Mysuru Dasara 2021: ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳ ಪಟ್ಟಿ ಹೀಗಿದೆ

Sep 8, 2021

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ವಿಶ್ವವಿಖ್ಯಾತ ಮೈಸೂರು ದಸರಾ ಕೊರೊನಾ ಆತಂಕದ ನಡುವೆಯೇ ಜರುಗಲಿದೆ. ಮೈಸೂರು ದಸರಾವನ್ನು ಎಷ್ಟೇ ಸರಳವಾಗಿ ಆಚರಿಸಿದರೂ ಅದರ ಮುಖ್ಯ ಆಕರ್ಷಣೆ ಜಂಬೂ ಸವಾರಿ. ಹೀಗಾಗಿ ಈ ಬಾರಿಯ ದಸರಾ ಸಂಬಂಧಿತ ಸಭೆಯಲ್ಲಿ ಜಂಬೂ ಸವಾರಿ ಸೇರಿದಂತೆ ಕೆಲ ವಿಚಾರಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದ್ದು, ದಸರಾ ಆನೆಗಳ ಪಟ್ಟಿ ಹಾಗೂ ಆನೆಗಳ ಬಗ್ಗೆ ತಯಾರಿಸಿರುವ ಕೈಪಿಡಿ ಬಿಡುಗಡೆ‌ ಮಾಡಲಾಗಿದೆ.

ಕೊರೊನಾ ನಡುವೆ ಮೈಸೂರು ದಸರಾ 2021ನ್ನು ಆಚರಿಸುವ ಕುರಿತು ಹೈ ಪವರ್ ಕಮಿಟಿಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ದಸರಾ ದೀಪಾಂಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಸಾಂಪ್ರದಾಯಿಕ ಆಚರಣೆ ಕುರಿತು ಚರ್ಚೆ ನಡೆದಿದ್ದು, ಸರಳ ದಸರಾ ಆಚರಣೆ ಸಂಬಂಧ ರೂಪುರೇಷೆ ತಯಾರಿ ಆಗಿದೆ. ಇತ್ತ ಈ ಬಾರಿಯೂ ಅಂಬಾರಿಯ ಹೊಣೆಯನ್ನು ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಹೆಗಲಿಗೆ ಹೊರಿಸಲಾಗಿದೆ. ಈ ಬಾರಿಯ ದಸರಾದಲ್ಲಿ ಎಂಟು ಆನೆಗಳು ಭಾಗಿಯಾಗಲಿದ್ದು, 16 ಆನೆಗಳ ಪಟ್ಟಿಯಲ್ಲಿ 8 ಆನೆಗಳ ಆಯ್ಕೆ ಬಹುತೇಕ ಖಚಿತವಾಗಿದೆ.

ಅಂತಿಮವಾಗಿ ದಸರಾ ಜಂಬೂ ಸವಾರಿಗೆ ಆಯ್ಕೆಯಾದ ಆನೆಗಳು ಸೆ.13ರಂದೇ ಹುಣಸೂರಿನ ವೀರನಹೊಸಹಳ್ಳಿಯಿಂದ ಗಜಪಯಣ ಆರಂಭಿಸಲಿವೆ. ಸೆ.16 ರಂದು ಅಂಬಾವಿಲಾಸ ಅರಮನೆಗೆ ಗಜಪಡೆ ಆಗಮಿಸಲಿದ್ದು, ತನ್ನ ತಂಡದೊಂದಿಗೆ ನಾಯಕ ಅಭಿಮನ್ಯು ಆಗಮಿಸಲಿದ್ದಾನೆ. ಒಟ್ಟು 8 ಆನೆಗಳನ್ನು ಮೈಸೂರಿಗೆ ಕರೆತರಲು ಅರಣ್ಯ ಇಲಾಖೆ ನಿರ್ಧಾರ ಮಾಡಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಅರಮನೆ ಅಂಗಳಕ್ಕಷ್ಟೇ ದಸರಾ ಸೀಮಿತವಾಗಲಿದೆ.

