ಕರ್ನಾಟಕದ ಐಪಿಎಲ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌..?

Feb 27, 2021

ನವದೆಹಲಿ(ಫೆ.27): 2021ರ ಐಪಿಎಲ್‌ ಟಿ20 ಟೂರ್ನಿಗೆ ಇನ್ನು ಕೇವಲ ಒಂದೂವರೆ ತಿಂಗಳು ಮಾತ್ರ ಬಾಕಿ ಇದ್ದು, ಲೀಗ್‌ ಹಂತದ ಪಂದ್ಯಗಳನ್ನು ಬೆಂಗಳೂರು ಸೇರಿ 4-5 ನಗರಗಳಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಫೈನಲ್‌ ಸೇರಿ ಪ್ಲೇ-ಆಫ್‌ ಹಂತದ ಎಲ್ಲಾ ಪಂದ್ಯಗಳಿಗೆ ಅಹಮದಾಬಾದ್‌ ಆತಿಥ್ಯ ವಹಿಸುವುದು ಬಹುತೇಕ ಖಚಿತ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಮೊದಲು ಮುಂಬೈನ 4 ಹಾಗೂ ಪುಣೆ ಕ್ರೀಡಾಂಗಣದಲ್ಲಿ ಲೀಗ್‌ ಹಂತವನ್ನು ನಡೆಸಲು ಬಿಸಿಸಿಐ ಯೋಜನೆ ರೂಪಿಸಿತ್ತು. ಆದರೆ ಕಳೆದ ಕೆಲ ದಿನಗಳಿಂದ ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಪರ್ಯಾಯ ಮಾರ್ಗ ಹುಡುಕುತ್ತಿದೆ.

ಮುಷ್ತಾಕ್‌ ಅಲಿ ಟಿ20, ಇಂಗ್ಲೆಂಡ್‌ ವಿರುದ್ಧದ ಸರಣಿ, ವಿಜಯ್‌ ಹಜಾರೆ ಏಕದಿನ ಟೂರ್ನಿ, ಮಹಿಳಾ ರಾಷ್ಟ್ರೀಯ ಏಕದಿನ ಟೂರ್ನಿ ಸೇರಿದಂತೆ ದೇಸಿ ಟೂರ್ನಿಗಳನ್ನು ಯಶಸ್ವಿಯಾಗಿ ಬಯೋ ಬಬಲ್‌ನಲ್ಲಿ ನಡೆಸುತ್ತಿರುವ ಬಿಸಿಸಿಐ, ಐಪಿಎಲ್‌ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸುವ ಆಯ್ಕೆಯನ್ನು ಕೈಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

Source: Suvarna News