ಇಂದಿರಾ ನಗರ ಗೂಂಡಾ: ದ್ರಾವಿಡ್‌ ಜಾಹಿರಾತು, ಜೊಮ್ಯಾಟೋಗೆ ಆಪತ್ತು..!

Apr 10, 2021

ಬೆಂಗಳೂರು(ಏ.10): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ದಿನದಂದೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ದ ವಾಲ್‌ ಖ್ಯಾತಿಯ ರಾಹುಲ್‌ ದ್ರಾವಿಡ್‌ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ ಆಗಿದ್ದರು. ಕ್ರೆಡ್‌ ಆ್ಯಪ್ ಜಾಹಿರಾತಿನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ಹೌದು, ರಾಹುಲ್ ದ್ರಾವಿಡ್‌ ಹೇಳಿ-ಕೇಳಿ ಮಿತಭಾಷಿ, ಮೃದುಸ್ವಭಾವದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಕ್ರೆಡ್‌ ಕಾರ್ಡ್‌ ಪೇಮೆಂಟ್‌ ಆ್ಯಪ್ ಜಾಹಿರಾತಿನಲ್ಲಿ ಇದಕ್ಕೆ ತದ್ವಿರುದ್ದವಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಕಾರಿನಲ್ಲಿದ್ದ ದ್ರಾವಿಡ್‌, ಟ್ರಾಫಿಕ್‌ ಸಿಗ್ನಲ್‌ನಲ್ಲಿ ಸಹ ಪ್ರಯಾಣಿಕರ ಜತೆ ಜಗಳವಾಡುವಂತೆ ಕಾಣಿಸಿಕೊಂಡಿದ್ದಾರೆ. ತಾಳ್ಮೆ ಕಳೆದುಕೊಂಡು ಕೈಯಲ್ಲಿದ್ದ ಕಾಫಿ ಕಪ್‌ನ್ನು ಪಕ್ಕದಲ್ಲಿದ್ದ ಕಾರ್‌ ಗ್ಲಾಸ್‌ನತ್ತ ಎಸೆಯುವುದು, ತನ್ನ ಬ್ಯಾಟ್‌ ತೆಗೆದು ಪಕ್ಕ ನಿಂತ ಕಾರಿನ ಮಿರರ್‌ ಒಡೆಯುವುದು. ಬಳಿಕ ಇಂದಿರಾ ನಗರದ ಗೂಂಡಾ ನಾನು ಎಂದು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.

ಇದೀಗ ಖ್ಯಾತ ಫುಡ್‌ ಡಿಲವರಿ ಕಂಪನಿ ಜೊಮ್ಯಾಟೋ ರಾಹುಲ್‌ ದ್ರಾವಿಡ್‌ ಕಾಲೆಳೆಯಲು ಹೋಗಿ ಪಜೀತಿ ಮಾಡಿಕೊಂಡ ಘಟನೆ ನಡೆದಿದೆ. ಇಂದಿರಾನಗರ ರಸ್ತೆಯಲ್ಲಿನ ಗೂಂಡಾ ಕಾಟದಿಂದ ಡಿಲಿವೆರಿ ಲೇಟ್ ಆಗ್ತಿದೆ ಎಂದು ಟ್ವೀಟ್ ಮಾಡಿದ ಜೊಮ್ಯಾಟೋ ಸಂಕಷ್ಟವೊಂದನ್ನು ಮೈಮೇಲೆ ಎಳೆದುಕೊಂಡಿದೆ. ಜೊಮ್ಯಾಟೋ ಕಂಪನಿಯ ಟ್ವೀಟ್‌ ನೋಡಿದ ಬೆಂಗಳೂರಿನ ಇಂದಿರಾ ನಗರ ಪೊಲೀಸರು ಹೈರಾಣಾಗಿ ಹೋಗಿದ್ದಾರೆ.

 

ಇದಾದ ಬಳಿಕ ಜೊಮ್ಯಾಟೋ ಬಳಿ ಯಾರು ಆ ಗೂಂಡಾ ಎಂದು ಮಾಹಿತಿ ಹುಡುಕಿದಾಗ ಕ್ರಿಡ್ ಜಾಹಿರಾತಿಗೆ ಫನ್ನಿ ಟ್ವೀಟ್ ಎನ್ನುವುದು ಗೊತ್ತಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಈ ರೀತಿ ಮಾಡದಂತೆ ಜೊಮ್ಯಾಟೋಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ
Source: Suvarna News