ಕಾನೂನು ಪದಕೋಶ ಲೋಕಾರ್ಪಣೆ: ಕೇಂದ್ರದ 15 ನಿಯಮಗಳು ಕನ್ನಡದಲ್ಲಿ ಲಭ್ಯ

Sep 21, 2021

ಬೆಂಗಳೂರು: ವಿಧಾನಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾನೂನು ಪದಕೋಶ, ಕೇಂದ್ರದ 15 ನಿಯಮಗಳ ಕನ್ನಡ ಅವತರಣಿಕೆಯನ್ನು ಲೋಕಾರ್ಪಣೆ ಮಾಡಿದರು. ‘ಕಾನೂನು ಪದಕೋಶ ಲೋಕಾರ್ಪಣೆ ಮಾಡಿದ್ದು ಸಂತಸದ ಸಂಗತಿ. ಕಾನೂನು ಇಲಾಖೆ ಉತ್ತಮ ಕೆಲಸ ಮಾಡಿದೆ. ಕಾನೂನು ನಿಘಂಟನ್ನು 2003ರಲ್ಲಿ ಕನ್ನಡಕ್ಕೆ ತರ್ಜುಮೆ ಮಾಡಲಾಗಿತ್ತು. ಅದು ಇಂದಿಗೂ ನ್ಯಾಯಾಲಯಗಳಲ್ಲಿ ಬಳಕೆಯಾಗುತ್ತಿದೆ. ಕಾನೂನು ಪದಕೋಶ, 15 ನಿಯಮಗಳ ಲೋಕಾರ್ಪಣೆಯಿಂದ ಮತ್ತಷ್ಟು ಅನುಕೂಲವಾಗಲಿದೆ ಎಂದು ಬೊಮ್ಮಾಯಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಕಾನೂನು ಪದಕೋಶವನ್ನು ನಿಯಮಿತವಾಗಿ ಪರಿಷ್ಕರಿಸುವ ಕೆಲಸ ನಿರಂತರ ನಡೆಯಲಿದೆ. ಈ ಕಾರ್ಯಕ್ಕೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಸೆಯಾಗಿ ನಿಂತಿದ್ದರು. ಮುಂದಿನ ದಿನಗಳಲ್ಲಿಯೂ ಕಾನೂನು ಪದಕೋಶದ ಪರಿಷ್ಕರಣೆ, ಅನುವಾದದ ಕೆಲಸಗಳು ನಿರಂತರ ನಡೆಯಲಿವೆ. ಕನ್ನಡದಲ್ಲಿ ಕಾನೂನು ಮಾಹಿತಿಯನ್ನು ಸುಲಭವಾಗಿ ಒದಗಿಸಬೇಕು ಎನ್ನುವುದು ಸರ್ಕಾರದ ಉದ್ದೇಶ ಎಂದು ತಿಳಿಸಿದರು. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಕಾರ್ಯಕ್ರಮ ಆಯೋಜಿಸಿತ್ತು.

ಭಕ್ತಿವೇದಾಂತ ಪ್ರಭುಪಾದರ ವರ್ಧಂತಿ
ಇಸ್ಕಾನ್ ಸ್ಥಾಪಕ ಸ್ವಾಮಿ ಭಕ್ತಿವೇದಾಂತ ಪ್ರಭುಪಾದರ 125ನೇ ವರ್ಧಂತಿ (ಜನ್ಮದಿನೋತ್ಸವ) ನಗರದಲ್ಲಿ ಮಂಗಳವಾರ ನಡೆಯಿತು. ಪ್ರಭುಪಾದರ 125ನೇ ಜನ್ಮದಿನದ ಅಂಗವಾಗಿ ಹೊರತಂದಿರುವ ವಿಶೇಷ ನಾಣ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಭಾರತದ ಬೆಳಕು ನೆನಪಿಸುವ ಕೆಲಸವನ್ನು ಇಸ್ಕಾನ್ ಮಾಡಿದೆ. ಪೂಜ್ಯರು ಭಗವದ್ಗೀತೆಯನ್ನು ಇಡೀ ಜಗತ್ತಿಗೆ ಪಸರಿಸಿದ್ದರು. ಸ್ವಾಮಿ ಪ್ರಭುಪಾದರ ಜನ್ಮದಿನಾಚರಣೆ ನಡೆಯುತ್ತಿರೋದು ಅವಿಸ್ಮರಣೀಯ ಸಂಗತಿ. ಅವರು ಜ್ಞಾನದ ಬೆಳಕನ್ನ ಎಲ್ಲೆಡೆ ಪಸರಿಸಿದವರು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಭುದೇವರ ಜನ್ಮದಿನದ ಅಂಗವಾಗಿ ನಾಣ್ಯ ಬಿಡುಗಡೆ ಮಾಡಿದ್ದರು. ನಮಗೂ ಕೂಡ ಉಡುಗೊರೆಯಾಗಿ ಸಿಕ್ಕಿರುವುದು ಸಂತೋಷ. ಇಸ್ಕಾನ್ ನಡೆಸುತ್ತಿರುವ ಅನ್ನದಾನ ಸೇವೆಗೆ ಧನ್ಯವಾದಗಳು ಎಂದು ಹೇಳಿದರು.

Source:tv9kannada