ವರನಟ ಡಾ. ರಾಜ್​ಕುಮಾರ್​ಗೆ ಮೊದಲು ಗೌರವ ಡಾಕ್ಟರೇಟ್ ನೀಡಿ 45 ವರ್ಷ ಪೂರ್ಣ: ಇದು ಮೈಸೂರು ವಿಶ್ವವಿದ್ಯಾಲಯದ ಗೌರವ

Feb 10, 2021

1976 ಫೆಬ್ರವರಿ 8 ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಮೈಸೂರು: ಕೆಂಟುಕಿ ಕರ್ನಲ್, ಪದ್ಮಭೂಷಣ, ಕರ್ನಾಟಕ ರತ್ನ, ಗಾನಗಂಧರ್ವ, ಹೀಗೆ ಸಾಲು ಸಾಲು ಗೌರವಗಳನ್ನು ಪಡೆದ ಏಕೈಕ ನಟ ವರನಟ ಡಾ. ರಾಜ್‌ಕುಮಾರ್. ಇಂತಹ ಅಪರೂಪದ ಅದ್ಭುತ ನಟನಿಗೆ ಮೊದಲು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದು, ರಾಜ್ಯದ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾನಿಲಯ. ಅದು 1976 ಫೆಬ್ರವರಿ 8 ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಎಲ್ಲೆಡೆ ತಳಿರು ತೋರಣಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ಸರಳ ಸುಂದರ ವೇದಿಕೆ ಸಿದ್ಧಪಡಿಸಲಾಗಿತ್ತು. ಅದು ಜನರ ಹಬ್ಬವಾಗಿತ್ತು. ಹೀಗಾಗಿ ಜನರು ಕಿಕ್ಕಿರಿದು ತುಂಬಿದ್ದರು. ಅದು ಬೇರೆ ಯಾವುದೇ ಕಾರ್ಯಕ್ರಮ ಅಲ್ಲ ಅಪರೂಪದಲ್ಲಿ ಅಪರೂಪದ ನಟ ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಸಮರ್ಪಣಾ ಕಾರ್ಯಕ್ರಮ.

ಹೌದು ಅಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ವಿಶೇಷ ಅಂದರೆ ಇದಾದ ನಂತರ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಕಾರ್ಯಕ್ರಮ ಮೈಸೂರು ವಿಶ್ವವಿದ್ಯಾಲಯ ಕ್ರಾಫರ್ಡ್ ಹಾಲ್‌ಗೆ ಸ್ಥಳಾಂತರವಾಯಿತು.

ಡಾ. ರಾಜ್‌ಕುಮಾರ್ ಗೌರವ ಡಾಕ್ಟರೇಟ್​ಗೆ ಗಣ್ಯಾತೀಗಣ್ಯರು ಸಾಕ್ಷಿ:
ಮೇರುನಟ ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಮಹತ್ವದ ಕಾರ್ಯಕ್ರಮಕ್ಕೆ ವಿಶೇಷ ವ್ಯಕ್ತಿಗಳು ಸಾಕ್ಷಿಯಾಗಿದ್ದರು. ಅಂದಿನ ರಾಜ್ಯಪಾಲರಾದ ಡಾ. ಉಮಾಶಂಕರ ದೀಕ್ಷಿತ್, ವಿವಿ ಕುಲಪತಿ ಡಾ. ಡಿ. ವಿ ಅರಸು ಭಾಗವಹಿಸಿದ್ದರು. ರಾಜ್‌ಕುಮಾರ್ ಅವರ ಜೊತೆಗೆ ಮುಂಬೈನ ಬಾಬಾ ಅಟಾಮಿಕ್ ಎನರ್ಜಿ ಸೆಂಟರ್ ನಿರ್ದೇಶಕರಾದ ಡಾ. ಎಚ್. ಎನ್. ಸೇತ್ನಾ, ವಿ. ಸೀತಾರಾಮಯ್ಯ, ಎಂ. ಎಚ್. ಗೋಪಾಲ್ ಅವರಿಗೂ ಕೂಡ ಅಂದಿನ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಇಂದಿನ ವಿವಿ ಕುಲಪತಿಗೂ ಸಿಕ್ಕಿರಲಿಲ್ಲ ಕಾರ್ಯಕ್ರಮಕ್ಕೆ ಎಂಟ್ರಿ!

