ಮೀನು​ಗಾ​ರ​ರಿಗೆ ಸಂತಸದ ಸುದ್ದಿ ನೀಡಿದ ಸರ್ಕಾರ

Feb 3, 2021

ಬೆಂಗಳೂರು(ಫೆ.03): ಮೀನುಗಾರಿಕೆ ಅಭಿವೃದ್ಧಿ ನಿಗಮವು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ ಮತ್ತು ತದಡಿ ಮೀನುಗಾರಿಕೆ ಬಂದರಿನಲ್ಲಿ ಪರ್ಸೀನ್‌ ಬೋಟ್‌ಗಳು ಹಿಡಿದು ತಂದ ಮೀನನ್ನು ಮಾರಾಟ ಮಾಡಿ ಮೀನುಗಾರರಿಗೆ ಉತ್ತಮ ಬೆಲೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್‌. ಅಂಗಾರ ತಿಳಿಸಿದ್ದಾರೆ.

ಸೋಮವಾರ ಬಿಜೆಪಿ ಸದಸ್ಯ ಉಮಾನಾಥ ಕೋಟ್ಯಾನ್‌ ಪ್ರಶ್ನೆಗೆ ಉತ್ತರ ನೀಡಿದ ಅವರು, ಮೀನುಗಾರಿಕೆ ಅಭಿವೃದ್ಧಿ ನಿಗಮವು ರಾಜ್ಯದ ಮೀನುಗಾರಿಕೆ ಬಂದರುಗಳಲ್ಲಿ ಪ್ರತಿದಿನ 220 ಟನ್‌ ಸಾಮರ್ಥ್ಯ ಮಂಜುಗಡ್ಡೆ ಸ್ಥಾವರಗಳನ್ನು ನಿರ್ಮಿಸಿ ಮೀನುಗಾರಿಕೆಗೆ ಮಂಜುಗಡ್ಡೆಯ್ನು ಸರಬರಾಜು ಮಾಡಲಾಗುತ್ತಿದೆ. ಮತ್ಸ್ಯಾಶ್ರಯ ಯೋಜನೆ, ಸುಸಜ್ಜಿತ ಮೀನು ಮಾರುಕಟ್ಟೆಗಳ ನಿರ್ಮಾಣ ಮತ್ತು ಇತರೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ತದಡಿ ಮೀನುಗಾರಿಕಾ ಬಂದರಿನಲ್ಲಿ ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ಮೀನು ರಫ್ತು ಮಾಡುವ ಪರವಾನಿಗೆ ಹೊಂದಿರುವ ಸಮುದ್ರೋತ್ಪನ್ನ ರಫ್ತು ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಾಗುವುದು ಎಂದು ಹೇಳಿದರು.

ನಿಗಮದ ಮೂಲಕ ರಾಜ್ಯದ 11 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹವಾನಿಯಂತ್ರಿತ ಮತ್ಸ್ಯದರ್ಶಿನಿ ಮಳಿಗೆಯನ್ನು ತಲಾ 125 ಲಕ್ಷ ರು. (ಒಂದು ಮತ್ಸ್ಯದರ್ಶಿನಿಗೆ) ವೆಚ್ಚದಂತೆ ಒಟ್ಟು 13.57 ಕೋಟಿ ರು. ವೆಚ್ಚದಲ್ಲಿ ನಿರ್ಮಿಸುವ ಬಗ್ಗೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ 31 ಮಂದಿಗೆ ನಿಗಮ ಮೂಲಕ ಮತ್ಸ್ಯದರ್ಶಿನಿ ಮಳಿಗೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತ್ಸ್ಯದರ್ಶಿನಿ ಮಳಿಗೆಗಳನ್ನು ಸ್ಥಾಪಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಆಸಕ್ತಿ ಹೊಂದಿರುವವರು ಮುಂದೆ ಬಮದರೆ ಮಳಿಗೆಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗುವುದು ಎಂದರು.

