ಮೂಡಿಸಿದ್ರು. ಆದ್ರೆ ಇವರಿಬ್ಬರ ಜೊತೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. 48 ಎಸೆತಗಳನ್ನ ಎದುರಿಸಿದ ಶ್ರೇಯಸ್ ಅಯ್ಯರ್, 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 67 ರನ್​ಗಳಿಸಿದ್ರು.

ಅಯ್ಯರ್ ಅದ್ಭುತ ಆಟದಿಂದಲೇ ಕೊಹ್ಲಿ ಪಡೆ ಅಲ್ಪ ಮೊತ್ತಕ್ಕೆ ಆಲೌಟ್ ಆಗೋ ಭೀತಿಯಿಂದ ಪಾರಾಯ್ತು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 124 ರನ್​ಗಳಿಸಲಷ್ಟೇ ಶಕ್ತವಾಯ್ತು. ಇಂಗ್ಲೆಂಡ್ ಪರ ಅದ್ಭುತ ಬೌಲಿಂಗ್ ಮಾಡಿದ ಜೊಫ್ರಾ ಆರ್ಚರ್ 3 ವಿಕೆಟ್ ಪಡೆದು ಮಿಂಚಿದ್ರು.

15.3 ಓವರ್​ಗಳಲ್ಲೇ ಇಂಗ್ಲೆಂಡ್​ಗೆ ಗೆಲುವು ತಂದುಕೊಟ್ರು..
ಟೀಂ ಇಂಡಿಯಾ ನೀಡಿದ 125 ರನ್​ಗಳ ಸುಲಭ ಗುರಿಯನ್ನ ಬೆನ್ನತ್ತಿದ ಇಂಗ್ಲೆಂಡ್​ಗೆ, ಆರಂಭಿಕರಾದ ಜೇಸನ್ ರಾಯ್ ಮತ್ತು ಜೋಸ್ ಬಟ್ಲರ್ ಭರ್ಜರಿ ಓಪನಿಂಗ್ ನೀಡಿದ್ರು. ಬಿರುಸಿನ ಬ್ಯಾಟಿಂಗ್ ಮಾಡಿದ ಜೇಸನ್ ರಾಯ್ 32 ಬಾಲ್​ಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 49 ರನ್​ಗಳಿಸಿದ್ರೆ, ಜೋಸ್ ಬಟ್ಲರ್ 28 ರನ್​ಗಳಿಸಿದ್ರು.

ನಂತರ ಬಂದ ಡೇವಿಡ್ ಮಲನ್ ಅಜೇಯ 24 ರನ್ ಮತ್ತು ಜಾನಿ ಬೈರ್‌ಸ್ಟೋವ್ ಅಜೇಯ 26 ರನ್​ಗಳಿಸೋ ಮೂಲಕ, 15.3 ಓವರ್​ಗಳಲ್ಲೇ ಇಂಗ್ಲೆಂಡ್​ಗೆ ಗೆಲುವು ತಂದುಕೊಟ್ರು. ಇದರೊಂದಿಗೆ ಇಂಗ್ಲೆಂಡ್ ಮೊದಲ ಟಿ20 ಪಂದ್ಯದಲ್ಲಿ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸ್ತು. 1-0 ಅಂತರದಲ್ಲಿ ಮುನ್ನಡೆ ಸಾಧಿಸೋ ಮೂಲಕ ಟೆಸ್ಟ್ ಸರಣಿಯಲ್ಲಾದ ಅವಮಾನಕ್ಕೆ ಟಿ20 ಸರಣಿಯಲ್ಲಿ ಪ್ರತೀಕಾರ ತೀರಿಸಿಕೊಳ್ಳುವ ಸೂಚನೆ ನೀಡಿದೆ.

Source:TV9Kannada