ಡಾ. ರಾಜ್‌ಕುಮಾರ್ ಪಾಲಿಗೆ ಅಭಿಮಾನಿಗಳು ಅಭಿಮಾನಿ ದೇವರುಗಳಾದರೆ ಅಭಿಮಾನಿಗಳ ಪಾಲಿಗೆ ಡಾ. ರಾಜ್ ಪ್ರತ್ಯಕ್ಷ ದೇವರು. ಅಂತಹ ದೇವರು ತಮ್ಮ ಊರಿಗೆ ಬರುತ್ತಾರೆ ಎನ್ನುವ ವಿಚಾರ ತಿಳಿದೆ ಮೈಸೂರಿಗರು ಥ್ರಿಲ್ ಆಗಿದ್ದರು. ಆ ದೇವರನ್ನು ಒಮ್ಮೆ ಕಣ್ತುಂಬಿಕೊಳ್ಳಬೇಕು ಎನ್ನುವ ಕನಸು ಎಲ್ಲರದ್ದು ಆಗಿತ್ತು. ಅದೇ ರೀತಿಯ ಕನಸನ್ನು ಕಟ್ಟಿಕೊಂಡಿದ್ದವರು ಇಂದಿನ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಅಂದಿನ ಅವರ ಅನುಭವವನ್ನು ಅವರಿಂದ ಕೇಳುವುದೇ ಚೆಂದ.

ನಾನು ಆಗ ಮೈಸೂರಿನ ಶಾರದ ವಿಲಾಸ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದೆ. ಅವತ್ತು ಭಾನುವಾರ ರಜಾ ದಿನವಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯ ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡುವ ವಿಚಾರ ನನಗೆ ಮೊದಲೇ ಗೊತ್ತಾಗಿತ್ತು. ಅವರ ಅಭಿಮಾನಿಗಳಲ್ಲಿ ಒಬ್ಬನಾಗಿದ್ದ ನನಗೆ ಆ ಅಮೂಲ್ಯ ಕ್ಷಣಕ್ಕೆ ಸಾಕ್ಷಿಯಾಗಬೇಕು ಎಂದು ಕಾತುರರಾಗಿದ್ದೆ. ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ನಿಗದಿಯಾಗಿತ್ತು. ನಾನು ನನ್ನ ಗೆಳೆಯರು ಬೇಗನೇ ಎದ್ದು ನಡೆದುಕೊಂಡೇ ಲಗು ಬಗೆಯಿಂದ ಕಾರ್ಯಕ್ರಮದ ಸ್ಥಳಕ್ಕೆ ತಲುಪಿದೆವು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಹೇಳಿದರು.

ನಾವು ಅಂದುಕೊಂಡಿದ್ದು ನಾವು ಕಾರ್ಯಕ್ರಮದ ನಿಗದಿತ ಸಮಯಕ್ಕಿಂತ ಬೇಗನೆ ಬಂದಿದ್ದೇವೆ ನಾವು ಸುಲಭವಾಗಿ ಒಳಗೆ ಹೋಗಬಹುದು ಎಂದು ಆದರೆ ನಮಗ ನಿರೀಕ್ಷೆ ಹುಸಿಯಾಗಿತ್ತು. ನಾವು ಬರುವ ಮೊದಲೇ ಬಯಲು ರಂಗಮಂದಿರದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ನಮಗೆ ಒಳಗೆ ಹೋಗಲು ಸಾಧ್ಯವಾಗಲೇ ಇಲ್ಲ. ಹೊರಗೆ ನಿಂತು ಕಾರ್ಯಕ್ರಮದ ವೀಕ್ಷಕ ವಿವರಣೆ ಭಾಷಣ ಅಣ್ಣಾವ್ರ ಮಾತುಗಳನ್ನು ಕೇಳಿದ್ದೆವು ಅದಾದ ನಂತರ ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯಲ್ಲಿ ಅಣ್ಣಾವ್ರ ಫೋಟೋಗಳನ್ನು ಕಣ್ತುಂಬಿಕೊಂಡೆವು ಎಂದು ತಮ್ಮ ಅನುಭವನ್ನು ಪ್ರೊ. ಜಿ. ಹೇಮಂತ್ ಕುಮಾರ್ ಹಂಚಿಕೊಂಡರು.

ಮೈಸೂರು ವಿಶ್ವವಿದ್ಯಾಲಯಕ್ಕೆ ಸಂದ ಗೌರವ:
ಅಣ್ಣಾವರಿಗೆ ಸಾವಿರಾರು ಪ್ರಶಸ್ತಿಗಳು ಲಭಿಸಿವೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ಸಹ ತನ್ನದೇ ಆದ ಗೌರವ ಪ್ರತಿಷ್ಟೆಯನ್ನು ಹೊಂದಿದೆ. ವಿವಿಯ ವಿದ್ಯಾರ್ಥಿಗಳು ವಿಶ್ವದಾದ್ಯಂತ ತಮ್ಮ ಛಾಪು ಮೂಡಿಸಿದ್ದಾರೆ. ಇದೆಲ್ಲದರ ನಡುವೆ ಡಾ. ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದು, ಮೈಸೂರು ವಿವಿಯ ಗೌರವ ಪ್ರತಿಷ್ಟೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಯಿತು ಎಂದರೆ ತಪ್ಪಾಗಲಾರದು. ಅಪರೂಪದ ನಟ ಡಾ. ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಸಮರ್ಪಿಸಿದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಟಿವಿ9 ಡಿಜಿಟಲ್ ತಂಡದ ಪರವಾಗಿ ಒಂದು ಹೃದಯಪೂರ್ವಕ ಸಲಾಂ.

Source:TV9Kannada