ಜಗ್ಗೇಶ್ ಹೆಗಲಿಗೆ ಹೊಸ ಜವಾಬ್ದಾರಿ: ಬಿಜೆಪಿ ಬೆಂಗಳೂರು ನಗರ ವಕ್ತಾರರಾಗಿ ನೇಮಕ
ಜಗ್ಗೇಶ್ ಸೇರಿ 10 ಜನರನ್ನ ವಕ್ತಾರರನ್ನಾಗಿ ನೇಮಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು: ನಟ ಜಗ್ಗೇಶ್ ಅವರನ್ನು ಬಿಜೆಪಿ ಬೆಂಗಳೂರು ನಗರ ಘಟಕದ ವಕ್ತಾರರಾಗಿ ನೇಮಿಸಲಾಗಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್ಕುಮಾರ್ ಕಟೀಲ್ ಬುಧವಾರ (ಫೆ.24) ಆದೇಶ ಹೊರಡಿಸಿದ್ದಾರೆ. ಜಗ್ಗೇಶ್ ಸೇರಿ ಒಟ್ಟು 10 ಮಂದಿಯನ್ನು ವಿವಿಧ ನಗರಗಳಿಗೆ ವಕ್ತಾರರನ್ನಾಗಿ ಘೋಷಿಸಿದೆ. ದರ್ಶನ್ ಅಭಿಮಾನಿಗಳು ಮತ್ತು ಜಗ್ಗೇಶ್ ನಡುವೆ ನಡೆಯುತ್ತಿದ್ದ ವಿವಾದದಿಂದ ಸುದ್ದಿಯಲ್ಲಿದ್ದ ಜಗ್ಗೀಶ್ ಆಡಳಿತ ಪಕ್ಷದೊಳಗೆ ನಡೆದಿರುವ ಬೆಳವಣಿಗೆಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ.
ದರ್ಶನ್ ಅಭಿಮಾನಿಗಳು ಮತ್ತು ಜಗ್ಗೇಶ್ ನಡುವಣ ವಿವಾದ ಕೊನೆಗೂ ತಣ್ಣಗಾಗುತ್ತಿದೆ. ಟಿವಿ9 ಕನ್ನಡದಲ್ಲಿ ನಟ ದರ್ಶನ್ ಕ್ಷಮೆ ಯಾಚಿಸುವ ಮೂಲಕ ಕಳೆದ ಮೂರು ದಿನಗಳಿಂದ ಹತ್ತಿ ಉರಿಯುತ್ತಿದ್ದ ವಿವಾದಕ್ಕೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಜಗ್ಗೇಶ್, ಧನ್ಯವಾದ ಹೇಳಿದ್ದರು. ಈ ಘಟನೆ ಬೆನ್ನಲ್ಲೇ ಜಗ್ಗೇಶ್ಗೆ ಪಕ್ಷದಿಂದ ಉತ್ತಮ ಸ್ಥಾನ-ಮಾನ ದೊರೆತಿದೆ. ಜಗ್ಗೇಶ್ ಪಕ್ಷದ ಬೆಂಗಳೂರು ಮುಖ್ಯ ವಕ್ತಾರರಾಗಿ ನೇಮಕಗೊಂಡಿದ್ದಾರೆ.
ಬಿಬಿಎಂಪಿ ವಾರ್ಡ್ಗಳ ಪುನರ್ವಿಂಗಡನೆ ಪ್ರಕ್ರಿಯೆ ವಿವಾದ ಮತ್ತು ಬಿಬಿಎಂಪಿ ಚುನಾವಣೆ ಸಮೀಪದಲ್ಲಿರುವುದರಿಂದ ಜಗ್ಗೇಶ್ಗೆ ನೀಡಿರುವ ಹೊಸ ಹೊಣೆಗಾರಿಕೆ ರಾಜಕೀಯ ವಲಯದಲ್ಲಿ ಹಲವರ ಗಮನ ಸೆಳೆದಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಜಗ್ಗೇಶ್ ಯಶವಂತಪುರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಕೊನೆಯ ಕ್ಷಣದಲ್ಲಿ ಟಿಕೆಟ್ ಸಿಕ್ಕಿದ್ದರಿಂದ ಹೆಚ್ಚು ಪ್ರಚಾರ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅವರು ಚುನಾವಣೆಯಲ್ಲಿ ಸೋತಿದ್ದರು ಎಂದು ವಿಶ್ಲೇಷಿಸಲಾಗಿತ್ತು. ನಂತರ ಅವರು ಸಿನಿಮಾದಲ್ಲೇ ಹೆಚ್ಚು ತೊಡಗಿಕೊಂಡರು. ಈಗ ಅವರಿಗೆ ಪಕ್ಷದಲ್ಲಿ ದೊಡ್ಡ ಸ್ಥಾನಮನ ಸಿಕ್ಕಿದೆ.
ಜಗ್ಗೇಶ್ ಸೇರಿ 10 ಜನರನ್ನ ವಕ್ತಾರರನ್ನಾಗಿ ನೇಮಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ. ಆಡಳಿತ ಪಕ್ಷವಾದ್ದರಿಂದ ಬಿಜೆಪಿ ಮಾಡಿದ ಸಾಧನೆಯನ್ನು ಜನರಿಗೆ ಮುಟ್ಟಿಸುವುದು, ಮಾಧ್ಯಮಗಳಿಗೆ ಪಕ್ಷದ ಕಾರ್ಯ ಸಾಧನೆ ಬಗ್ಗೆ ಹೇಳುವುದು, ಪಕ್ಷ ಮತ್ತು ಸರ್ಕಾರ ಮಾಡಿದ ಕೆಲಸಗಳನ್ನು ಜನರಿಗೆ ಮನಗಾಣಿಸುವ ಕೆಲಸವನ್ನು ಇವರು ಮಾಡಲಿದ್ದಾರೆ.
- ಜಗ್ಗೇಶ್, ಬೆಂಗಳೂರು ವಕ್ತಾರರು
- ಚಲವಾದಿ ನಾರಾಯಣಸ್ವಾಮಿ, ಬೆಂಗಳೂರು ವಕ್ತಾರರು
- ತೇಜಸ್ವಿನಿ ಗೌಡ, ಬೆಂಗಳೂರು ವಕ್ತಾರರು
- ಗಿರಿಧರ ಉಪಾಧ್ಯಾಯ, ಬೆಂಗಳೂರು ವಕ್ತಾರರು
- ರಾಜೂಗೌಡ, ಯಾದಗಿರಿ ವಕ್ತಾರರು
- ರಾಜುಕುಮಾರ್ ಪಾಟೀಲ್ ತೆಲ್ಕೂರ, ಕಲಬುರಗಿ ವಕ್ತಾರರು
- ಗಣೇಶ್ ಕಾರ್ಣಿಕ್, ಮಂಗಳೂರು ಮುಖ್ಯ ವಕ್ತಾರರು
- ರಾಜೀವ್ ಬೆಳಗಾವಿ, ವಕ್ತಾರರು
- ಎಂ.ಬಿ. ಜಿರಲಿ ಬೆಳಗಾವಿ, ವಕ್ತಾರರು
Source: TV9 Kannada