Yuvarathnaa: ಸಿನಿಮಾ ಒಂದೇ ಅಲ್ಲ, ನಿಜ ಜೀವನದಲ್ಲೂ ಎಂ.ಕೆ.ಮಠರ ಬೆನ್ನಿಗೆ ನಿಂತ ಯುವರತ್ನ

Apr 14, 2021

ಸಿನಿಮಾ ಒಂದೇ ಅಲ್ಲ, ತನ್ನ ಆಪ್ತರ ಸಮಸ್ಯೆಗಳನ್ನು ನಿಜ ಜೀವನದಲ್ಲೂ ಪರಿಹರಿಸುವ ಪರಮಾತ್ಮನಾಗಿ ಅಭಯ ನೀಡಿದ್ದಾರೆ ಪುನೀತ್ ರಾಜ್​ಕುಮಾರ್.

ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಯುವರತ್ನ ಸಿನಿಮಾದ ಕ್ಲೈಮಾಕ್ಸ್​ನಲ್ಲಿ ಹಿರಿಯ ನಟ ಎಂ.ಕೆ.ಮಠರನ್ನು ತಬ್ಬಿಕೊಳ್ಳುತ್ತಾರೆ. ‘ಯುವರತ್ನ’ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್​ ಅವರದು ಕಾಲೇಜನ್ನು ರಕ್ಷಿಸುವ ಪಾತ್ರ, ಎಂ.ಕೆ.ಮಠ ಅವರದ್ದು ಕಾಲೇಜಿನ ಬೆಲ್ ಬಾರಿಸುವ ವೃದ್ಧನ ಪಾತ್ರ. ಈ ಅಪ್ಪುಗೆ ನೋಡುಗರನ್ನು ಹೃದಯವನ್ನು ಭಾಷ್ಪಗೊಳಿಸುತ್ತದೆ. ಕಣ್ಣಾಲಿಗಳಲ್ಲಿ ಹನಿ ಮೂಡಿಸುತ್ತವೆ. ಅವರಿಬ್ಬರ ಅಪ್ಪುಗೆ ನೋಡಿದ ವೀಕ್ಷಕರ ಮನಸು ಬೆಚ್ಚಗಾಗುತ್ತದೆ. ಅವರಿಬ್ಬರ ನಿಜವಾಗಿಯೂ ತಾತ ಮೊಮ್ಮಗ ಅನಿಸುತ್ತದೆ. ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಿದ ಪವರ್ ಸ್ಟಾರ್ ಬೆನ್ನಿಗೆ ಎಂ.ಕೆ.ಮಠ ನಿಂತರೆ, ನಿಜ ಜೀವನದಲ್ಲಿ ಎಂ.ಕೆ.ಮಠರ ಬೆನ್ನಿಗೆ ಪುನೀತ್ ನಿಂತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಯುವರತ್ನ ಸಿನಿಮಾ ಚಿತ್ರೀಕರಣದ ವೇಳೆ ಎಂ.ಕೆ.ಮಠ ಪುನೀತ್ ಅವರಿಗೆ ಆಪ್ತರಾಗಿದ್ದರು. ಬಿಡುವಿನ ವೇಳೆಯಲ್ಲಿ ಇಬ್ಬರೂ ಪರಸ್ಪರ ಮಾತನಾಡುತ್ತಿದ್ದರು. ಇದೇ ವೇಳೆ ಎಂ.ಕೆ.ಮಠರಿಗೆ ಆರ್ಥಿಕವಾಗಿ ಬಹಳ ಸಮಸ್ಯೆ ಇದೆ ಎಂಬ ವಿಷಯ ಪುನೀತ್ ರಾಜ್​ಕುಮಾರ್​ಗೆ ತಿಳಿದಿದೆ. ಸಿನಿಮಾದಲ್ಲಿ ಬಡಪಾಯಿ ಜೀವಗಳ ಪರ ನಿಂತು ಕಾಪಾಡುವ ಅಪ್ಪು ನಿಜ ಜೀವನದಲ್ಲೂ ಅದನ್ನೇ ಮಾಡಿದ್ದಾರೆ. ಈ ವಿಷಯ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಫೇಸ್​ಬುಕ್ ಪೋಸ್ಟ್​ ಮೂಲಕ ಹೊರಬಿದ್ದಿದೆ.

ಆರ್ಥಿಕವಾಗಿ ಕಷ್ಟದಲ್ಲಿದ್ದ ಎಂ.ಕೆ.ಮಠ ಅವರಿಗೆ ಆರ್ಥಿಕ ಸಹಾಯ ಮಾಡುವುದಾಗಿ ದೊಡ್ಮನೆ ಹುಡುಗ ಪುನೀತ್ ಅಭಯ ನೀಡಿದ್ದಾರೆ. ಎಂ.ಕೆ.ಮಠರ ಮನೆ ಕಟ್ಟಲು ಅಗತ್ಯ ಬೀಳುವ ಎಲ್ಲ ಸಹಾಯವನ್ನು ಮಾಡುವುದಾಗಿ ಅವರು ತಿಳಿಸಿದ್ದಾರೆ. ಸಿನಿಮಾ ಒಂದೇ ಅಲ್ಲ, ತನ್ನ ಆಪ್ತರ ಸಮಸ್ಯೆಗಳನ್ನು ನಿಜ ಜೀವನದಲ್ಲೂ ಪರಿಹರಿಸುವ ಪರಮಾತ್ಮನಾಗಿ ಅಭಯ ನೀಡಿದ್ದಾರೆ ಪುನೀತ್ ರಾಜ್​ಕುಮಾರ್. ಸಂಬಂಧ, ಗೆಳೆತನ, ಹೃದಯ ವೈಶಾಲ್ಯತೆಗಳನ್ನು ಸಿನಿಮಾ ಒಂದರಲ್ಲೇ ತೋರಿಸುವುದಲ್ಲ, ನಿಜ ಜೀವನದಲ್ಲೂ ಅನುಸರಿಸಬೇಕು ಎಂಬುದನ್ನು ನಟ ಸಾರ್ವಭೌಮ ತೋರಿಸಿಕೊಟ್ಟಿದ್ದಾರೆ.

Source: TV9Kannada