ಮೀನುಗಾರಿಕೆ ನಿಗಮವು ಮಂಗಳೂರಿನಲ್ಲಿ ತಾಜಾ ಮೀನನ್ನು ಅರಬ್‌ ದೇಶಗಳಿಗೆ ರಫ್ತು ಮಾಡುವ ಚಿಲ್ಡ್‌ ಫಿಶ್‌ ಸಂಸ್ಕರಣಾ ಘಟಕವನ್ನು ನಿರ್ಮಿಸಿದೆ. ಬಂದರುಗಳಲ್ಲಿ ಡಿಸೇಲ್‌ ಬಂಕ್‌ಗಳನ್ನು ನಿರ್ಮಿಸಿ ಮೀನುಗಾರಿಕೆ ಬೋಟುಗಳಿಗೆ ಡಿಸೇಲ್‌ ಅನ್ನು ಸರಬರಾಜು ಮಾಡಲಾಗುತ್ತಿದೆ. ಮತ್ಸ್ಯ ಜೋಪಾಸನೆ ಯೋಜನೆಯಡಿ ರಾಜ್ಯದ 20 ಮೀನು ಮಾರುಕಟ್ಟೆಸ್ಥಳದಲ್ಲಿ 2 ಟನ್‌ ಸಾಮರ್ಥ್ಯದ ಶೀಥಲೀಕರಣ ಘಟಕ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಉತ್ತರ ಕರ್ನಾಟಕದಲ್ಲಿ ಮೀನುಗಾರಿಕೆ ವಿವಿ ಸ್ಥಾಪನೆಗೆ ಒತ್ತಾಯ

ಮಂಗಳೂರಿನಲ್ಲಿ ಮಾತ್ರ ಮೀನುಗಾರಿಕೆ ವಿಶ್ವವಿದ್ಯಾಲಯ ಮಾತ್ರ ಇದ್ದು, ಉತ್ತರ ಕರ್ನಾಟಕದಲ್ಲಿಯೂ ಮೀನುಗಾರಿಕೆ ವಿಶ್ವವಿದ್ಯಾಲಯ ಆರಂಭಿಸಬೇಕು ಎಂಬ ಒತ್ತಾಯಗಳು ಸದನದಲ್ಲಿ ಕೇಳಿ ಬಂತು. ಬಿಜೆಪಿ ಸದಸ್ಯ ಎ.ಎಸ್‌.ಪಾಟೀಲ್‌ ನಡಹಳ್ಳಿ ಅವರು ಮತ್ಸ್ಯಸಂಪದ ಯೋಜನೆ ಜಾರಿಗಾಗಿ ಕೇಂದ್ರ ಸರ್ಕಾರವು ರಾಜ್ಯಕ್ಕೆ 952 ಕೋಟಿ ರು. ಅನುದಾನ ನೀಡಿದೆ. ಮೀನುಗಾರಿಕೆಯಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲಾ ಮೂಲಸೌಕರ್ಯಗಳಿವೆ. ಉತ್ತರ ಕರ್ನಾಟಕದ ತುಂಗಾಭದ್ರಾ, ನಾರಾಯಣಪುರ ಮತ್ತು ಆಲಮಟ್ಟಿಜಲಾಶಯದಲ್ಲಿ ನೀರಿನ ಸೌಲಭ್ಯ ಇದ್ದು, ಫಿಶಿಂಗ್‌ ಮಾಡಲು ಅವಕಾಶ ಇದೆ ಎಂದರು. ಕಾಂಗ್ರೆಸ್‌ ಸದಸ್ಯ ಯು.ಟಿ.ಖಾದರ್‌ ಇದಕ್ಕೆ ಧ್ವನಿಗೂಡಿಸಿ ಉತ್ತರ ಕರ್ನಾಟಕದಲ್ಲಿಯೂ ವಿಶ್ವವಿದ್ಯಾಲಯ ಆರಂಭಿಸುವುದು ಒಳ್ಳೆಯದು. ಇದರಿಂದ ಮೀನುಗಾರಿಕೆ ಉತ್ತೇಜನ ನೀಡಬಹುದು ಎಂದು ಹೇಳಿದರು. ಇದಕ್ಕೆ ಉತ್ತರ ನೀಡಿದ ಮೀನುಗಾರಿಕೆ ಸಚಿವ ಎಸ್‌.ಅಂಗಾರ, ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಅಶ್ವಾಸನೆ ನೀಡಿದರು.

Source:Suvarna News