ಏ.30ರಂದು ಮೋದಿಗೆ ಮೈಸೂರಿನ ವಿಳ್ಯದೆಲೆಯೊಂದಿಗೆ ಸ್ವಾಗತದ ಜೊತೆ ವಿಶೇಷ ಉಡುಗೊರೆ ಸಿದ್ಧ

Apr 28, 2023

 

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ(Karnataka Assembly Election) ಹಿನ್ನೆಲೆ ಭಾನುವಾರ (ಏ.30) ಸಂಜೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮೈಸೂರಿಗೆ ಆಗಮಿಸಲಿದ್ದಾರೆ ಎಂದು ಶಾಸಕ ಎಸ್ ಎ ರಾಮದಾಸ್(S. A. Ramadas) ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ‘ಭಾನುವಾರ ಸಂಜೆ ಬೇಲೂರಿನಿಂದ ಹೆಲಿಕಾಪ್ಟರ್ ಮೂಲಕ ಮೈಸೂರಿನ ಓವಲ್ ಮೈದಾನಕ್ಕೆ ಪ್ರಧಾನಿ ಮೋದಿ ಬಂದಿಳಿಯಲಿದ್ದು, ಬಳಿಕ ಕಾರಿನ‌ ಮೂಲಕ ಗನ್ ಹೌಸ್ ವೃತ್ತದತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದರು.

ರೋಡ್ ಶೋ ನಲ್ಲಿ ಭಾಗಿಯಾಗಲಿರುವ ಮೋದಿ

ಪ್ರತಾಪ್ ಸಿಂಹ ಮತ್ತು ರಾಮದಾಸ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ಪ್ರಧಾನಿ ಮೋದಿ ರೋಡ್ ಶೋನಲ್ಲಿ ಭಾಗಿಯಾಗಲಿದ್ದು, ಈ ವೇಳೆ ನಾದಸ್ವರ ವಾದನದೊಂದಿಗೆ ಮೋದಿಗೆ ಸ್ವಾಗತ ಕೋರಲಾಗುತ್ತದೆ. ಅಲ್ಲದೇ ಮೈಸೂರಿನ‌ ವಿಶೇಷತೆಗಳಾಗಿರುವ ವಸ್ತುಗಳನ್ನು ಮೋದಿಗೆ ಉಡುಗೊರೆಯಾಗಿ ಸಲ್ಲಿಕೆ ಮಾಡಲಾಗುತ್ತದೆ. ನಂತರ ಗನ್ ಹೌಸ್ ವೃತ್ತದಿಂದ ರೋಡ್ ಶೋ ಆರಂಭವಾಗಿ ಸಂಸ್ಕೃತ ಪಾಠಶಾಲೆ ವೃತ್ತ, ಕೆ ಆರ್ ವೃತ್ತ, ಆಯುರ್ವೇದಿಕ್ ಆಸ್ಪತ್ರೆ ವೃತ್ತ, ಆರ್ ಎಂ ಸಿ ವೃತ್ತ, ಹೈವೇ ವೃತ್ತದ ಮಾರ್ಗವಾಗಿ ಮಿಲೇನಿಯಂ ವೃತ್ತದತ್ತ ರೋಡ್ ಶೋನಲ್ಲಿ ಸುಮಾರು 4 ಕಿ ಮೀ ಪ್ರಧಾನಿ ನರೇಂದ್ರ ಮೋದಿ ಸಾಗಲಿದ್ದಾರೆ ಎಂದು ಶಾಸಕ ಎಸ್ ಎ ರಾಮದಾಸ್ ಹೇಳಿದ್ದಾರೆ.

ನೂರಕ್ಕೂ ಹೆಚ್ಚು ನಾದಸ್ವರ ತಂಡದಿಂದ ಪ್ರಧಾ‌ನಿಗಳ ಸ್ವಾಗತ

ಪ್ರಧಾನಿ ಮೋದಿ ರೋಡ್​ ಶೋ ವೇಳೆ ಗನ್ ಹೌಸ್​ನಿಂದ ಕೆ ಆರ್ ಸರ್ಕಲ್​ವರೆಗೆ ಜನರು ಸಾಂಪ್ರದಾಯಿಕ ವಸ್ತ್ರ ತೊಟ್ಟು, ಆಯಾ ಸ್ಥಳಗಳಲ್ಲಿ ನಿಂತು ಮೈಸೂರಿನ ವಿಳ್ಯದೆಲೆ, ಶ್ರೀಗಂಧ, ಮೈಸೂರ್ ಸಿಲ್ಕ್ ಪದಾರ್ಥಗಳನ್ನು ನೀಡಿ ಪ್ರಧಾನಿಗಳನ್ನು ಸ್ವಾಗತ ಮಾಡಲಾಗುವುದು. ಜೊತೆಗೆ ರೋಡ್​ ಶೋ ಸಾಗುವ ರಸ್ತೆಯಲ್ಲಿ ಮೋದಿ ನಡೆದು ಬಂದ ಹಾದಿ, ವಿಶ್ವಕ್ಕೆ ಕೊಟ್ಟ ಮಾರ್ಗದರ್ಶನದ ಪರಿಕಲ್ಪನೆ ತೋರಿಸುವಂತಹಕಟೌಟ್​ಗಳ ಅಳವಡಿಕೆ‌ ಮಾಡಿ, ಅಲ್ಲಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡಲಾಗುವುದು ಎಂದರು.

ಮೈಸೂರಿನ 5 ಕ್ಷೇತ್ರಗಳ ಜನ ಭಾಗಿ

ಇನ್ನು ಮೋದಿ ರೋಡ್​ ಶೋ ವೇಳೆ ಮೈಸೂರಿನ 5 ಕ್ಷೇತ್ರಗಳ ಜನ ಭಾಗವಹಿಸಲಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಹಿರಿಯ ನಾಗರಿಕರಿಗೆ ದೇವರಾಜ ಮಾರುಕಟ್ಟೆ, ಹಳೆ ಎಪಿಎಂಸಿ ಸರ್ಕಲ್, ಗನ್ ಹೌಸ್ ಸೇರಿದಂತೆ 5 ಕಡೆ ಕೂರಲು ಬೇಕಾದ ವ್ಯವಸ್ಥೆ ಮಾಡಲಾಗುವುದು. ಇನ್ನು ಕೇವಲ ರೋಡ್ ಶೋ ಮಾತ್ರ ಇರಲಿದೆ. ಮೇ 6 ನೇ ತಾರೀಖು ನಂಜನಗೂಡಿನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.

 
 
 
Source: TV9KANNADA