ವಾಟ್ಸ್‌ಆ್ಯಪ್‌ ಕಂಪನಿಗೆ ಸುಪ್ರೀಂ ತೀವ್ರ ತರಾಟೆ!

Feb 16, 2021

ನವದೆಹಲಿ(ಫೆ.16): ಬಳಕೆದಾರರ ಖಾಸಗಿತನದ ರಕ್ಷಣೆಯ ವಿಷಯದಲ್ಲಿ ವಾಟ್ಸ್‌ಆ್ಯಪ್‌ ಕಂಪನಿ ಭಾರತದಲ್ಲೊಂದು ಹಾಗೂ ಯುರೋಪ್‌ನಲ್ಲೊಂದು ಮಾನದಂಡ ಅನುಸರಿಸುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಆ ಕಂಪನಿಯನ್ನು ತೀವ್ರ ತರಾಟೆ ತೆಗೆದುಕೊಂಡಿದೆ.

‘ನೀವು ಎರಡು ಅಥವಾ ಮೂರು ಲಕ್ಷ ಕೋಟಿಯ ಕಂಪನಿಯಾಗಿರಬಹುದು. ಆದರೆ, ಜನರು ಹಣಕ್ಕಿಂತ ಹೆಚ್ಚಾಗಿ ತಮ್ಮ ಖಾಸಗಿತನಕ್ಕೆ ಬೆಲೆ ನೀಡುತ್ತಾರೆ. ವಾಟ್ಸ್‌ಆ್ಯಪ್‌ನಿಂದ ತಾವು ಖಾಸಗಿತನ ಕಳೆದುಕೊಳ್ಳುತ್ತೇವೆ ಎಂಬ ದೊಡ್ಡ ಆತಂಕ ಜನರಿಗಿದೆ. ಅವರನ್ನು ರಕ್ಷಿಸುವುದು ನಮ್ಮ ಕರ್ತವ್ಯ’ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಅವರ ಪೀಠ ಸೋಮವಾರ ಹೇಳಿದೆ. ಅಲ್ಲದೆ, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ವಾಟ್ಸ್‌ಆ್ಯಪ್‌ಗೆ ನೋಟಿಸ್‌ ಕೂಡ ಜಾರಿಗೊಳಿಸಿದೆ.

ಫೇಸ್‌ಬುಕ್‌ನ ಒಡೆತನದಲ್ಲಿರುವ ವಾಟ್ಸ್‌ಆ್ಯಪ್‌ ಜನರ ಖಾಸಗಿ ಮಾಹಿತಿ ಸಂಗ್ರಹಿಸಿ ಹಣಕ್ಕಾಗಿ ಮಾರಿಕೊಳ್ಳುತ್ತಿದೆ ಎಂದು ಆಕ್ಷೇಪಿಸಿ ಕರ್ಮಣ್ಯಾ ಸಿಂಗ್‌ ಸರೀನ್‌ ಎಂಬುವರು 2017ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಅದರ ವಿಚಾರಣೆಯ ವೇಳೆ ಇತ್ತೀಚೆಗೆ ಅರ್ಜಿದಾರರು ವಾಟ್ಸ್‌ಆ್ಯಪ್‌ ಕಂಪನಿ ಯುರೋಪ್‌ನಲ್ಲಿ ಬಳಕೆದಾರರ ಖಾಸಗಿತನ ರಕ್ಷಣೆಗೆ ಕಠಿಣ ಮಾನದಂಡ ಅನುಸರಿಸುತ್ತಿದೆ, ಆದರೆ ಭಾರತದಲ್ಲಿ ಬೇರೆಯದೇ ಸಡಿಲ ಮಾನದಂಡ ಅನುಸರಿಸುತ್ತಿದೆ ಎಂದು ಆರೋಪಿಸಿದ್ದರು. ಸೋಮವಾರ ಅದರ ವಿಚಾರಣೆ ನಡೆದಾಗ ವಾಟ್ಸ್‌ಆ್ಯಪ್‌ ಪರ ವಕೀಲ ಕಪಿಲ್‌ ಸಿಬಲ್‌, ‘ಯುರೋಪ್‌ನಲ್ಲಿ ಬಳಕೆದಾರರ ಮಾಹಿತಿ ರಕ್ಷಣೆಗೆ ವಿಶೇಷ ಕಾಯ್ದೆಯಿದೆ. ಭಾರತದಲ್ಲಿ ಅಂತಹ ಕಾಯ್ದೆಯಿಲ್ಲ. ಇದ್ದಿದ್ದರೆ ವಾಟ್ಸಾಪ್‌ ಅದನ್ನು ಪಾಲಿಸುತ್ತಿತ್ತು’ ಎಂದು ಹೇಳಿದರು.

ಈ ವೇಳೆ ಅರ್ಜಿದಾರರ ಪರ ವಕೀಲ ಶ್ಯಾಂ ದಿವಾನ್‌ ಅವರು ಭಾರತದಲ್ಲೂ ಬಳಕೆದಾರರ ಮಾಹಿತಿ ರಕ್ಷಣೆಗೆ ಕಾಯ್ದೆ ತರಬೇಕು ಎಂದರು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರ ಹಾಗೂ ವಾಟ್ಸ್‌ಆ್ಯಪ್‌ಗೆ ನೋಟಿಸ್‌ ಜಾರಿಗೊಳಿಸಿತು.
Source:Suvarna News