ಸೆ.10 ರ ನಂತರ ಮೈಸೂರಿಗೆ ಗಜಪಯಣದ ಮೂಲಕ ಆನೆಗಳನ್ನ ಕರೆತರಲು ಸಿದ್ಧತೆ ನಡೆದಿದೆ. ಆನೆ ಶಿಬಿರಕ್ಕೆ ಭೇಟಿ ಕೊಟ್ಟು 16 ಆನೆಗಳ ಆರೋಗ್ಯ ಸ್ಥಿತಿ ಪರಿಶೀಲಿಸಿ, ತಾತ್ಕಾಲಿಕ ಪಟ್ಟಿ ತಯಾರಿಸಿದ್ದ ಅಧಿಕಾರಿಗಳು ಡಿಸಿಎಫ್ ಕರಿಕಾಳನ್ ಅವರ ಮೂಲಕ ಅದನ್ನು ಬೆಂಗಳೂರಿನ ಪಿಸಿಸಿಎಫ್ ಕಚೇರಿಗೆ ರವಾನಿಸಿದ್ದರು. ಅಭಿಮನ್ಯು ನೇತೃತ್ವದಲ್ಲಿ 8 ಆನೆ ಬಳಸಿಕೊಳ್ಳಲು ಪಿಸಿಸಿಎಫ್ ಅನುಮತಿ ನೀಡಿದೆ. ಕಳೆದ ವರ್ಷದ ದಸರಾಗೆ ಮೂರು ಗಂಡಾನೆ, ಎರಡು ಹೆಣ್ಣಾನೆಯನ್ನಷ್ಟೇ ಕರೆತರಲಾಗಿತ್ತು. ಆದರೆ, ಈ ಬಾರಿ ಎರಡು ಗಂಡಾನೆ ಹಾಗೂ ಒಂದು ಹೆಣ್ಣಾನೆಯನ್ನು ಹೆಚ್ಚುವರಿಯಾಗಿ ಕರೆ ತರಲು ನಿರ್ಧಾರ ಮಾಡಲಾಗಿದೆ. ಗಜಪಡೆಯಲ್ಲಿ 5 ಗಂಡಾನೆ, 3 ಹೆಣ್ಣಾನೆ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.

ಈ ಸಾಲಿನ ದಸರಾದಲ್ಲಿ ಮತ್ತಿಗೋಡು ಶಿಬಿರದಿಂದ ಅಂಬಾರಿ ಆನೆ ಅಭಿಮನ್ಯು, ಗೋಪಾಲಸ್ವಾಮಿ ಬರಲಿವೆ. ಆನೆಕಾಡು ಶಿಬಿರದ ವಿಕ್ರಮ, ದುಬಾರೆ ಶಿಬಿರದ ಕಾವೇರಿ, ಧನಂಜಯ, ನಾಗರಹೊಳೆಯ ದೊಡ್ಡ ಹರವೆ ಶಿಬಿರದ ಅಶ್ವತ್ಥಾಮ, ಬಂಡೀಪುರ ರಾಂಪುರ ಶಿಬಿರದ ಚೈತ್ರಾ ಹಾಗೂ ಲಕ್ಷ್ಮಿ ಜತೆಯಾಗಿ ಸಾಥ್ ನೀಡಲಿವೆ. ಇದೇ ಪ್ರಥಮವಾಗಿ 34 ವರ್ಷದ ಅಶ್ವತ್ಥಾಮ ದಸರಾಗೆ ಪ್ರವೇಶ ಪಡೆದಿದ್ದಾನೆ. ಕಿರಿಯ ಆನೆಯಾಗಿ ಲಕ್ಷ್ಮೀ ಎರಡನೇ ಬಾರಿಗೆ ದಸರಾದಲ್ಲಿ ಭಾಗಿಯಾಗಲಿದ್ದಾಳೆ.

ಸೆ.8ಕ್ಕೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆನೆ ಪಟ್ಟಿ ಬಿಡುಗಡೆಯಾಗಿದ್ದು, ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಕುರಿತಾದ ಬಣ್ಣದ ಚಿತ್ರವುಳ್ಳ ಕೈಪಿಡಿ ತಯಾರಿಸಲಾಗಿದೆ. ಗಜಪಯಣಕ್ಕೆ ಸೆ.13, 15 ಹಾಗೂ 16 ಒಳ್ಳೆ ದಿನವಾಗಿದೆ. ಅದರಲ್ಲೂ ಸೆ.13 ಭಾದ್ರಪದ ಸಪ್ತಮಿ ದಿನ ಆಗಿರುವುದರಿಂದ ಗಜಪಯಣಕ್ಕೆ ಒಳ್ಳೆದಿನ. ಅಂದು ಆನೆಗಳು ಅರಮನೆ ಪ್ರವೇಶಿಸುವುದು ಸೂಕ್ತ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೆ.13 ರಂದು ಬೆಳಿಗ್ಗೆ 11 ಗಂಟೆ ನಂತರ ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೈಸೂರಿನ ಅರಣ್ಯ ಭವನಕ್ಕೆ ಕರೆತರಲಾಗುತ್ತದೆ. ಸೆ.16 ರಂದು ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ನಂತರ ಅರಮನೆಗೆ ಕರೆದುಕೊಂಡು ಬರಲು ನಿರ್ಧಾರ ಮಾಡಲಾಗಿದೆ.

Source:tv9kannada