ಮೈಸೂರು ಮೃಗಾಲಯದಲ್ಲಿ ವಿಶ್ವ ಘೇಂಡಾಮೃಗಗಳ ದಿನಾಚರಣೆ

Sep 23, 2021

ಮೈಸೂರು,ಸೆ.22(ಪಿಎಂ)- ಘೇಂಡಾಮೃಗಗಳ ವೈಶಿಷ್ಟ್ಯಗಳನ್ನು ಪ್ರೇಕ್ಷಕರಿಗೆ ತಿಳಿಸುವ ಮೂಲಕ ಮೈಸೂರು ಮೃಗಾಲಯದಲ್ಲಿ ಬುಧವಾರ ವಿಶ್ವ ಘೇಂಡಾಮೃಗಗಳ ದಿನವನ್ನು ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‍ನ ಮೈಸೂರು ವಿಭಾ ಗೀಯ ಕಚೇರಿ ವತಿಯಿಂದ ತಲಾ 75 ಸಾವಿರ ರೂ. ಪಾವತಿಸಿ ಎರಡು ಘೇಂಡಾಮೃಗಗಳನ್ನು ವರ್ಷದ ಅವಧಿಗೆ ದತ್ತು ಸ್ವೀಕರಿಸಲಾಯಿತು.

ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿ ರುವ ಹಿನ್ನೆಲೆಯಲ್ಲಿ ಘೇಂಡಾಮೃಗಗಳನ್ನು ಉಳಿಸ ಬೇಕಿದೆ. ಹಾಗಾಗಿ ಅವುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸೆ.22 ಅನ್ನು ವಿಶ್ವ ಘೇಂಡಾಮೃಗಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂತೆಯೇ ಮೈಸೂರು ಮೃಗಾಲಯದಲ್ಲಿಂದು ಈ ದೈತ್ಯ ಪ್ರಾಣಿಯ ವಿಶೇಷತೆ ಬಗ್ಗೆ ಇಲ್ಲಿಗೆ ಭೇಟಿ ನೀಡಿದ ವೀಕ್ಷಕರಿಗೆ ಮಾಹಿತಿ ನೀಡಲಾಯಿತು.

ಒಟ್ಟು ಐದು ವಿಧದ ಘೇಂಡಾಮೃಗಗಳಿದ್ದು, ಅವು ಗಳ ಬಗ್ಗೆ ಚಿತ್ರಸಹಿತ ವೀಕ್ಷಕರಿಗೆ ವಿವರ ನೀಡಲಾ ಯಿತು. ಕರಿ ಅಥವಾ ಕಂದು ಘೇಂಡಾಮೃಗ, ಬಿಳಿ ಘೇಂಡಾಮೃಗ, ಜಾವನ್ ಘೇಂಡಾಮೃಗ, ಸುಮಾ ತ್ರನ್ ಘೇಂಡಾಮೃಗ ಮತ್ತು ಗ್ರೇಟರ್ ಒನ್ ಹಾರ್ನ್‍ಡ್ ಘೇಂಡಾಮೃಗಗಳ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಯಾವ್ಯಾವ ವಿಧದ ಘೇಂಡಾಮೃಗಗಳು ವಿಶ್ವದ ಯಾವ ಭಾಗಗಳಲ್ಲಿ ಕಂಡು ಬರುತ್ತವೆ ಎಂದು ಸಹ ತಿಳಿಸಲಾಯಿತು. ವಿರಾಟ್ (ಗಂಡು) ಮತ್ತು ಬಬ್ಲಿ (ಹೆಣ್ಣು) ಘೇಂಡಾಮೃಗಗಳನ್ನು ಇಂಡಿಯನ್ ಆಯಿಲ್ ಕಂಪನಿಯು ದತ್ತು ಸ್ವೀಕರಿಸುವ ಪ್ರಕ್ರಿ ಯೆಯೂ ಇದೇ ವೇಳೆ ಜರುಗಿತು. ಜೊತೆಗೆ ಇದೇ ತೈಲ ಕಂಪನಿ ವತಿಯಿಂದ ವೀಕ್ಷಕರಿಗೆ ಘೇಂಡಾ ಮೃಗಗಳ ಬಗ್ಗೆ ರಸಪ್ರಶ್ನೆ ಸ್ಪರ್ಧೆ ನಡೆಸಿ, ಸರಿ ಉತ್ತರ ನೀಡಿದವರಿಗೆ ಉಡುಗೊರೆ ನೀಡಲಾಯಿತು.

ಇದೇ ವೇಳೆ ಮಾತನಾಡಿದ ಕರ್ನಾಟಕ ಮೃಗಾ ಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವ ಸ್ವಾಮಿ, ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಘೇಂಡಾಮೃಗವೂ ಇದ್ದು, ಅವುಗಳ ಸಂರಕ್ಷಣೆ ನಮ್ಮ ಹೊಣೆ. ಮೃಗಾಲಯದಲ್ಲಿರುವ ಪ್ರಾಣಿ-ಪಕ್ಷಿಗಳ ಸಂರ ಕ್ಷಣೆ ಮತ್ತು ಪೋಷಣೆಗೆ ದತ್ತು ಸ್ವೀಕಾರ ಉತ್ತಮ ಯೋಜನೆ. ಇದಕ್ಕೆ ಸ್ಥಿತಿವಂತರೂ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುವುದು ಅಗತ್ಯವಾಗಿದೆ ಎಂದರು.
ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಸ್ಪಂದನೆ ದೊರೆತಿದೆ. ಇನ್ನೂ ಹೆಚ್ಚಿನ ಬೆಂಬಲ ದೊರೆಯುವ ನಿರೀಕ್ಷೆಯೂ ನಮ್ಮದಾಗಿದೆ. ಮೃಗಾಲಯದಲ್ಲಿ ಘೇಂಡಾಮೃಗಗಳ ವಾಸಕ್ಕೆ ಸುಸಜ್ಜಿತ ಆವರಣ ನಿರ್ಮಿಸಲು ಇಂಡಿಯನ್ ಆಯಿಲ್ ಅವರಲ್ಲಿ ಮನವಿ ಮಾಡಿದ್ದೇನೆ. ಇದಕ್ಕೆ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.

ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜೀತ್ ಎಂ.ಕುಲಕರ್ಣಿ, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‍ನ ಮೈಸೂರು ವಿಭಾಗದ ವಿಭಾಗೀಯ ರೀಟೆಲ್ ಸೇಲ್ಸ್ ಮುಖ್ಯಸ್ಥ ಸುನಿಲ್‍ಕುಮಾರ್ ಮಿಶ್ರ, ಡಿಜಿಎಂ ಆನಂದಮೂರ್ತಿ, ಎಲ್‍ಪಿಜಿ ಘಟಕದ ಸಹಾಯಕ ವ್ಯವಸ್ಥಾಪಕ ಹೆಚ್.ಎನ್.ಹರ್ಷ ಮತ್ತಿತರರು ಹಾಜರಿದ್ದರು.

Source:mysurumithra