ಸುದೀಪ್‌ ಸಿನಿ ಜರ್ನಿಯ ಸಿಲ್ವರ್‌ಜುಬಿಲಿ;ವಿಕ್ರಾಂತ್‌ ರೋಣ 3ಡಿ ಸಿನಿಮಾ!

Feb 10, 2021

ಕಿಚ್ಚ ಅಂತ ಯಾರೋ ಕೂಗಿದರು

ಅದು ಬೆಂಗಳೂರಿನ ಮೇನಕಾ ಚಿತ್ರಮಂದಿರ. ‘ಹುಚ್ಚ’ ಬಿಡುಗಡೆಯ ದಿನ. ನಾನೂ ಎಲ್ಲರ ಜತೆಗೇ ಸಿನಿಮಾ ನೋಡಿದೆ. ಹೊರಗೆ ಬರುವಾಗ ಒಬ್ಬ ಕಿಚ್ಚ.ಕಿಚ್ಚ ಅಂತ ಕೂಗಿದ. ಎಲ್ಲರೂ ನನ್ನ ಮೇಲೆತ್ತಿದರು. ಹಾರ, ಸಿಳ್ಳೆ, ಚಪ್ಪಾಳೆ. ಆ ಸಂತೋಷವನ್ನು ಬುಜ್‌ರ್‍ ಖಲೀಫಾ ಕಾರ್ಯಕ್ರಮ ಕೂಡ ರಿಪ್ಲೇಸ್‌ ಮಾಡ‚ಲಾಗದು.

ಎಲ್ಲರೂ ಸೇರಿ 25 ವರ್ಷ

ನಿರ್ಮಾಪಕರು, ಸಹ ಕಲಾವಿದರು, ನಿರ್ದೇಶಕರು, ತಂತ್ರಜ್ಞರು, ಪ್ರೇಕ್ಷಕರು, ಅಭಿಮಾನಿಗಳು, ಮಾಧ್ಯಮಗಳು, ಕುಟುಂಬ, ಸ್ನೇಹಿತರು ಮತ್ತು ನಾನು- ಈ ಎಲ್ಲವೂ ಸೇರಿದಾಗಲೇ ನನ್ನ 25 ವರ್ಷಗಳ ಜರ್ನಿ ಪರಿಪೂರ್ಣ ಆಗೋದು.

ಇನ್ನು ಹೊಸ ಪಯಣ ಶುರು

ಇಪ್ಪತ್ತೈದು ವರ್ಷ ಸಾಧನೆಯ ಸಂಭ್ರಮ ಆಚರಿಸಿಕೊಳ್ಳುತ್ತಿದ್ದೇನೆ ಅಂದರೆ ಇಲ್ಲಿಗೆ ಮುಗಿಯಿತು, ಇನ್ನೇನೂ ಇಲ್ಲ ಎಂಬ ಭಾವನೆ ಬೇಡ. ಇಲ್ಲಿಂದ ನನ್ನ ಹೊಸ ಪಯಣ ಶುರುವಾಗುತ್ತದೆ.

ತುಳಿದಷ್ಟೂಗಟ್ಟಿಯಾಗುತ್ತೇನೆ

ನನ್ನ ಪಯಣದಲ್ಲೂ ಕಹಿ ಘಟನೆಗಳು, ಅವಮಾನಗಳು ಎದುರಾಗಿವೆ. ಆದರೆ, ಯಾವ ಸನ್ನಿವೇಶಗಳೂ ನನ್ನ ಉತ್ಸಾಹವನ್ನು ಕುಗ್ಗಿಸಿಲ್ಲ. ಮುಂದೆಯೂ ಕುಗ್ಗಿಸಲ್ಲ. ಯಾರಾದರೂ ಇರಿಟೇಟ್‌ ಮಾಡಿದರೆ ಮತ್ತಷ್ಟುಎಚ್ಚರಿಕೆಯಿಂದ ಕೆಲಸ ಮಾಡುತ್ತೇನೆ. ಸಿಟ್ಟು ತರಿಸಿದರೆ ಇನ್ನಷ್ಟುಹಠದಿಂದ ಕೆಲಸ ಮಾಡುತ್ತೇನೆ. ತುಳಿದಷ್ಟುಗಟ್ಟಿಯಾಗುತ್ತ ಹೋಗುವುದು ನನ್ನ ಸ್ವಭಾವ.

