ಮೈಸೂರು ವಿವಿ 101ನೇ ಘಟಿಕೋತ್ಸವ; ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಚೈತ್ರಾ ಹೆಗಡೆ 20 ಚಿನ್ನದ ಪದಕಗಳ ಸಾಧನೆ

Sep 7, 2021

ಮೈಸೂರು: ಕರ್ನಾಟಕದ ಹೆಮ್ಮೆಯಾಗಿರುವ ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವವನ್ನು ಪೂರೈಸಿ 101ನೇ ಘಟಿಕೋತ್ಸವವನ್ನು ಇಂದು (ಸೆಪ್ಟೆಂಬರ್ 7) ಆಚರಿಸಿತು. ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಘಟಿಕೋತ್ಸವದಲ್ಲಿ ಪುರಸ್ಕರಿಸಲಾಯಿತು. ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಚೈತ್ರಾ ನಾರಾಯಣ್ ಹೆಗಡೆ 20 ಚಿನ್ನದ ಪದಕ ಮತ್ತು ನಾಲ್ಕು ಬಹುಮಾನಗಳಿಗೆ ಭಾಜನರಾದರು. ಮೈಸೂರು ವಿವಿ ಕ್ರಾಫರ್ಡ್ ಹಾಲ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ಕನ್ನಡ ವಿಭಾಗದಲ್ಲಿ ಟಿ.ಎಸ್. ಮಾದಲಾಂಬಿಕೆ 10 ಪದಕ, 4 ಪ್ರಶಸ್ತಿ ಗಳಿಸಿಕೊಂಡರು. ಎಂಎ ಸಂಸ್ಕೃತ ವಿಭಾಗದ ಸೀಮಾಗೆ 8 ಪದಕ, 2 ದತ್ತಿ ಪ್ರಶಸ್ತಿ, ಬಿಎ ಪದವಿಯ ಸಿಂಧೂ ನಾಗರಾಜ್​ 7 ಪದಕ, 7 ದತ್ತಿ ಪ್ರಶಸ್ತಿ, ಎಂಎಸ್ಸಿ ಸಸ್ಯಶಾಸ್ತ್ರ ವಿಭಾಗದ ಹಿಮಾಂಷಿ ಚೌಹಾಣ್‌ಗೆ 8 ಪದಕ, ಹಿಮಾಂಷಿ ಚೌಹಾಣ್‌ಗೆ 3 ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಘಟಿಕೋತ್ಸವದಲ್ಲಿ ರಾಜ್ಯಪಾಲ ಮತ್ತು ವಿಶ್ವವಿದ್ಯಾಲಯದ ಕುಲಪತಿ ಥಾವರಚಂದ ಗೆಹಲೋತ್ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.

29,852 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಘಟಿಕೋತ್ಸವದಲ್ಲಿ ಒಟ್ಟು 29,852 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗಿದೆ. ಅವರಲ್ಲಿ 20,118 (67.39%) ಮಹಿಳೆಯರು ಹಾಗೂ 9,734 (32.60%) ಪುರುಷರಿದ್ದರು. ವಿವಿಧ ವಿಷಯಗಳಲ್ಲಿ 244 ಅಭ್ಯರ್ಥಿಗಳಿಗೆ ಪಿಎಚ್.ಡಿ ಪದವಿ ಪಡೆದವರಲ್ಲಿ, 98 (40.16%) ಮಹಿಳೆಯರು ಮತ್ತು 146 (59.83%) ಪುರುಷರು ಇದ್ದರು. ಒಟ್ಟಾರೆ 387 ಪದಕಗಳು ಹಾಗೂ 216 ಅಭ್ಯರ್ಥಿಗಳಿಗೆ 178 ದತ್ತಿ ಬಹುಮಾನಗಳನ್ನು ಪ್ರದಾನ ಮಾಡಲಾಯಿತು. ಅವರಲ್ಲಿ 172 ಮಹಿಳೆಯರು ಹಾಗೂ 44 ಪುರುಷ ಅಭ್ಯರ್ಥಿಗಳಿದ್ದರು. ಇದೇ ವೇಳೆ 7,143 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 22,465 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ನೀಡಲಾಯಿತು. ಈ ಪೈಕಿ 20,020 ಮಹಿಳೆಯರು, 9,588 ಪುರುಷ ಅಭ್ಯರ್ಥಿಗಳಿದ್ದರು.

Source:tv9kannada