ಯುವರತ್ನನಿಗೆ ರಿಲೀಫ್: ಏಪ್ರಿಲ್ 7ರವರೆಗೂ ಥಿಯೇಟರ್​ ಹೌಸ್ ಫುಲ್​ಗೆ ಅವಕಾಶ

Apr 5, 2021

ಫಿಲ್ಮ್ ಚೇಂಬರ್ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಏಪ್ರಿಲ್​ 7ರವರೆಗೂ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದೆ. ಏಪ್ರಿಲ್ 7ರ ನಂತರ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿದೆ.

ಬೆಂಗಳೂರು: ಕೊರೊನಾ ನಿಯಮಾವಳಿಗಳು ಹೆಚ್ಚಾದ ಕಾರಣ ರಾಜ್ಯ ಸರ್ಕಾರ ಕಠಿಣ ಮಾರ್ಗದರ್ಶಿ ಬಿಡುಗಡೆಗೊಳಿಸಿತ್ತು. ಥಿಯೇಟರ್​ನಲ್ಲಿ ಕೇವಲ ಶೇ. 50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿನಿಮಾ ರಂಗಕ್ಕೆ ಕೊನೆಗೂ ಜಯ ಸಿಕ್ಕಿದೆ. ಸರ್ಕಾರ ಕೈಗೊಂಡ ಕಠಿಣ ನಿರ್ಧಾರವನ್ನು ಏಪ್ರಿಲ್ 7ರ ವರೆಗೆ ಸಡಿಲಿಸುವುದಾಗಿ ತಿಳಿಸಿದೆ.

ಫಿಲ್ಮ್ ಚೇಂಬರ್ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಏಪ್ರಿಲ್​ 7ರವರೆಗೂ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದೆ. ಏಪ್ರಿಲ್ 7ರ ನಂತರ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿದೆ. ಈ ಮೂಲಕ ಸದ್ಯದ ನಿರ್ಧಾರ ಕೆಲವು ದಿನಗಳವರೆಗೆ ಸಡಿಲಿಕೆಯಾದಂತಾಗಿದೆ.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಕಠಿಣ ನಿಯಮಾವಳಿಗಳನ್ನು ಹೇರಿ ರಾಜ್ಯ ಸರ್ಕಾರ ನಿನ್ನೆ (ಏಪ್ರಿಲ್ 3) ಆದೇಶ ಹೊರಡಿಸಿತ್ತು. ಅದರಂತೆ, ನಿಗದಿತ 8 ಜಿಲ್ಲೆಗಳಲ್ಲಿ ಸಿನಿಮಾ ಹಾಲ್​ಗಳಲ್ಲಿ ಕೇವಲ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ ನೀಡಬೇಕು ಎಂದು ಸೂಚನೆ ನೀಡಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಚಂದನವನದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಪುನೀತ್ ರಾಜ್​ಕುಮಾರ್ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು
ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗಷ್ಟೇ ಅವಕಾಶ ಹಿನ್ನೆಲೆಯಲ್ಲಿ, ನಟ ಪುನೀತ್ ರಾಜ್​ಕುಮಾರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿದ್ದರು. ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದರು. ತಜ್ಞರ ಜೊತೆ ಚರ್ಚಿಸಿ ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದ್ದರು. ಆ ಬಳಿಕ, ಮೂರು ದಿನಗಳ ಕಾಲ ಶೇ. 100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ.

ಪುನೀತ್​ ಭೇಟಿ ವೇಳೆ ಗೃಹಸಚಿವ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಕೆ.ಸಿ.ನಾರಾಯಣಗೌಡ, ‘ಯುವರತ್ನ’ ನಿರ್ದೇಶಕ ಸಂತೋಷ ಆನಂದ್ ರಾಮ್, ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಉಪಸ್ಥಿತರಿದ್ದರು.

Source:TV9Kannada