‘ಕಿರಿಕ್​ ಪಾರ್ಟಿ 2’ ಸಿನಿಮಾಗಾಗಿ ಕಾಯುತ್ತಿದ್ದೀರಾ? ಹಾಗಾದರೆ ಇಲ್ಲಿದೆ ರಕ್ಷಿತ್​ ಶೆಟ್ಟಿ ನೀಡಿದ ಗುಡ್​ ನ್ಯೂಸ್​!

Mar 12, 2021

‘ಕಿರಿಕ್​ ಪಾರ್ಟಿ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ಅದರ 2ನೇ ಪಾರ್ಟ್​ಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ. ಅಂಥವರಿಗೆ ಇದು ಸಿಹಿ ಸುದ್ದಿ.

ರಕ್ಷಿತ್​ ಶೆಟ್ಟಿ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್​ ನೀಡಿದ ಸಿನಿಮಾ ಎಂದರೆ ಅದು ‘ಕಿರಿಕ್​ ಪಾರ್ಟಿ’. ಕಾಲೇಜು ಕಥೆಯುಳ್ಳ ಆ ಸಿನಿಮಾ ಮೂಲಕ ರಕ್ಷಿತ್​ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡರು. ‘ಕಿರಿಕ್​ ಪಾರ್ಟಿ’ಯ ಸೀಕ್ವೆಲ್​ ಯಾವಾಗ ಬರಲಿದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿ ಒಂದು ಗುಡ್ ನ್ಯೂಸ್​ ಕೇಳಿಬಂದಿದೆ.

ಪ್ರಸ್ತುತ ರಕ್ಷಿತ್​ ಶೆಟ್ಟಿ ಅವರು ‘777 ಚಾರ್ಲಿ’ ಮತ್ತು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಹೇಮಂತ್​ ಎಂ. ರಾವ್​ ನಿರ್ದೇಶನ ಮಾಡುತ್ತಿದ್ದು, ಮಾ.12ರಂದು ಮುಹೂರ್ತ ನೆರವೇರಿಸಲಾಗಿದೆ. ಬೆಂಗಳೂರಿನ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ರಕ್ಷಿತ್​ ಮಾತನಾಡಿದರು. ಈ ಸಂದರ್ಭದಲ್ಲಿ ಅವರಿಗೆ ‘ಕಿರಿಕ್​ ಪಾರ್ಟಿ 2’ ಬಗ್ಗೆ ಪ್ರಶ್ನೆ ಎದುರಾಯಿತು.

‘ಕಿರಿಕ್​ ಪಾರ್ಟಿ’ ಸಿನಿಮಾ ಮಾಡಿದ ತಂಡವೇ ಈಗ ‘ಕಿರಿಕ್​ ಪಾರ್ಟಿ 2’ ಮಾಡುತ್ತಿದೆ. ರಿಷಬ್​ ಶೆಟ್ಟಿ ಅವರೇ ನಿರ್ದೇಶನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಸ್ಕ್ರಿಪ್ಟ್​ ಬರೆಯುವ ಕೆಲಸ ಆರಂಭ ಆಗಿದೆ. 2021ರಲ್ಲಿಯೇ ಚಿತ್ರೀಕರಣ ಮುಗಿಸಬೇಕು ಎಂಬ ಗುರಿ ಇಟ್ಟುಕೊಳ್ಳಲಾಗಿದೆ. ಅಂದರೆ ಚಿತ್ರದ ಕೆಲಸಗಳು ವೇಗವಾಗಿ ನಡೆಯುತ್ತಿವೆ ಎಂಬುದು ಖಚಿತ. 2016ರಲ್ಲಿ ಕಿರಿಕ್​ ಪಾರ್ಟಿ ಚಿತ್ರವನ್ನು ಇಷ್ಟಪಟ್ಟವರು ಈಗ ಅದರ ಸೀಕ್ವೆಲ್​ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಕಿರಿಕ್​ ಪಾರ್ಟಿ’ ಮೂಲಕ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಬಹುದೊಡ್ಡ ಎಂಟ್ರಿ ಸಿಕ್ಕಿತ್ತು. ಮೊದಲ ಸಿನಿಮಾದಲ್ಲೇ ಅವರು ಕರುನಾಡ ಕ್ರಶ್​ ಅಂತ ಫೇಮಸ್​ ಆದರು. ನಂತರ ಪರಭಾಷೆಯಲ್ಲಿ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದವು. ಸದ್ಯ ಅವರು ಬಾಲಿವುಡ್​ನ ಕದ ತಟ್ಟಿದ್ದಾರೆ. ‘ಕಿರಿಕ್​ ಪಾರ್ಟಿ 2’ ಸಿನಿಮಾದಲ್ಲಿ ರಶ್ಮಿಕಾ ಮತ್ತು ಸಂಯುಕ್ತಾ ಹೆಗಡೆ ಇರುವುದಿಲ್ಲ ಎಂಬುದು ಖಚಿತ. ಈ ವಿಚಾರವನ್ನು ರಕ್ಷಿತ್​ ಕೂಡ ಸ್ಪಷ್ಟಪಡಿಸಿದ್ದಾರೆ. ಸೀಕ್ವೆಲ್​ನಲ್ಲಿ ನಾಯಕಿಯರು ಬದಲಾಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಸದ್ಯಕ್ಕಂತೂ ರಕ್ಷಿತ್​ ಶೆಟ್ಟಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅವರ ಡ್ರೀಮ್​ ಪ್ರಾಜೆಕ್ಟ್​ ಆದಂತಹ ‘ಪುಣ್ಯಕೋಟಿ’ ಚಿತ್ರದ ಸ್ಕ್ರಿಪ್ಟ್​ ಕೆಲಸಕ್ಕೆ ಅವರು ಸಮಯ ಮೀಸಲಿಡಬೇಕಿದೆ. ನಟನಾಗಿ ಅನೇಕ ಸಿನಿಮಾಗಳ ಕಥೆ ಕೇಳುತ್ತಿದ್ದಾರೆ. ಇಂಥ ಬ್ಯುಸಿ ಶೆಡ್ಯೂಲ್​ನ ನಡುವೆ ಪ್ರತಿ ಭಾನುವಾರ ‘ಕಿರಿಕ್​ ಪಾರ್ಟಿ 2’ ಚಿತ್ರಕ್ಕೆ ಸಂಬಂಧಿಸಿದಂತೆ ಟೀಮ್​ ಜೊತೆ ಚರ್ಚೆ ನಡೆಸಲು ಅವರು ಸಮಯ ಮೀಸಲಿಡುತ್ತಿದ್ದಾರೆ.

Source:TV9Kannada