ಮೈಸೂರಿನ ಹೆಬ್ಬಾಳ ಕೆರೆಯಲ್ಲಿ ಮೀನುಗಳ ಸಾವು: ಮೂಗು ಮುಚ್ಚಿಕೊಂಡು ವಾಯುವಿಹಾರ ಮಾಡುತ್ತಿರುವ ಸಾರ್ವಜನಿಕರು

Mar 13, 2021

ಜಿಲ್ಲೆಯ ರಿಂಗ್ ರಸ್ತೆ ಬಳಿಯಿರುವ ಹೆಬ್ಬಾಳ ಕೆರೆಯನ್ನು ಅಭಿವೃದ್ಧಿ ಪಡಿಸಲು ಇನ್ಫೋಸಿಸ್ ಕೆರೆ ನಿರ್ವಹಣಾ ತಂಡ ಸಾವಿರಾರು ಮೀನುಗಳನ್ನು ಕೆರೆಗೆ ಬಿಟ್ಟಿತ್ತು. ಕೆರೆಯಲ್ಲಿ ಮೀನುಗಳನ್ನ ಬಿಟ್ಟಿರುವ ಬಗ್ಗೆ ನಿನ್ನೆಯಷ್ಟೇ (ಮಾರ್ಚ್ 12) ಇನ್ಫೋಸಿಸ್ ಸಿಬ್ಬಂದಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್​ಗೆ ಮಾಹಿತಿ ನೀಡಿತ್ತು.

ಮೈಸೂರು: ಈ ಬಾರಿ ರಾಜ್ಯದ ಹಲವು ಕಡೆಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಕೆರೆಯ ಮೀನುಗಳು ಸಾವನ್ನಪ್ಪುತ್ತಿವೆ. ಕೆಲವು ಕಡೆ ಕಾರ್ಖಾನೆಯ ಕಲುಷಿತ ನೀರಿನಿಂದ ಸಾವನ್ನಪ್ಪಿದ್ದರೆ ಇನ್ನು ಕೆಲವು ಕಡೆ ಉದ್ದೇಶ ಪೂರ್ವಕವಾಗಿ ಕೆರೆಗೆ ವಿಷವನ್ನು ಹಾಕಿ ಮೀನುಗಳನ್ನು ಸಾಯಿಸಿರುವ ಘಟನೆಗಳು ಕೂಡಾ ನಡೆದಿವೆ. ಅದರಂತೆ ಇತ್ತೀಚೆಗಷ್ಟೇ ಅಭಿವೃದ್ಧಿ ಹೊಂದಿದ್ದ ಕೆರೆಯ ಮೀನುಗಳು ಇದೀಗ ಸಾವನ್ನಪ್ಪಿರುವ ಘಟನೆ ರಿಂಗ್ ರಸ್ತೆ ಬಳಿಯಿರುವ ಹೆಬ್ಬಾಳ ಕೆರೆಯಲ್ಲಿ ಸಂಭವಿಸಿದೆ.

ಜಿಲ್ಲೆಯ ರಿಂಗ್ ರಸ್ತೆ ಬಳಿಯಿರುವ ಹೆಬ್ಬಾಳ ಕೆರೆಯನ್ನು ಅಭಿವೃದ್ಧಿ ಪಡಿಸಲು ಇನ್ಫೋಸಿಸ್ ಕೆರೆ ನಿರ್ವಹಣಾ ತಂಡ ಸಾವಿರಾರು ಮೀನುಗಳನ್ನು ಕೆರೆಗೆ ಬಿಟ್ಟಿತ್ತು. ಕೆರೆಯಲ್ಲಿ ಮೀನುಗಳನ್ನ ಬಿಟ್ಟಿರುವ ಬಗ್ಗೆ ನಿನ್ನೆಯಷ್ಟೇ (ಮಾರ್ಚ್ 12) ಇನ್ಫೋಸಿಸ್ ಸಿಬ್ಬಂದಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್​ಗೆ ಮಾಹಿತಿ ನೀಡಿತ್ತು. ಅಲ್ಲದೇ ಬಿಟ್ಟಿದ್ದ ಮೀನುಗಳನ್ನು ಸಚಿವರು ನಿನ್ನೆ ವೀಕ್ಷಣೆಯನ್ನೂ ಮಾಡಿದ್ದರು. ಆದರೆ ಇದೀಗ ಹೆಬ್ಬಾಳ ಕೆರೆಯ ಮೀನುಗಳು ಸಾವನ್ನಪ್ಪಿವೆ. ಮೀನುಗಳ ಸಾವಿಗೆ ಇನ್ನು ಕಾರಣ ತಿಳಿದುಬಂದಿಲ್ಲ. ಸತ್ತಿರುವ ಮೀನುಗಳಿಂದ ವಿಪರೀತ ವಾಸನೆ ಹುಟ್ಟಿದ್ದು, ವಾಯುವಿಹಾರ ಮಾಡುತ್ತಿರುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.

ಚಿಕ್ಕ ಮಗಳೂರಿನಲ್ಲಿ ಮೀನುಗಳ ಮಾರಣಹೋಮ
ಕೆರೆಗೆ ವಿಷ ಹಾಕಿದ್ದರಿಂದ ರಾಶಿ- ರಾಶಿ ಮೀನುಗಳು ಸಾವನ್ನಪ್ಪಿರುವ ಘಟನೆ ಎರಡು ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮೈಮಲ್ಲಾಪುರದಲ್ಲೂ ನಡೆದಿತ್ತು. ತಮ್ಮಯ್ಯ ಎಂಬುವವರ ಕೆರೆಯಲ್ಲಿ ಮೀನುಗಳನ್ನು ಸಾಕಿದ್ದರು. ಆದರೆ ಕಿಡಿಗೇಡಿಗಳು ವಿಷ ಹಾಕಿದ್ದರಿಂದ ಲಕ್ಷಾಂತರ ಮೀನುಗಳು ಸಾವನ್ನಪ್ಪಿದ್ದವು

Source:TV9Kannada