ಎಸ್​ಪಿಜಿ ಅನುಮತಿ ಕೊಟ್ಟರೆ ಬೆಂಗಳೂರು-ಮೈಸೂರು ಹೈವೇಯಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಪ್ರತಾಪ್ ಸಿಂಹ

Mar 2, 2023

 
 

ಮಾರ್ಚ್​ 12ರಂದು ಬೆಂಗಳೂರು-ಮೈಸೂರು ಹೈವೇಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದು, ಎಸ್​ಪಿಜಿ ಅನುಮತಿ ಕೊಟ್ಟರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರು: ಮಾರ್ಚ್​ 12ರಂದು ಬೆಂಗಳೂರು-ಮೈಸೂರು ಹೈವೇಯನ್ನು (Bengaluru-Mysuru Highway) ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಎಸ್​ಪಿಜಿ ಅನುಮತಿ ಕೊಟ್ಟರೆ ಹೈವೇಯಲ್ಲಿ ರೋಡ್ ಶೋ ಮಾಡ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಒಟ್ಟು 2 ಕಿಲೋ ಮೀಟರ್​ ರೋಡ್ ಶೋ ನಡೆಸಲು ಉದ್ದೇಶಿಸಿದ್ದೇವೆ. ಬಳಿಕ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಬೃಹತ್​ ಸಮಾವೇಶ ನಡೆಯುತ್ತದೆ ಎಂದರು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಸುಮಾರು 3,500 ಕೋಟಿ ವೆಚ್ಚದಲ್ಲಿ 115 ಕಿ.ಮೀ. ಹೈವೇ ನಿರ್ಮಾಣ ಮಾಡಲಾಗಿದೆ. ಎಕ್ಸ್‌ಪ್ರೆಸ್‌ವೇಗೆ ಕಾವೇರಿ ಎಕ್ಸ್‌ಪ್ರೆಸ್‌ವೇ ಎಂದು ಹೆಸರಿಸುವಂತೆ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದರು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿಚಾರ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ಟೋಲ್ ಸಂಗ್ರಹವನ್ನು ಮಾರ್ಚ್ 14ರವರೆಗೆ ಮುಂದೂಡಿದ್ದೇವೆ. ಬೆಂಗಳೂರು-ನಿಡಘಟ್ಟವರೆಗೂ ಟೋಲ್ ಸಂಗ್ರಹ ಮಾಡಲಾಗುತ್ತದೆ. ಸರ್ವಿಸ್ ರಸ್ತೆ ಪೂರ್ಣಗೊಳ್ಳಲು ಜಮೀನು ಕುರಿತ ಕೇಸ್​​ ಬಾಕಿ ಇದೆ‌. ಕೋರ್ಟ್​​ನಲ್ಲಿ ತೀರ್ಮಾನವಾದ ಮೇಲೆ ಸರ್ವಿಸ್ ರಸ್ತೆ ಸಹ ಆರಂಭಿಸುವುದಾಗಿ ಪ್ರತಾಪ್​ ಸಿಂಹ ಹೇಳಿದರು.

ಬೆಂಗಳೂರಿನಿಂದ ನಿಡಘಟ್ಟವರೆಗಿನ 56-ಕಿಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಬಳಸುವ ವಾಹನಗಳ ಟೋಲ್ ದರಗಳ ಮಾಹಿತಿಯನ್ನು NHAI ಅಧಿಕಾರಿಗಳು ತಿಳಿಸಿದ್ದಾರೆ. ಕಾರುಗಳು ಮತ್ತು ಇತರ ಲಘು ಮೋಟಾರು ವಾಹನಗಳ ಏಕಮುಖ ಸಂಚಾರಕ್ಕೆ 135 ರೂ. ಪಾವತಿಸಬೇಕಾಗುತ್ತದೆ. ಬಸ್‌ಗಳು 460 ರೂ. ಮತ್ತು ಭಾರೀ ಮೋಟಾರು ವಾಹನಗಳು 750-900 ರೂ.ಗಳ ನಡುವೆ ಪಾವತಿಸಬೇಕಾಗಬಹುದು ಎಂದು NHAI ಅಧಿಕಾರಿಗಳು ತಿಳಿಸಿದ್ದರು. ಮೇಲಧಿಕಾರಿಗಳಿಂದ ಅನುಮೋದನೆ ಪಡೆದು ಉದ್ಘಾಟನೆಗೂ ಮುನ್ನ ಟೋಲ್ ದರದ ಬಗ್ಗೆ ಅಧಿಕೃತ ಸೂಚನೆ ಹೊರಡಿಸಲಾಗುವುದು ಎಂದು NHAI ಅಧಿಕಾರಿಗಳು ತಿಳಿಸಿದ್ದರು.

ಬೆಂಗಳೂರು-ಮೈಸೂರು ನಡುವಿನ ಹೈವೇಯಲ್ಲಿ ಚನ್ನಪಟ್ಟಣದ ಬಳಿ 30 ಎಕರೆಯಲ್ಲಿ ಐಲ್ಯಾಂಡ್ ರೂಪದಲ್ಲಿ ರೆಸ್ಟ್ ಏರಿಯಾ ನಿರ್ಮಾಣ ಮಾಡಲಾಗುತ್ತಿದೆ. ಎಲ್ಲ ಬಗೆಯ ಹೋಟೆಳ್​ಗಳು ಇರಲಿವೆ. ನಾಡಿನ ಬ್ರ್ಯಾಂಡ್ ಪದಾರ್ಥಗಳ ಮಾರಾಟವು ಇರುತ್ತದೆ. 6 ತಿಂಗಳಲ್ಲಿ ಈ ರೆಸ್ಟ್ ಏರಿಯಾ ನಿರ್ಮಾಣವಾಗಲಿದೆ. ಬೆಂಗಳೂರಿನ ನೈಸ್ ಪ್ರವೇಶದ್ವಾರದಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್‌ವರೆಗೆ 117 ಕಿಮೀ ಉದ್ದದ 10 ಪಥಗಳ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿವೃದ್ಧಿಪಡಿಸಿದೆ. ಈ ಹೆದ್ದಾರಿಯಿಂದಾಗಿ ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಸರಾಸರಿ ಮೂರು ಗಂಟೆಗಳಿಂದ ಕೇವಲ 90 ನಿಮಿಷಗಳಿಗೆ ಕಡಿತಗೊಳ್ಳಲಿದೆ.

Source: TV9KANNADA