Rajkumar Death Anniversary: ಕೊವಿಡ್​ ಹಿನ್ನೆಲೆಯಲ್ಲಿ ಡಾ. ರಾಜ್ ಸಮಾಧಿಗೆ ಕುಟುಂಬದವರಿಂದ ಸಿಂಪಲ್​ ಪೂಜೆ

Apr 12, 2021

ಒಂದು ವೇಳೆ ಕೊವಿಡ್​ ಸಮಸ್ಯೆ ಇಲ್ಲದೇ ಇದ್ದಿದ್ದರೆ ರಾಜ್ ಪುಣ್ಯಸ್ಮರಣೆ ಅಂಗವಾಗಿ ಅವರ​ ಸಮಾಧಿ ಬಳಿ ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಎಲ್ಲವೂ ಸರಳವಾಗಿ ನೆರವೇರುತ್ತಿದೆ.

ನಟಸಾರ್ವಭೌಮ ಡಾ. ರಾಜ್​ಕುಮಾರ್​ ಅವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರವನ್ನು ಇಂದು (ಏ.12) ನೆರವೇರಿಸಲಾಗುತ್ತಿದೆ. ಕೊರೊನಾ ವೈರಸ್​ ಹರಡುವ ಭೀತಿಯಲ್ಲಿ ಕೆಲವು ನಿಯಮಗಳನ್ನು ಪಾಲಿಸಲಾಗುತ್ತಿದೆ. ಹಾಗಾಗಿ ರಾಜ್​ ಕುಟುಂಬದವರು ಕೂಡ ಅಣ್ಣಾವ್ರ ಸಮಾಧಿಗೆ ಸರಳವಾಗಿ ಪೂಜೆ ಸಲ್ಲಿಸಿದ್ದಾರೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ರಾಜ್​ ಸಮಾಧಿ ಬಳಿ ತೆರಳಿದ ಶಿವರಾಜ್​ಕುಮಾರ್​ ಅವರು ಮೇರುನಟನಿಗೆ ನಮನ ಸಲ್ಲಿಸಿದ್ದಾರೆ.

ಒಂದು ವೇಳೆ ಕೊವಿಡ್​ ಸಮಸ್ಯೆ ಇಲ್ಲದೇ ಇದ್ದಿದ್ದರೆ ರಾಜ್​ ಸಮಾಧಿ ಬಳಿ ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ರಾಜ್ಯದ ಮೂಲೆ ಮೂಲೆಗಳಿಂದ ಬರುತ್ತಿದ್ದ ಅಭಿಮಾನಿಗಳು ನೆಚ್ಚಿನ ನಟನಿಗೆ ಪುಷ್ಪ ನಮನ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಎಲ್ಲವೂ ಸರಳವಾಗಿ ನೆರವೇರುತ್ತಿದೆ.

‘ಕೊರೊನಾ ಹಿನ್ನೆಲೆಯಲ್ಲಿ ಅಪ್ಪಾಜಿ ಕಾರ್ಯವನ್ನ ಸಿಂಪಲ್‌ ಆಗಿ ಮಾಡಿದ್ದೇವೆ. ಎಲ್ಲರೂ ನಿಯಮ ಪಾಲನೆ ಮಾಡಿ. ಕೊವಿಡ್ ಓಡಿಸಲು ಎಲ್ಲರೂ ಕೈ ಜೋಡಿಸಬೇಕು. ಮತ್ತೆ ರಾಜ್ಯದಲ್ಲಿ ಲಾಕ್‌ಡೌನ್ ಚರ್ಚೆ ವಿಚಾರ ಆಗುತ್ತಿದೆ. ಒಂದು ವರ್ಷದಿಂದ ಎಲ್ಲರೂ ಕಷ್ಟ ಪಟ್ಟಿದ್ದೇವೆ. ಈಗ ಎಚ್ಚರಿಕೆಯಿಂದ ಇರಬೇಕು. ಮೊಂಡು ಧೈರ್ಯ ಯಾರೂ ಸಹ ಮಾಡಬಾರದು’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ರಾಜ್​ಕುಮಾರ್​ ಕುಟುಂಬದವರು ಡಾ. ರಾಜ್​ ಮತ್ತು ಪಾರ್ವತಮ್ಮ ರಾಜ್​ಕುಮಾರ್​ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಹಲವು ಅಭಿಮಾನಿಗಳು ಕೂಡ ಅಣ್ಣಾವ್ರಿಗೆ ನಮನ ಸಲ್ಲಿಸಲು ಬಂದಿದ್ದಾರೆ. ಸಮಾಧಿ ಸ್ಥಳದಲ್ಲಿ ಕೊವಿಡ್​ ನಿಯಮಗಳನ್ನು ಪಾಲಿಸಲಾಗುತ್ತಿದೆ. ಗುಂಪುಗುಂಪಾಗಿ ಬರುವುದಕ್ಕೆ ಅಭಿಮಾನಿಗಳಿಗೆ ಅವಕಾಶವಿಲ್ಲ.

ಮಾಸ್ಕ್​ ಧರಿಸಿದವರಿಗೆ ಮಾತ್ರ ಒಳಗೆ ಬರಲು ಅವಕಾಶ ನೀಡಲಾಗುತ್ತಿದೆ. ಕಡ್ದಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಪುನೀತ್​ ರಾಜ್​ಕುಮಾರ್​ ಮತ್ತು ಶಿವರಾಜ್​ಕುಮಾರ್​ ಅವರು ಆಗಮಿಸುವುದರಿಂದ ಜನರ ನೂಕು ನುಗ್ಗಲು ತಪ್ಪಿಸಲು ಕಂಠೀರವ ಸ್ಡುಡಿಯೋ ಆವರಣದಲ್ಲಿ ಪೊಲೀಸ್​ ಭದ್ರತೆ ಒದಗಿಸಲಾಗಿದೆ.

Source: TV9Kannada