ಅಭಿನಯ ಚಕ್ರವರ್ತಿಗೆ 50ನೇ ಹುಟ್ಟುಹಬ್ಬದ ಸಂಭ್ರಮ

Sep 2, 2021

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಇಂದು 50ನೇ ಹುಟ್ಟುಹಬ್ಬದ ಸಂಭ್ರಮ. ಸ್ಪರ್ಶ ಸಿನಿಮಾದಲ್ಲಿ ನಾಯಕ ನಟನಾಗಿ ಚಂದನವನಕ್ಕೆ ಪಾದರ್ಪಣೆ ಮಾಡಿದ ಕಿಚ್ಚ ಸುದೀಪ್ ಸದ್ಯ ಬಹುಭಾಷಾ ನಟರಾಗಿ ಮಿಂಚುತ್ತಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿರುವ ಸುದೀಪ್‍ರವರು ಮಂಜಪ್ಪ ಮತ್ತು ಸರೋಜ ದಂಪತಿಯ ಪುತ್ರ. ಸುದೀಪ್‍ರವರು ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2003ರಲ್ಲಿ ಸುದೀಪ್‍ರವರು ತಮ್ಮ ಗೆಳತಿ ಪ್ರಿಯಾ ಜೊತೆ ಸಪ್ತಪದಿ ತುಳಿದರು. ಸದ್ಯ ಈ ಮುದ್ದಾದ ಜೋಡಿಗೆ ಇದೀಗ ಸಾನ್ವಿ ಎಂಬ ಪುತ್ರಿ ಇದ್ದಾರೆ.

ಸುದೀಪ್‍ರವರಿಗೆ ಮೊದಲಿನಿಂದಲೂ ಕ್ರಿಕೆಟಿಗನಾಗಬೇಕೆಂಬ ಆಸೆ ಇತ್ತು. ಆದರೆ ಸುದೀಪ್ ಮುಖಮಾಡಿದ್ದು, ಮಾತ್ರ ಚಿತ್ರರಂಗದ ಕಡೆ. ಕನ್ನಡ ಚಿತ್ರರಂಗವು ಇಷ್ಟು ಎತ್ತರಕ್ಕೆ ಬೆಳಸಲು ಶ್ರಮಿಸಿದ ಹಲವಾರು ನಟರ ಮಧ್ಯೆ ಸುದೀಪ್ ಕೂಡ ಒಬ್ಬರು. ತಮ್ಮ ಸಿನಿ ಜರ್ನಿಯಲ್ಲಿ ಸಾಕಷ್ಟು ಏಳು ಹಾಗೂ ಬೀಳುಗಳನ್ನು ಕಂಡರೂ ಸುದೀಪ್ ಇದೀಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಾ, ಎಲ್ಲೆಡೆ ಕನ್ನಡಿಗರ ಪ್ರತಿಭೆಯನ್ನು ಬಿಂಬಿಸುತ್ತಿದ್ದಾರೆ.

ತಾಯವ್ವ ಸಿನಿಮಾದ ಮೂಲಕ ಪೋಷಕ ಪಾತ್ರಧಾರಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಸುದೀಪ್, ಮೊದಲ ಬಾರಿಗೆ ನಟರಾಗಿ ಅಭಿನಯಿಸಿದ ಸಿನಿಮಾ ಸ್ಪರ್ಶ(2000), ಆದರೆ ಸುದೀಪ್ ಜೀವನ ದಿಕ್ಕನ್ನೇ ಬದಲಿಸಿದ ಸಿನಿಮಾ ಹುಚ್ಚ. ಹುಚ್ಚ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಎಂದೇ ಜನಪ್ರಿಯರಾದ ಸುದೀಪ್, ಈವರೆಗೂ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡದಲ್ಲಿ ಈವರೆಗೂ 48, ಹಿಂದಿಯಲ್ಲಿ 7, ತೆಲುಗಿನಲ್ಲಿ 3, ತಮಿಳಿನ ಒಂದು ಸಿನಿಮಾದಲ್ಲಿ ಸುದೀಪ್ ಬಣ್ಣಹಚ್ಚಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟರಾಗಿ ಮಾತ್ರವಲ್ಲದೇ ನಿರ್ದೇಶಕ, ನಿರ್ಮಾಪಕ, ಕಥೆ, ಚಿತ್ರಕಥೆಗಾರ, ವಿತರಕ, ಬಿಗ್ ಬಾಸ್ ನಿರೂಪಕ ಮತ್ತು ಹಿನ್ನೆಲೆ ಗಾಯಕರಾಗಿ ಸುದೀಪ್‍ರವರು ಕನ್ನಡ ಭಾಷೆಯ ಚಲನಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

ಹುಚ್ಚ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗಾಗಿ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ. 2013 ರಿಂದ ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್‍ನಲ್ಲಿ ಕನ್ನಡದ ನಿರೂಪಕರಾಗಿದ್ದಾರೆ. ತೆಲುಗಿನ ‘ಈಗ’ ಸಿನಿಮಾದ ಮೂಲಕ ಟಾಲಿವುಡ್‍ಗೆ ಎಂಟ್ರಿ ಕೊಟ್ಟ ಸುದೀಪ್, ತಮ್ಮ ಮೊದಲ ಸಿನಿಮಾದಲ್ಲಿಯೇ ಟಾಲಿವುಡ್ ಪ್ರೇಕ್ಷಕರ ಮನಗೆಲ್ಲುವ ಮೂಲಕ ಸೈ ಎನಿಸಿಕೊಂಡರು. ನಂತರ ಬಾಹುಬಲಿ ಪ್ರಭಾಸ್, ಚಿರಂಜೀವಿ ಅಷ್ಟೇ ಅಲ್ಲದೇ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆಗೂ ಸ್ಕ್ರೀನ್ ಶೇರ್ ಮಾಡಿದ್ದಾರೆ.

ಸದ್ಯ ದಕ್ಷಿಣ ಭಾರತದ ಬ್ಯುಸಿಯೆಸ್ಟ್ ನಟರಾಗಿ ಮಿಂಚುತ್ತಿರುವ ಸುದೀಪ್ ಈವರೆಗೂ ಫಿಲ್ಮ್ ಫೇರ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ನಂದಿ ಪ್ರಶಸ್ತಿ ಸೇರಿದಂತೆ ಹಲವರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

Source:PublicTvkannada