Thawar Chand Gehlot: ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಅವರನ್ನೇ ಬಿಟ್ಟು ಹಾರಿದ ವಿಮಾನ

Jul 28, 2023

ಹೈದರಾಬಾದ್‌ಗೆ ತೆರಳಬೇಕಿದ್ದ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನೇ ಬಿಟ್ಟು ವಿಮಾನ ಹಾರಿರುವ ಘಟನೆ ನಡೆದಿದೆ.

ಬೆಂಗಳೂರು, (ಜುಲೈ 28): ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನೇ ಬಿಟ್ಟು ವಿಮಾನ ಹಾರಿದ ಘಟನೆ ನಡೆದಿದೆ. ನಿನ್ನೆ (ಜುಳಯ 28) ಬೆಂಗಳೂರಿನಿಂದ(Bengaluru) ಹೈದರಾಬಾದ್​ಗೆ (Hyderabad) ತೆರಳಬೇಕಿದ್ದ ರಾಜ್ಯಪಾಲರು, ಸಿಬ್ಬಂದಿಯ ನಿರ್ಲಕ್ಷ್ಯದಿಂದ ವಿಮಾನವನ್ನು ಮಿಸ್ ಮಾಡಿಕೊಂಡಿದ್ದಾರೆ. ಹೌದು…ಥಾವರ್ ಚಂದ್ ಗೆಹ್ಲೋಟ್ ಅವರು ಹೈದರಾಬಾದ್​ಗೆ ತೆರಳು ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(Bangalore Kempegowda international airport) ಬಂದಿದ್ದರು, ಆದ್ರೆ, ಇನ್ನೂ ಏರ್‌ ಏಷ್ಯಾ ವಿಮಾನ ಹೊರಡಲು ಸಮಯ ಇದೆ ಎಂದು ಸಿಬ್ಬಂದಿ ರಾಜ್ಯಪಾರನ್ನು ಕರೆದುಕೊಂಡು ಹೋಗಿ ವಿಐಪಿ ಲಾಂಜ್​ನಲ್ಲಿ ಕೂರಿಸಿದ್ದು, ಟೈಮ್​ ಆಗಿರುವುದು ಅವರ ಗಮನಕ್ಕೆ ಬಂದಿಲ್ಲ. ಇದರಿಂದ ವಿಮಾನ ಸರಿಯಾದ ಸಮಯಕ್ಕೆ ಟೇಕಫ್​ ಆಗಿ ಹೋಗಿದೆ.

ಬಳಿಕ ಫ್ಲೈಟ್ ಸಮಯವಾಗಿರುವುದು ಗಮನಕ್ಕೆ ಬಂದ ಕೂಡಲೇ ರಾಜ್ಯಪಾಲರು ವಿಮಾನ ಹತ್ತಲು ಹೋಗಿದ್ದಾರೆ. ಆದ್ರೆ, ಅಷ್ಟರಲ್ಲಾಗಲೇ ವಿಮಾನ ಹೋಗಿತ್ತು. ಪ್ರೋಟೋಕಾಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಮಾನ ತಪ್ಪಿದೆ. ಬಳಿಕ ಅಧಿಕಾರಿಗಳು ಮತ್ತೊಂದು ವಿಮಾನದ ಮೂಲಕ ಅವರನ್ನು ಹೈದರಾಬಾದ್​ಗೆ ಕಳುಹಿಸಿಕೊಟ್ಟಿದ್ದಾರೆ. ಸಿಬ್ಬಂದಿ ನಿರ್ಲಕ್ಷ್ಯತನದಿಂದ ರಾಜ್ಯಪಾಲರು ಒಂದು ಗಂಟೆ ತಡವಾಗಿ ಹೈದರಾಬಾದ್​ಗೆ ತೆರಳಬೇಕಾಯ್ತು.

ಏರ್​ಲೈನ್ಸ್​ ವಿರುದ್ಧ ದೂರು ದಾಖಲು:

ಏರ್​ಪೋರ್ಟ್​​ನಲ್ಲಿ ರಾಜ್ಯಪಾಲರಿಗೆ ವಿಮಾನ ಮಿಸ್​ ಆದ ಹಿನ್ನೆಲೆ​ಯಲ್ಲಿ ಶಿಷ್ಟಾಚಾರ ಅಧಿಕಾರಿಗಳು ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್​ ಠಾಣೆಗೆ ಏರ್ ಏಷ್ಯಾ ಏರ್​​ಲೈನ್ಸ್ ದೂರು ನೀಡಿದ್ದಾರೆ.‌ ವಿಮಾನ ಮಿಸ್ ಆಗಲು ಕಾರಣ ಜೊತೆಗೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ಆಧರಿಸಿ ಏರ್​ಪೋರ್ಟ್​ ಪೊಲೀಸರು ಇಂದು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವ ಸಾಧ್ಯತೆಗಳಿವೆ.

<h3>ಆಗಿದ್ದೇನು?</h3>

ಮಧ್ಯಾಹ್ನ 02 ಗಂಟೆಯ ವಿಮಾನದಲ್ಲಿ ಹೋಗಲು ನಿಲ್ದಾಣಕ್ಕೆ 1:30ಕ್ಕೆ ಆಗಮಿಸಿದ್ದರು. ಸಿಬ್ಬಂದಿ ವಿಮಾನದಲ್ಲಿ ಲಗೇಜ್ ಇಟ್ಟು ಬಂದಿದ್ದರು. ಆದ್ರೆ, ಟೈಮ್​ ಇದೆ ಎಂದು ಪ್ರೋಟೋಕಾಲ್ ಸಿಬ್ಬಂದಿ ರಾಜ್ಯಪಾಲರನ್ನು ವಿಐಪಿ ಲಾಂಜ್ ನಲ್ಲಿ ಕೂರಿಸಿದ್ದಾರೆ. ಇತ್ತ ಸಮಯವಾಗಿದ್ದರಿಂದ ವಿಮಾನ ಟೇಕಫ್ ಆಗಿ ಹೋಗಿದೆ. ಒಂದು ನಿಮಿಷ ತಡವಾಗಿ ಬಂದಿದ್ದಕ್ಕೆ ಗರ್ವನರ್​ಗೆ ವಿಮಾನ ಮಿಸ್ ಆಗಿದೆ. ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ರಾಜ್ಯಪಾಲರು ಹಾಗೂ ಹಿರಿಯ ಅಧಿಕಾರಿಗಳು ಗರಂ ಆಗಿದ್ದು, ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

Source:TV9Kannada