ಕಾಬೂಲ್​ನ ಶಹರ್-ಇ-ನಾವ್ ಪಾರ್ಕ್​ನಲ್ಲಿ ಆಶ್ರಯ ಪಡೆದಿದ್ದ ನೂರಾರು ಮಹಿಳೆಯರು ನಾಪತ್ತೆ; ಕುಟುಂಬಗಳಿಂದ ಹುಡುಕಾಟ

Aug 17, 2021

ತಾಲೀಬಾನ್​ ಉಗ್ರರು (Taliban Terrorists) ಮತ್ತು ಅಫ್ಘಾನಿಸ್ತಾನ ಸೈನಿಕರ (Afghanistan Soilders) ನಡುವಿನ ಹೋರಾಟ ನಡೆಯುತ್ತಿರುವ ಗ್ರಾಮಗಳಿಂದ ಪರಾರಿಯಾದ ನೂರಾರು ಮಹಿಳೆಯರು ಕಾಬೂಲ್ (Kabul)​​ನ ಶಹರ್-ಇ-ನಾವ್ ಪಾರ್ಕ್​​ನಲ್ಲಿ ಆಶ್ರಯ ಪಡೆದಿದ್ದರು. ಇದೀಗ ಆ ಎಲ್ಲ ಮಹಿಳೆಯರೂ ಕಣ್ಮರೆಯಾಗಿದ್ದಾರೆ ಎಂದು ಅಫ್ಘಾನ್​ ನಾಗರಿಕ ನಾವೇದ್​ ಎಂಬುವರೊಬ್ಬರು ಹೇಳಿದ್ದಾರೆ. ಈ ನಾವೇದ್​ ದೆಹಲಿಯಲ್ಲಿ ವಾಸವಾಗಿದ್ದು, ಅಫ್ಘಾನ್​ ಸ್ಥಿತಿ ನೋಡಿ ಮರುಗುತ್ತಿದ್ದಾರೆ. ಅಪ್ಘಾನಿಸ್ತಾನದ ವಿವಿಧ ಪ್ರಾಂತ್ಯಗಳ, ಹಳ್ಳಿಗಳ ಸುಮಾರು 10 ಸಾವಿರ ಜನರು ಬೇರೆ ಪ್ರದೇಶಗಳಿಗೆ ಪರಾರಿಯಾಗಿದ್ದಾರೆ. ಅಲ್ಲಿಂದಲೇ ತಮ್ಮ ದೇಶ ನೋಡಿ ಕಣ್ಣೀರಿಡುತ್ತಿದ್ದಾರೆ. ಇದೀಗ ಶಹರ್-ಇ-ನಾವ್ ಪಾರ್ಕ್​​ನಲ್ಲಿ ಆಶ್ರಯ ಪಡೆದಿದ್ದ ಮಹಿಳೆಯರೆಲ್ಲ ನಾಪತ್ತೆಯಾಗಿದ್ದಾರೆ. ಆ ಯುವತಿಯರು, ಮಹಿಳೆಯರ ಕುಟುಂಬದವರು ಅವರಿಗಾಗಿ ಹುಡುಕುತ್ತಿದ್ದು ಯಾರನ್ನೂ ಪತ್ತೆಯ ಮಾಡಲು ಆಗುತ್ತಿಲ್ಲ. ಅಫ್ಘಾನ್​ನಲ್ಲಿ ಪರಿಸ್ಥಿತಿ ತುಂಬ ಭೀಕರವಾಗಿದೆ ಎಂದಿದ್ದಾರೆ.

ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ನಾವೇದ್​, ನಾನು ಎಂಟು ವರ್ಷಗಳ ಹಿಂದೆಯೇ ನನ್ನ ದೇಶ ಬಿಟ್ಟು ಬಂದಿದ್ದೇನೆ. ಆದರೆ ನನಗೆ ಈಗಲೂ ಕೂಡ ಅಲ್ಲಿಂದ ಎಲ್ಲ ರೀತಿಯ ಮಾಹಿತಿಗಳೂ ಬರುತ್ತವೆ. ನನಗೆ ಅಮೇರಿಕದ ಖಾಸಗಿ ಭದ್ರತಾ ಸಂಸ್ಥೆಯೊಂದಿಗೆ ಒಳ್ಳೆಯ ಸಂಪರ್ಕವಿದೆ. ಹೀಗಾಗಿ ಎಲ್ಲ ರೀತಿಯ ಮಾಹಿತಿಗಳೂ ನನಗೆ ಸಿಗುತ್ತಿದೆ ಎಂದು ತಿಳಿಸಿದ್ದಾರೆ. ಬಾಂಬ್​ ದಾಳಿ, ಗುಂಡಿನ ದಾಳಿ ಮತ್ತು ಏರ್​ಸ್ಟ್ರೈಕ್​​ಗಳೆಲ್ಲ ಅಫ್ಘಾನಿಸ್ತಾನದ ಜನರಿಗೆ ಹೊಸದಲ್ಲ. ಅಲ್ಲಿನ ಚಿಕ್ಕ ಮಕ್ಕಳಿಗೂ ಇವುಗಳ ಪರಿಚಯ ಈಗಾಗಲೇ ಆಗಿಬಿಟ್ಟಿದೆ. ಆದರೆ ಒಂದಲ್ಲ ಒಂದು ದಿನ ದೇಶವನ್ನೇ ತೊರೆಯಬೇಕಾಗಿ ಬರಬಹುದು..ಅದು ಉಗ್ರರ ಕೈಸೇರುತ್ತದೆಂದು ಯಾರಿಗೂ ಕಲ್ಪನೆಯೂ ಇರಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಅಪ್ಘಾನಿಸ್ತಾನದಲ್ಲಿ ಯುವಕರ ಜೀವನ ಸದಾ ಅಪಾಯದಲ್ಲೇ ಇರುತ್ತದೆ. ಅದರಲ್ಲೂ ಹರೆಯದ ಯುವತಿಯರಂತೂ ಯಾವಾಗಲೂ ಹೆದರಿಕೆಯಲ್ಲೇ ಇರಬೇಕು. ಅದೆಷ್ಟೋ ಮನೆಗಳಿಗೆ ನುಗ್ಗಿ, ಆ ಮನೆಯಲ್ಲಿರುವ ಯುವತಿಯರನ್ನು ತಾಲಿಬಾನ್​ ಉಗ್ರರು ಎಳೆದೊಯ್ದ ಘಟನೆಗಳು ತುಂಬ ಸಲ ನಡೆದಿವೆ. ಅನೇಕಾನೇಕ ವರ್ಷಗಳಿಂದ ಇಂಥದ್ದೆಲ್ಲ ನಡೆಯುತ್ತಿದ್ದರೂ, ಅಫ್ಘಾನಿಸ್ತಾನ ಸರ್ಕಾರ ಸುಮ್ಮನೆ ಇತ್ತು ಎಂದೂ ನಾವೇದ್​ ತಿಳಿಸಿದ್ದಾರೆ. ಹಾಗೇ, ಇದೀಗ ನಾಪತ್ತೆಯಾಗಿರುವ ಮಹಿಳೆಯರ ಜವಾಬ್ದಾರಿ ಯಾರದ್ದು? ಆಕಸ್ಮಿಕವಾಗಿ ಅವರು ಕಾಣೆಯಾಗಿದ್ದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಇದೀಗ ಅಫ್ಘಾನಿಸ್ತಾನದ ಸಂಪೂರ್ಣ ನಿಯಂತ್ರಣ ತಾಲಿಬಾನ್​ ಉಗ್ರರ ಕೈಯಲ್ಲಿದೆ. ಹಾಗಾಗಿ ಅಲ್ಲಿನ ಜನರನ್ನು ಅವರು ಖಂಡಿತವಾಗಿಯೂ ಬಲವಂತವಾಗಿ ಕಳಿಸುತ್ತಾರೆ. ಇಷ್ಟಕ್ಕೆಲ್ಲ ಕಾರಣ ಅಂದಿನ ಅಧ್ಯಕ್ಷ ಅಶ್ರಫ್​ ಘನಿ. ಯಾವುದೋ ಒಂದು ರಾತ್ರಿಯಲ್ಲಿ ಅಫ್ಘಾನಿಸ್ತಾನದಲ್ಲಿ ಇಷ್ಟೆಲ್ಲ ದೊಡ್ಡ ಬೆಳವಣಿಗೆ ಆಗಿದ್ದಲ್ಲ. ತಾಲಿಬಾನಿಗಳು ಒಂದೊಂದೇ ಪ್ರಾಂತ್ಯವನ್ನು ವಶಪಡಿಸಿಕೊಳ್ಳುತ್ತ ಬಂದಾಗಲೂ ಅಫ್ಘಾನಿಸ್ತಾನ ಸರ್ಕಾರ ಬಾಯಿಮುಚ್ಚಿಕೊಂಡಿತ್ತು. ಹಾಗೊಮ್ಮೆ ಅಫ್ಘಾನಿಸ್ತಾನ ಮತ್ತು ತಾಲಿಬಾನ್​ ಸೇರಿ ಸರ್ಕಾರ ರಚನೆ ಮಾಡಿದ್ದರೆ, ಅಮೆರಿಕ ಮತ್ತು ಭಾರತ ಅಫ್ಘಾನ್​ ಯುವಕರ ಬೆಂಬಲಕ್ಕೆ ನಿಲ್ಲುತ್ತಿದ್ದವು ಎಂಬ ಭರವಸೆ ಇತ್ತು. ಆದರೀಗ ಸ್ವತಃ ಅಧ್ಯಕ್ಷ ಅಶ್ರಫ್​ ಘನಿಯೇ ಓಡಿಹೋಗಿದ್ದಾರೆ. ಈಗ ನಮಗೆ ಯಾವುದೇ ಭರವಸೆ ಉಳಿದಿಲ್ಲ. ನಮ್ಮ ಇಡೀ ಜೀವನವನ್ನು ನಿರಾಶ್ರಿತರಾಗಿಯೇ ಕಳೆಯಬೇಕು ಎಂದು ನಾವೇದ್​ ತಿಳಿಸಿದ್ದಾರೆ.

Source: tv9 Kannada