Cauvery Calling: ಬೆಂಗಳೂರು ಗ್ರಾ. ಸೇರಿ 7 ಜಿಲ್ಲೆಯಲ್ಲಿ ಕಾವೇರಿ ಕೂಗು ಗ್ರಾಮ ಸಂಪರ್ಕ ಅಭಿಯಾನ; ಮರ ಮಿತ್ರರ ನೇಮಕ

Aug 12, 2021

ಮೈಸೂರು: ಕಾವೇರಿ ನದಿ ಉಳಿವಿಗಾಗಿ ಈಶಾ ಫಂಡೇಶನ್​ ಹಮ್ಮಿಕೊಂಡಿರುವ ಕಾವೇರಿ ಕೂಗು ಗ್ರಾಮ ಸಂಪರ್ಕ ಅಭಿಯಾನವನ್ನು ಜಿಲ್ಲೆಯಾದ್ಯಂತ ನಡೆಸಲಾಗುವುದು. ಕಾವೇರಿ ಕೂಗು ಯೋಜನೆಯ ಭಾಗವಾಗಿ ಕಾವೇರಿ ನದಿ ಹರಿಯುವ ಭಾಗಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ನದಿ ಸಂರಕ್ಷಣೆ, ಅಂತರ್ಜಲ ಹೆಚ್ಚಳ ಹಾಗೂ ರೈತರಿಗೂ ಆದಾಯ ತರುವ ಕಾರ್ಯಕ್ರಮವಾಗಿದೆ ಎಂದು ಈಶಾ ಫೌಂಡೇಶನ್​ (Isha foundation) ಸ್ವಯಂ ಸೇವಕರಾದ ತೀರ್ಥನ್​ ಮತ್ತು ಸಂಭವ್ ಸುದ್ದಿಗೋಷ್ಠಿಯಲ್ಲಿ​ ತಿಳಿಸಿದ್ದಾರೆ. ಈಗಾಗಲೇ ಈ ಅಭಿಯಾನ ಆರಂಭವಾಗಿದ್ದು, 215 ಗ್ರಾಮ ಪಂಚಾಯತ್​​​ಗಳಿಗೆ ಭೇಟಿ ಕಾರ್ಯಕ್ರಮ ನಡೆಸಲಾಗಿದೆ. ಸೆಪ್ಟೆಂಬರ್​​ವರೆಗೂ ಈ ಅಭಿಯಾನ ನಡೆಯಲಿದೆ.

ಕಾವೇರಿ ನದಿ ಉಳಿವಿಗಾಗಿ ಕಾವೇರಿ ಕೂಗು ಯೋಜನೆ (Cauvery Calling) ನಡೆಸಲಾಗುತ್ತಿದೆ. ಕಾರ್ಯಕ್ರಮದ ಅಂಗವಾಗಿ ರೈತರಿಂದ ಗಿಡಗಳಿಗಾಗಿ ಬೇಡಿಕೆ ಪಡೆಯುವ ಉದ್ದೇಶದಿಂದ ಕಾವೇರಿ ಕೂಗು (cauvery koogu) ಗ್ರಾಮ ಸಂಪರ್ಕ ಅಭಿಯಾನಕ್ಕೆ ಆಗಸ್ಟ್​ 2 ರಂದು ಚಾಲನೆ ದೊರೆತಿದೆ. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 1785 ಪಂಚಾಯತ್​​ಗಳಲ್ಲಿ ಈ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​​ ರಾಜ್​ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಸಹಯೋಗದಲ್ಲಿ ಕಾವೇರಿ ಕೊಳ್ಳದ ಜಿಲ್ಲೆಗಳ ಪ್ರತಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್​ ಮತ್ತು ಜಿಲ್ಲಾ ಪಂಚಾಯತ್​​ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಮುಂದಿನ 8 ವಾರಗಳಲ್ಲಿ 1,800 ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಈಶಾ ಸ್ವಯಂ ಸೇವಕರಾದ ತೀರ್ಥನ್​ ಮತ್ತು ಸಂಭವ್ ತಿಳಿಸಿದ್ದಾರೆ.

ರೈತರಿಗೆ ಯಾವ ರೀತಿಯ ಗಿಡಗಳು ಬೇಕು ಎಂಬ ಮಾಹಿತಿ ಪಡೆಯುವ ಉದ್ದೇಶದಿಂದ ಕಾವೇರಿ ಕೂಗು ಗ್ರಾಮ ಸಂಪರ್ಕ ಅಭಿಯಾನ ತಂಡವು ಎಲ್ಲ 1785 ಪಂಚಾಯತ್​ಗಳಲ್ಲಿಯೂ (Cauvery basin) ‘ಮರ ಮಿತ್ರ’ ಎಂಬ ಹಸರಿನಲ್ಲಿ ಸಂಯೋಜಕರನ್ನು ನೇಮಿಸಿಕೊಳ್ಳಲಾಗುವುದು. ಮರ ಮಿತ್ರರು (mara mitra) ಮರ ಆಧಾರಿತ ಕೃಷಿ, ಅರಣ್ಯ ಕೃಷಿ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ, ರೈತ ಸಮುದಾಯವನ್ನು ಸಂಘಟಿಸಿ, ಅವರಿಂದ ಮರಗಳ ಬೇಡಿಕೆ ಪಡೆಯುತ್ತಾರೆ ಎಂದು ಅವರು ವಿವರಿಸಿದರು.

Source: tv9 kannada