ಯಾವುದೇ ಗೊಂದಲ ಬೇಡ, ಶಿಕ್ಷಣ ಸಚಿವರು ಘೋಷಿಸಿದಂತೆ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಯುತ್ತದೆ: ಸಿಎಂ ಟ್ವೀಟ್

Jun 29, 2021

SSLC exam 2021: ಸುರೇಶ್‌ಕುಮಾರ್ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿಲ್ಲ. SSLC ಪರೀಕ್ಷೆ ಸಂಬಂಧ ಸಚಿವ ಸುರೇಶ್ ಕುಮಾರ್ ನನ್ನ ಜೊತೆ ಚರ್ಚೆ ಮಾಡಿದ್ದಾರೆ. ಚರ್ಚೆ ಮಾಡಿಯೇ SSLC ಪರೀಕ್ಷಾ ದಿನಾಂಕ ಘೋಷಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು: ನೆರೆಯ ಆಂಧ್ರ ಪ್ರದೇಶ ಸರಕಾರವು ಹತ್ತನೆ‌ ತರಗತಿ‌ ಪರೀಕ್ಷೆ‌ ನಡೆಸುವ ವಿಷಯದಲ್ಲಿ ಹಠಕ್ಕೆ‌ ಬಿದ್ದು ಪರೀಕ್ಷೆ ನಡೆಯಿಸಿಯೇ ನಡೆಸುತ್ತೇವೆ ಅಂದಿತ್ತು. ಆದರೆ ಅದರ ವಿರುದ್ಧ ಪೋಷಕರು ಸುಪ್ರೀಂ ಕೋರ್ಟ್​ ಕೋರ್ಟ್​ ಕದ ತಟ್ಟಿದಾಗ, ಕೋರ್ಟ್ ಛೀಮಾರಿ‌ ಹಾಕಿತ್ತು. ಆಂಧ್ರದಂತೆಯೇ ನಮ್ಮ ಮಕ್ಕಳೂ. ಕೊರೊನಾ ಸಮ್ಮುಖದಲ್ಲಿ ಕರ್ನಾಟಕದಲ್ಲಿಯೂ SSLC ಪರೀಕ್ಷೆ ನಡೆಸುವುದು ಬೇಡ ಎಂಬುದು ಬಹುತೇಕ ಪೋಷಕರ ಅಭಿಪ್ರಾಯವಾಗಿದೆ. ಆದರೂ ನಿನ್ನೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷಾ ದಿನಾಂಕ ಘೋಷಿಸಿದ್ದರು. ಅದರಿಂದ ಸಚಿವ ಸುರೇಶ್‌ ಕುಮಾರ್ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಕೂಗು ಎದ್ದಿದೆ.

ಇದಕ್ಕೆ ಉತ್ತರವೆಂಬಂತೆ ಇಂದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ಸ್ಪಷ್ಟನೆ ನೀಡಿದ್ದಾರೆ. ಸುರೇಶ್‌ಕುಮಾರ್ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿಲ್ಲ. SSLC ಪರೀಕ್ಷೆ ಸಂಬಂಧ ಸಚಿವ ಸುರೇಶ್ ಕುಮಾರ್ ನನ್ನ ಜೊತೆ ಚರ್ಚೆ ಮಾಡಿದ್ದಾರೆ. ಚರ್ಚೆ ಮಾಡಿಯೇ SSLC ಪರೀಕ್ಷಾ ದಿನಾಂಕ ಘೋಷಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಸಾರಾಂಶ ಹೀಗಿದೆ:

ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ಪೂರ್ವಭಾವಿಯಾಗಿ ನನ್ನೊಂದಿಗೆ ಚರ್ಚಿಸಿ, SSLC ಪರೀಕ್ಷೆಗೆ ದಿನಾಂಕ ನಿಗದಿಪಡಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಚರ್ಚಿಸಿದ ನಂತರವೇ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದು ಏಕಪಕ್ಷೀಯ ತೀರ್ಮಾನವಲ್ಲ. ಈ ಬಗ್ಗೆ ಗೊಂದಲ ಸೃಷ್ಟಿಸುವುದು ಅನಗತ್ಯ ಎಂದು ಎಸ್ಎಸ್ಎಲ್​ಸಿ ಪರೀಕ್ಷಾ ಗೊಂದಲ ಕುರಿತಂತೆ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಪರೀಕ್ಷೆ ನಡೆಸುವುದರ ಬಗ್ಗೆ ಆರೋಗ್ಯ ಸಚಿವರ ಜೊತೆ ಮಾತನಾಡಿಲ್ಲ:
ಈ ಮಧ್ಯೆಯೇ ನಿನ್ನೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಶಿಕ್ಷಣ ಸಚಿವರ ನಿರ್ಧಾರವೇ ನಮಗೆ ಗೊತ್ತಿಲ್ಲ, ನನ್ನ ಜೊತೆ ಮಾತನಾಡಿಲ್ಲ ಎಂದು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆರೋಗ್ಯ ಇಲಾಖೆ ಸಲಹೆ ಮತ್ತು ಸಿಎಂ ಮೌಖಿಕ ಒಪ್ಪಿಗೆ ಪಡೆದು ಪರೀಕ್ಷಾ ದಿನಾಂಕ ಘೋಷಣೆ ಮಾಡಲಾಗಿದೆ ಎಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದನ್ನು ಇಲ್ಲಿ ಗಮನಿಸಬಹುದು. 

Source: Tv9Kannada