Virat Kohli: ನಮಗೆ ಸೋಲುಣಿಸಿದ ಆತನೇ ನಮ್ಮ ಪ್ರಮುಖ ಅಸ್ತ್ರ.

Sep 21, 2021

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) ದ್ವಿತಿಯಾರ್ಧದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಸೋಲಿನೊಂದಿಗೆ ಅಭಿಯಾನ ಆರಂಭಿಸಿದೆ. ಸೋಮವಾರ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ (KKR) ವಿರುದ್ದದ ಆರ್​ಸಿಬಿ 9 ವಿಕೆಟ್​ಗಳಿಂದ ಹೀನಾಯ ಸೋಲನುಭವಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಪರ ಬ್ಯಾಟ್ಸ್​ಮನ್​ಗಳು ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೇವಲ 92 ರನ್​ಗಳಿಗೆ ಆಲೌಟ್​ ಆಯಿತು. ಇತ್ತ ಸುಲಭ ಗುರಿ ಪಡೆದ ಕೊಲ್ಕತ್ತಾ ನೈಟ್​ ರೈಡರ್ಸ್ ತಂಡವು 10 ಓವರ್​ನಲ್ಲಿ 1 ವಿಕೆಟ್​ ನಷ್ಟಕ್ಕೆ 94 ರನ್ ಬಾರಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದ ಸೋಲಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ (Virat Kohli) ಎದುರಾಳಿ ತಂಡದ ಬೌಲರ್​ನ ಹೊಗಳುವ ಮೂಲಕ ಎಲ್ಲರ ಗಮನ ಸೆಳೆದರು.

ಹೌದು, ಆರ್​ಸಿಬಿ ತಂಡದ ಪ್ರಮುಖ 3 ವಿಕೆಟ್ ಪಡೆದ ವರುಣ್ ಚಕ್ರವರ್ತಿಯ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಮೆಚ್ಚುಗೆ ಸೂಚಿಸಿದರು. ಯುವ ಆಟಗಾರರಿಂದ ಇಂತಹ ಅದ್ಭುತ ಪ್ರದರ್ಶನ ನೋಡಲು ಇಚ್ಛಿಸುತ್ತೇನೆ. ಈತ ಮುಂದೆ ಟೀಮ್ ಇಂಡಿಯಾಗೆ ಪ್ರಮುಖ ಆಟಗಾರ ಆಗಲಿದ್ದಾನೆ ಎಂದು ನಾನು ಡಗೌಟ್‌ನಲ್ಲಿ ಕುಳಿತು ಹೇಳುತ್ತಿದ್ದೆ. ಇಂತಹ ಪ್ರದರ್ಶನದಿಂದ ಭಾರತ ತಂಡದ ಬೆಂಚ್ ಬಲವು ಬಲಗೊಳ್ಳುತ್ತದೆ. ವರುಣ್ ಚಕ್ರವರ್ತಿ ಶೀಘ್ರದಲ್ಲೇ ಟೀಂ ಇಂಡಿಯಾ ಪರವಾಗಿ ಆಡಲಿದ್ದಾರೆ. ಪ್ರಸ್ತುತ ಅವರ ಪ್ರದರ್ಶನ ನಮ್ಮ ತಂಡಕ್ಕೆ ಪ್ಲಸ್​ ಪಾಯಿಂಟ್ ಎಂದು ವಿರಾಟ್ ಕೊಹ್ಲಿ ಹೇಳಿದರು.

ವರುಣ್ ಚಕ್ರವರ್ತಿ ಟೀಮ್ ಇಂಡಿಯಾ ಟಿ20 ತಂಡದಲ್ಲಿ ಸ್ಥಾನದಲ್ಲಿ ಪಡೆದಿದ್ದು, ಹೀಗಾಗಿ ಕೆಕೆಆರ್ ಸ್ಪಿನ್ನರ್ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಪ್ರಮುಖ ಸ್ಪಿನ್ ಅಸ್ತ್ರವಾಗಲಿದ್ದಾರೆ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಆರ್​ಸಿಬಿ ವಿರುದ್ದದ 4 ಓವರ್‌ಗಳಲ್ಲಿ ಕೇವಲ 13 ರನ್ ನೀಡಿ 3 ವಿಕೆಟ್ ಪಡೆದ ವರುಣ್ ಚಕ್ರವರ್ತಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಕಳೆದ ಸೀಸನ್​ನಲ್ಲೂ ವರುಣ್ ಚಕ್ರವರ್ತಿ ಯುಎಇ ಪಿಚ್​ನಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ್ದರು. ಈ ಬಾರಿ ಕೂಡ ಉತ್ತಮವಾಗಿಯೇ ಆರಂಭಿಸಿದ್ದು, ಹೀಗಾಗಿ ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಚಕ್ರವರ್ತಿ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣದಿಂದಲೇ ವಿರಾಟ್ ಕೊಹ್ಲಿ ಕೂಡ ವರುಣ್ ಸ್ಪಿನ್ ಮೋಡಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

Source:tv9kannada