ಐರನ್‌ ಲೆಗ್‌, ಸ್ಟ್ರಾಂಗ್‌ ಆಗಿದೆ

ನನ್ನ ಎಲ್ಲರೂ ಐರನ್‌ ಲೆಗ್‌ ಎನ್ನುತ್ತಿದ್ದರು. ನಿಜ, ಐರನ್‌ ಲೆಗ್ಗೇ. ಅದಕ್ಕೇ ತುಂಬಾ ಸ್ಟ್ರಾಂಗ್‌. ಒದೆಸಿಕೊಂಡೋರು ಬದುಕಲ್ಲ . ಆದರೆ, ಐರನ್‌ ಲೆಗ್‌ ಎಂದರೆ ಅಪಶಕುನ ಎಂದುಕೊಂಡಿದ್ದಾರೆ. ಈಗ ಹೇಳುತ್ತಿದ್ದೇನೆ ಕೇಳಿ, ನಾನು ಐರನ್‌ ಲೆಗ್ಗೇ! ದೇವರ ಕೊಟ್ಟಎರಡು ಕಾಲ ಮೇಲೆ ನೀನು ನಿಂತ್ಕೋ ಅಂತ ತಂದೆ- ತಾಯಿ ಹೇಳಿದರು. ನಾನು ನಿಂತ್ಕೊಂಡಿದ್ದೇನೆ. ಐರನ್ನೂ ಅಲ್ಲ, ಗೋಲ್ಡೂ ಅಲ್ಲ!

ಸಲಹೆ, ನೋ ಥ್ಯಾಂಕ್ಸ್‌!

ಜೀವನದಲ್ಲಿ ಎಲ್ಲರೂ ಬೇರೆಯವರಿಗೆ ಸಲಹೆ ಕೊಡಲು ಹೋಗುತ್ತಾರೆ. ನಾನು ಬೇರೆಯವರ ಸಲಹೆಗಳನ್ನು ಕೇಳುವುದಿಲ್ಲ. ಅವರು ಹೇಳುವುದನ್ನು ಕೇಳಿಸಿಕೊಂಡು ಮುಂದೆ ಹೋಗುತ್ತೇನೆ. ನಾನು ಯಾಕೆ ಇನ್ನೊಬ್ಬರ ಸಲಹೆ ತೆಗೆದುಕೊಳ್ಳಲಿ ಹೇಳಿ?

ಸಿಟ್ಟುಸೆಡವು, ನಡುವೆ ನಗು

ಆರಂಭದ ದಿನಗಳಲ್ಲಿ ನನ್ನಿಂದಲೂ ತಪ್ಪುಗಳು ಆಗಿವೆ. ಅದನ್ನು ನೀವು ತಿದ್ದಿದ್ದೀರಿ. ಕೋಪಿಸಿಕೊಂಡಿದ್ದೇವೆ, ಜಗಳ ಆಡಿದ್ದೇವೆ. ಕೋರ್ಟ್‌ಗೆ ಹೋಗಿದ್ದೇವೆ. ಮತ್ತೆ ವಾಪಸ್ಸು ಬಂದು ಪರಸ್ಪರ ಎದುರಾಗಿ ಒಬ್ಬರನ್ನೊಬ್ಬರು ನೋಡಿ ನಕ್ಕಿದ್ದೇವೆ. ಜಗಳ- ಕೋಪ, ತಾಪಗಳ ನಡುವೆಯೂ ಆ ನಗು ಇನ್ನೂ ಇದೆ ಎಂದರೆ ನಾವು ಪ್ರಾಮಾಣಿಕವಾಗಿದ್ದೇವೆ.

ಕನ್ನಡ ಬಾವುಟ ಮೂಡಿಸಿದ ರೋಮಾಂಚನ

ಬುಜ್‌ರ್‍ ಖಲೀಫಾ ಮೇಲೆ ‘ವಿಕ್ರಾಂತ್‌ ರೋಣ’ ಚಿತ್ರದ ಟೈಟಲ್‌ ಮೂಡಿದ್ದಕ್ಕಿಂತ ಹೆಚ್ಚಾಗಿ ಕನ್ನಡದ ಬಾವುಟ ಕಟ್ಟಡದ ಮೇಲೆ ಪ್ರದರ್ಶನಗೊಂಡಿದ್ದು ಹೆಮ್ಮೆ ಮೂಡಿಸಿತು. ನನ್ನ ಫೋಟೋ ನೋಡಿ ನನಗೆ ಅಷ್ಟೇನು ಅನಿಸಲಿಲ್ಲ. ನಮ್ಮ ಕನ್ನಡದ ಬಾವುಟ ನೋಡಿ ಕೆಲಕಾಲ ಅಚ್ಚರಿ ಪಟ್ಟೆ. ಆಗ ನನ್ನಲ್ಲಿ ಹುಟ್ಟಿಕೊಂಡ ರೋಮಾಂಚನಕ್ಕೆ ಪದಗಳಿಲ್ಲ.

