CDS Bipin Rawat ಬಿಪಿನ್ ರಾವತ್ ಅಂತ್ಯ ಸಂಸ್ಕಾರ ಇಂದು; ಉಳಿದ 10 ಸೇನಾ ಸಿಬ್ಬಂದಿ‌ ಗುರುತು ಪತ್ತೆ ಬಳಿಕ ಮೃತದೇಹಗಳ ಹಸ್ತಾಂತರ

Dec 10, 2021

ದೆಹಲಿ: ತಮಿಳುನಾಡಿನ ಕೂನೂರ್(Coonoor) ಬಳಿ ಬುಧವಾರ ನಡೆದ ಐಎಎಫ್ ಹೆಲಿಕಾಪ್ಟರ್ ಅಪಘಾತದಲ್ಲಿ (IAF helicopter crash) ಮಧುಲಿಕಾ ರಾವತ್ ಮತ್ತು 11 ಸಶಸ್ತ್ರ ಪಡೆಗಳ ಸಿಬ್ಬಂದಿಯೊಂದಿಗೆ ಹುತಾತ್ಮರಾದ ಸಿಡಿಎಸ್ ಜನರಲ್ ಬಿಪಿನ್ ರಾವತ್(Chief of Defence Staff General Bipin Rawat) ಅವರ ಅಂತ್ಯಕ್ರಿಯೆ ನವದೆಹಲಿಯಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಶುಕ್ರವಾರ ಮಧ್ಯಾಹ್ನ ನಡೆಯಲಿದೆ. ಅಪಘಾತದಲ್ಲಿ ಮಡಿದವರ ಮೃತದೇಹಗಳನ್ನು ಗುರುವಾರ ಸಂಜೆ ಕೊಯಮತ್ತೂರು ಬಳಿಯ ಸೂಲೂರಿನಿಂದ ಪಾಲಮ್ ವಾಯುನೆಲೆಗೆ (Palam air base)ತರಲಾಗಿತ್ತು. ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 13 ಶವಪೆಟ್ಟಿಗೆಗಳಿಗೆ ಮಾಲಾರ್ಪಣೆ ಮತ್ತು ಹೂದಳಗಳನ್ನು ಅರ್ಪಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಮೂರು ಸೇನಾಪಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಜನರಲ್ ರಾವತ್ ಅವರ ಪುತ್ರಿಯರು ಮತ್ತು ಬ್ರಿಗೇಡಿಯರ್ ಎಲ್ ಎಸ್ ಲಿಡ್ಡರ್ ಅವರ ಪತ್ನಿ, ಮಗಳು ಮತ್ತು ಕುಟಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಅಗಲಿದವರಿಗೆ ನಾನು ಗೌರವ ಸಲ್ಲಿಸಿದ್ದೇನೆ. ಭಾರತವು ಅವರ ಕೊಡುಗೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಜನರಲ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಬ್ರಿಗೇಡಿಯರ್ ಲಿಡ್ಡರ್ ಪಾರ್ಥಿವ ಶರೀರವನ್ನು ಇಲ್ಲಿಯವರೆಗೆ ಗುರುತಿಸಲಾಗಿದ್ದು, ಅವರ ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದೆ ಎಂದು ಸೇನೆ ತಿಳಿಸಿದೆ. ಉಳಿದ 10 ಮಂದಿಯ ಮೃತದೇಹಗಳನ್ನು ಗುರುತಿಸುವ ವರೆಗೆ ಸೇನಾನೆಲೆಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗುವುದು. ನಂತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಅಂತಿಮ ವಿಧಿವಿಧಾನಗಳಿಗಾಗಿ ಹಸ್ತಾಂತರಿಸಲಾಗುವುದು.

ವೈಜ್ಞಾನಿಕ ಕ್ರಮಗಳ ಜೊತೆಗೆ ಸಕಾರಾತ್ಮಕ ಗುರುತಿಸುವಿಕೆಗಾಗಿ ನಿಕಟ ಕುಟುಂಬ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಲಾಗುವುದು. ಸಕಾರಾತ್ಮಕ ಗುರುತಿನ ನಂತರವೇ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಅದು ಹೇಳಿದೆ. ಇದಕ್ಕೂ ಮೊದಲು 13 ಮಂದಿಯ ಪಾರ್ಥಿವ ಶರೀರವನ್ನು ವೆಲ್ಲಿಂಗ್ಟನ್‌ನಿಂದ ಸುಲೂರ್ ಏರ್ ಫೋರ್ಸ್ ಸ್ಟೇಷನ್‌ಗೆ ರಸ್ತೆ ಮೂಲಕ ಕೊಂಡೊಯ್ಯಲಾಯಿತು. ಸೂಲೂರಿನಿಂದ ಅವರನ್ನು ಸಿ-17 ಗ್ಲೋಬ್‌ಮಾಸ್ಟರ್‌ನಲ್ಲಿ ದೆಹಲಿಗೆ ತರಲಾಯಿತು.

Source: tv9kannada