ವಿಕ್ರಾಂತ್‌ ರೋಣ 3ಡಿ

ವಿಕ್ರಾಂತ್‌ ರೋಣ ಲಾಕ್‌ಡೌನ್‌ನಲ್ಲಿ ಕಂಡ ಕನಸು. ಚಿಕ್ಕ ಸಿನಿಮಾ ಅಂತ ಶುರುವಾಗಿ ಅದು ನಮ್ಮ ನಿರೀಕ್ಷೆಗೂ ಮೀರಿ ಎಲ್ಲರನ್ನೂ ತಲುಪಿದೆ. ಭಾರತದ ಎಲ್ಲ ಭಾಷೆಗಳಲ್ಲೂ ಈ ಸಿನಿಮಾ ತೆರೆಗೆ ಬರುತ್ತಿದೆ. ವಿಶೇಷ ಎಂದರೆ ಈ ಚಿತ್ರವನ್ನು ನಿರ್ಮಾಪಕ ಜಾಕ್‌ ಮಂಜು 3ಡಿಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ನಿರ್ದೇಶನಕ್ಕೆ ಬಿಡುವಿಲ್ಲ

ಎಲ್ಲಿವರೆಗೂ ನನಗಾಗಿ ಕತೆ, ಪಾತ್ರ ಸೃಷ್ಟಿಸುತ್ತಾರೋ ಅಲ್ಲಿಯವರೆಗೂ ನನ್ನೊಳಗಿನ ಕಲಾವಿದ ಜೀವಂತ. ನನಗೂ ನಿರ್ದೇಶನ ಮಾಡುವ ಪ್ಲಾನ್‌ ಇತ್ತು. ಆದರೆ, ನಿರ್ದೇಶಕರು ನನ್ನ ಬಿಡುತ್ತಿಲ್ಲ. ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು, ಹಿಂದಿಯಿಂದಲೂ ನನಗಾಗಿ ಕತೆ, ಪಾತ್ರ ಮಾಡಿಕೊಂಡು ಬರುತ್ತಿದ್ದಾರೆ. ಅವರ ಕನಸುಗಳಲ್ಲಿ ನಾನು ಭಾಗಿಯಾಗುತ್ತಿದ್ದೇನೆ.

2021 ನನ್ನ ಬೆಸ್ಟ್‌ ವರ್ಷ

ಕೊರೋನಾ, ಲಾಕ್‌ಡೌನ್‌ ಇದೆಯಲ್ಲ ಅದು ಎಲ್ಲರಿಗೂ ಜೀವನದ ಪಾಠ ಕಲಿಸಿತು. ಹಲವರ ಪಾಲಿಗೆ 2021 ಅತ್ಯಂತ ಕೆಟ್ಟವರ್ಷ. ನನ್ನ ಪ್ರಕಾರ ಅದೇ ಅತ್ಯುತ್ತಮ ವರ್ಷ. ಈರುಳ್ಳಿ, ಹಾಲು, ತರಕಾರಿ ಬೆಲೆ ಗೊತ್ತಾಯಿತು. ಮನೆ, ಕುಟುಂಬದ ಸದಸ್ಯರ ಜತೆ ಇರುವ ಕ್ಷಣಗಳ ಮಹತ್ವ ಹೇಳಿತು. ಕಲಿಕೆಗೆ ಅವಕಾಶ ಕೊಟ್ಟಿತು. ನಾನು ಕತೆ ಬರದೆ, ಅಡುಗೆ ಮಾಡಿದೆ, ನಾಯಿಮರಿಗಳ ಜತೆ ಮಾತನಾಡಿದೆ, ಅಂತ್ಯಾಕ್ಷರಿ ಹಾಡಿದೆ, ಮಿಮಿಕ್ರಿ ಮಾಡಿದೆ. ನಮ್ಮ ಯಾವ ಹೀರೋ ಇಮೇಜ್‌ಗಳು ನೆನಪಾಗಲಿಲ್ಲ.

Source:Suvarna news